
ಬೆಂಗಳೂರು: ಸಾವಯವ ಬೆಳ್ಳುಳ್ಳಿಯೊಂದಿಗೆ ನಿಷೇಧಿತ ಚೀನಾ ಬೆಳ್ಳುಳ್ಳಿಯನ್ನು ಬೆರೆಸಿ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪರಿಶೀಲನೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.
ಚೀನಾದ ಬೆಳ್ಳುಳ್ಳಿಯಲ್ಲಿ ರಸಾಯನಿಕ ಅಂಶ ಹೆಚ್ಚಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಬೆಳ್ಳುಳ್ಳಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಆದರೂ ಮಾರುಕಟ್ಟೆಗಳಲ್ಲಿ ಸಾವಯವ ಬೆಳ್ಳುಳ್ಳಿಗಳೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿರುವುದಾಗಿ ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಿದ್ದಾರೆ.
ಚೀನಾದಲ್ಲಿ ಬೆಳ್ಳುಳ್ಳಿಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಈ ಬೆಳ್ಳುಳ್ಳಿ ಮಾರುಕಟ್ಟೆಗೆ ಬಂದಾಗ ಮೊಳಕೆ ಬರದಂತೆ ತಡೆಯಲು ರಾಸಾಯನಿಕವನ್ನು ಸಿಂಪಡಣೆ ಮಾಡಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿವೆ ಎನ್ನಲಾಗಿದೆ.
ಚೀನಾದ ಬೆಳ್ಳುಳ್ಳಿಯಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಯಕೃತ್ತಿನ ಹಾನಿ, ಜಠರಗರುಳಿನ ಸಮಸ್ಯೆ, ರೋಗನಿರೋಧಕ ಶಕ್ತಿ ಕುಗ್ಗುವ ಸಮಸ್ಯೆಗಳು ಕಂಡು ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು ಕೇವಲ ಬೆಳ್ಳುಳ್ಳಿಯಷ್ಟೇ ಅಲ್ಲದೆ, ಸಿಹಿ ತಿಂಡಿಗಳ ಮಾದರಿಗಳನ್ನೂ ಕೂಡ ಪರಿಶೀಲನೆಗೆ ಮುಂದಾಗಿದ್ದಾರೆ. ದಸರಾ ಹಬ್ಬದ ಸಂದರ್ಭದಲ್ಲಿ ಸಿಹಿ ತಿಂಡಿಗಳ ಮಾರಾಟ ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.
ತಪಾಸಣೆ ವೇಳೆ ರಾಜ್ಯ ಹಾಗೂ ನಗರದ ಕೆಲ ಪ್ರತಿಷ್ಟಿತ ಅಂಗಡಿಗಳಲ್ಲಿಯೂ ನಿಯಮಗಳ ಉಲ್ಲಂಘನೆ ಕಂಡು ಬಂದಿದೆ. ಬಣ್ಣಗಳನ್ನು ಹೆಚ್ಚಾಗಿ ಬಳಕೆ ಮಾಡಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಅಧಿಕಾರಿಗಳು ಕೇಕ್ ಸ್ಯಾಂಪಲ್ ಸಂಗ್ರಹಿಸಿದ್ದ ಅಧಿಕಾರಿಗಳು, ಪರಿಶೀಲನೆಗೆ ಪ್ರಯೋಗಾಲಯಕ್ಕೆ ರವಾನಿಸಿದ್ದರು. ವರದಿಯಲ್ಲಿ ಕೇಕ್ ಗಳಲ್ಲಿ ಕ್ಯಾನ್ಸರ್ಕಾರಕ ಅಂಶಗಳಿರುವುದು ಪತ್ತೆಯಾಗಿತ್ತು.
ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ ಅವರು ಮಾತನಾಡಿ, ಕೇಕ್ ಮಾದರಿಗಳ ತಪಾಸಣೆಯಲ್ಲಿ Allura Red, Sunset Yellow FCF, Ponceau 4R, Tartrazine ಎಂಬ ಅಂಶಗಳು ಪತ್ತೆಯಾಗಿದ್ದು, ಇವೆಲ್ಲಾ ಕ್ಯಾನ್ಸರ್ಕಾರಕ ಅಂಶಗಳಾಗಿವೆ, ಅಲ್ಲದೆ ಈ ರಾಶಾಯನಿಕಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಾಸಾಯನಿಕ ತುಂಬಿದ ಒಂದು ಸ್ಲೈಸ್ ಕೇಸ್ ತಿನ್ನುವುದು, ವರ್ಷವಿಡೀ ಕೇಸ್ ತಿನ್ನುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.
ತಿರುಪತಿ ಲಡ್ಡು ಪ್ರಕರಣದ ಬಳಿಕ ಇಲಾಖೆ ಇತ್ತೀಚೆಗಷ್ಟೇ ರಾಜ್ಯದಲ್ಲಿ ಮಾರಾಟವಾಗುತ್ತಿರುವ ತುಪ್ಪದ ಮಾದರಿಗಳನ್ನು ಸಂಗ್ರಹಿಸಿತ್ತು. ಈವರೆಗೂ ಬಂದಿರುವ ವರದಿಗಳು ಸುರಕ್ಷಿತವೆಂದೇ ತಿಳಿಸಿದೆ. ಇದೀಗ ವಿವರವಾದ ವರದಿಗಾಗಿ ಕಾಯುತ್ತಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement