ಬೆಂಗಳೂರು: ನೀರಿನ ಸಂಪ್ ಗೆ ಬಿದ್ದು ಒಂದುವರೆ ವರ್ಷದ ಮಗು ಸಾವು
ಬೆಂಗಳೂರು: ನೀರಿನ ಸಂಪ್ ಗೆ ಬಿದ್ದು ಒಂದುವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೆಆರ್ ಪುರಂನ ಕನ್ಯಾನಗರದ ಬಸವಪ್ರಭು ವಾರ್ಡ್ನ ಸಾಯಿ ಸೆರಿನಿಟಿ ಲೇಔಟ್ನಲ್ಲಿ ಬುಧವಾರ ನಡೆದಿದೆ.
ಮೃತ ಮಗುವನ್ನು ಶಂಭು ( 1.5 ವರ್ಷ) ಎಂದು ಗುರ್ತಿಸಲಾಗಿದೆ. ನೇಪಾಳ ಮೂಲಕ ಪ್ರಕಾಶ್ ಎಂಬುವವರ ಮಗು ಆಟವಾಡುತ್ತಾ ನೀರಿನ ಸಂಪ್'ಗೆ ಬಿದ್ದು, ದುರ್ಘಟನೆ ಸಂಭವಿಸಿದೆ.
ಮಗುವಿನ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮಗುವನ್ನು ಆಟವಾಡಲು ಬಿಟ್ಟು, ಕೆಲಸ ಮಾಡುತ್ತಿದ್ದರು. ಸ್ಥಳೀಯ ನಿವಾಸಿಯೊಬ್ಬರು ಕೂಲಿ ಕಾರ್ಮಿಕರಿಗೆ ಸಿಹಿ ನೀಡಲು ಬಂದಾಗ ಪೋಷಕರು ಕಣ್ಮೀರಿಡುತ್ತಿರುವುದು ಕಂಡುಬಂದಿದೆ. ಬಳಿಕ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಟ್ಟಡ ಜಯರಾಮ್ ನಾಯ್ಡು ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಆವಲಹಳ್ಳಿ ಪೊಲೀಸರು ಸ್ಥಳ ಮೇಲ್ವಿಚಾರಕ ಸುಬ್ರಮಣಿ ಎಂಬುವವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ರವಾನಿಸಿದ್ದಾರೆ.
ಕಾರ್ಮಿಕರಿಗೆ ಯಾವುದೇ ವಸತಿಯನ್ನು ಕಲ್ಪಿಸಿರಲಿಲ್ಲ. ಕಟ್ಟಡದ ಆವರಣದಲ್ಲೇ ನೆಲೆಸಿದ್ದರು. ಲೇಔಟ್ನ ಖಾಲಿ ನಿವೇಶನಗಳನ್ನು ಶೌಚಾಲಯವಾಗಿ ಬಳಸುತ್ತಿದ್ದರು. ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆರೋಗ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯ ನಿವಾಸಿಗಳೂ ದೂರಿದ್ದಾರೆ.
ಘಟನೆಯ ಕುರಿತು ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ