ಬೆಂಗಳೂರು: ಇಬ್ಬರು ಮಕ್ಕಳ ಹತ್ಯೆ! ಪತ್ನಿ ವಿರುದ್ಧ ಪತಿಯ ಆರೋಪ
ಬೆಂಗಳೂರು: ನಗರದ ಸುಬ್ರಹ್ಮಣ್ಯಪುರದ ಮನೆಯೊಂದರಲ್ಲಿ ಇಬ್ಬರು ಮಕ್ಕಳ ಹತ್ಯೆಯಾಗಿದೆ. ಹಗ್ಗದಿಂದ ಕುತ್ತಿಗೆ ಬಿಗಿದು ಶುಭಂ (7) ಮತ್ತು ಸಿಯಾ ಹತ್ಯೆ ಮಾಡಿರುವ ಆರೋಪ ಕೇಳಿಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ವೈವಾಹಿಕ ವಿವಾದದಿಂದಾಗಿ ತನ್ನ ಪತ್ನಿ ಮಮತಾ ಮಕ್ಕಳನ್ನು ಹತ್ಯೆ ಮಾಡಿದ್ದಾಳೆ ಎಂದು ಕೊಲೆಯಾದ ಮಕ್ಕಳ ತಂದೆ ಸುನೀಲ್ ಕುಮಾರ್ ಸಾಹೋ ಆರೋಪಿಸಿದ್ದಾರೆ. ಜಾರ್ಖಂಡ್ ಮೂಲಕ ಸಾಹೋ ಗುರುವಾರ ರಾತ್ರಿ 9-30ಕ್ಕೆ ಮನೆಗೆ ವಾಪಸ್ಸಾದಾಗ ಮಕ್ಕಳ ಮೃತದೇಹ ಕಂಡುಬಂದಿದೆ.
ಕೂಡಲೇ ಅವರು ಮಕ್ಕಳು ಹಾಗೂ ಸ್ವಲ್ಪ ಕುತ್ತಿಗೆ ಗಾಯವಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ದಾಂಪತ್ಯ ವಿವಾದದಿಂದ ಹತಾಶೆಗೊಂಡು ತನ್ನ ಪತ್ನಿಯೇ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎಂದು ಸಾಹೋ ದೂರಿನಲ್ಲಿ ಆರೋಪಿಸಿದ್ದಾರೆ.
ಆದರೆ, ಕೊಲೆ ಆರೋಪವನ್ನು ಮಮತಾ ನಿರಾಕರಿಸಿದ್ದಾರೆ. ಕೊಲೆ ನಡೆದಾಗ ಮಮತಾ ಮನೆಯಲ್ಲಿ ಇದ್ದರು ಎಂಬುದು ಗೊತ್ತಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಘಟನೆ ನಡೆದಾಗ ತಂದೆ ಮನೆಯಲ್ಲಿ ಇರಲಿಲ್ಲ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಮಕ್ಕಳನ್ನು ಹಗ್ಗದಿಂದ ಬಿಗಿದು ಸಾಯಿಸಿರುವುದು ತಿಳಿದುಬಂದಿದೆ. ಕೊಲೆಗೆ ಯಾರು ಕಾರಣರು ಎಂಬುದಕ್ಕೆ ತಂದೆ- ತಾಯಿ ಹೇಳಿಕೆಗಳು ಸರಿಯಾದ ಸಾಕ್ಷಿಯಾಗಿ ಕಂಡುಬಂದಿಲ್ಲ. ಕೊಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ( ದಕ್ಷಿಣ) ಲೋಕೇಶ್ ಬಿ ಜಗಲಸರ್ ಹೇಳಿದ್ದಾರೆ.
ಪ್ರಕರಣದ ತನಿಖೆ ಮುಂದುವರೆದಿದೆ. ಮಕ್ಕಳ ತಾಯಿಯ ಕುತ್ತಿಗೆಯಲ್ಲಿ ಸಣ್ಣ ಪ್ರಮಾಣದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಕ್ಕೆ ಆತ್ಮಹತ್ಯೆ ಯತ್ನನಾ ಅಥವಾ ಬೇರೆಯವರು ಕಾರಣನಾ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ದಾಂಪತ್ಯ ವಿವಾದದಿಂದ ಕೊಲೆ ನಡೆದಿರಬಹುದೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದಾಗ್ಯೂ, ತನಿಖೆ ಮುಂದುವರೆದಿದೆ. ಎಲ್ಲಾ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಜಗಲಸರ್ ತಿಳಿಸಿದರು.
ಘಟನೆ ಕುರಿತು ಮುಂದಿನ ತನಿಖೆಗೆ ತಾಂತ್ರಿಕ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮಕ್ಕಳ ತಾಯಿ ಇನ್ನೂ ಆಸ್ಪತ್ರೆಯಲ್ಲಿರುವುದರಿಂದ ಯಾರನ್ನೂ ಬಂಧಿಸಿಲ್ಲ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ