ಬೆಂಗಳೂರು: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ, ಲಾರಿ ಚಾಲಕ ಹತ್ಯೆ!
ಬೆಂಗಳೂರು: ಟಿಪ್ಪರ್ ಲಾರಿ ಚಾಲಕನ ಕೊಲೆ ರಹಸ್ಯವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದು, ಪ್ರಕರಣ ಸಂಬಂಧ ವಿವಾಹಿತ ದಂಪತಿ ಸೇರಿ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಗೇಂದ್ರ ಕುಮಾರ್ @ನಾಗ (27), ಖೈಸರ್ ಪಾಷ(30), ರುಬೀಯ(26) ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ.
ಚಿಕ್ಕಬಳ್ಳಾಪುರದ ಎಸ್.ದೇವಗಾನಹಳ್ಳಿಯ ಶ್ರೀನಿವಾಸ್ ಎಂಬಾತನನ್ನು ಹುಸ್ಕೂರು ಕ್ರಾಸ್ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರ ತನಿಖೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್.ದೇವಗಾನಹಳ್ಳಿಯ ಮಂಜುಳ ಎಂಬಾಕೆ ಮದುವೆ ಆಗಿ ಮಗು ಇದ್ದರೂ, ಶ್ರೀನಿವಾಸ್ ಹಾಗೂ ನಾಗೇಂದ್ರ ಇಬ್ಬರೊಟ್ಟಿಗೂ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ವಿಷಯವು ಶ್ರೀನಿವಾಸ್ಗೆ ತಿಳಿದು ಪ್ರಶ್ನೆ ಮಾಡಲು ಪ್ರಾರಂಭಿಸಿದ್ದ. ಇದಾಗ ಬಳಿಕ ಮಂಜಳಾ ಈತನಿಂದ ದೂರಾಗಲು ಪ್ರಯತ್ನಿಸಿದ್ದಳು. ಇದರಿಂಂದ ಸಿಟ್ಟಿಗೆದ್ದು ಮಂಜುಳಗೆ ಹೊಡೆದಿದ್ದ. ಶ್ರೀನಿವಾಸ್ ಹಲ್ಲೆ ಮಾಡಿದ್ದ ವಿಚಾರವನ್ನು ಮಂಜುಳಾ ನಾಗೇಂದ್ರನಿಗೆ ಹೇಳಿದ್ದಳು.
ಇದು ನಾಗೇಂದ್ರನನ್ನು ಕೆರಳಿಸಿ, ಹತ್ಯೆ ಮಾಡುವ ಹಂತಕ್ಕೆ ತಲುಪಿತ್ತು. ಇದಕ್ಕಾಗಿ ಪ್ಲ್ಯಾನ್ ಮಾಡಿಕೊಂಡ ನಾಗೇಂದ್ರ, ಹುಸ್ಕೂರು ಕ್ರಾಸ್ ಬಳಿ ತನಗೆ ಪರಿಚಯವಿದ್ದ ದಂಪತಿ ಖೈಸರ್ ಪಾಷ್, ರುಬಿಯಾ ಜತೆಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ.
ತಮ್ಮ ಯೋಜನೆಯಂತೆ ರುಬಿಯಾ ದೀಪಾ ಎಂಬ ಹೆಸರಿನೊಂದಿಗೆ ಶ್ರೀನಿವಾಸ್'ಗೆ ಕರೆ ಮಾಡಿದ್ದಾಳೆ. ಬಳಿಕ ಶ್ರೀನಿವಾಸ್ ಜೊತೆಗೆ ಸ್ನೇಹ ಬೆಳೆಸಿ, ಭೇಟಿಯಾಗುವಂತೆ ತಿಳಿಸಿದ್ದಾಳೆ. ಇದಕ್ಕೆ ಒಪ್ಪಿದ್ದ ಶ್ರೀನಿವಾಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಸನಪುರದ ಎಪಿಎಂಸಿ ಮಾರುಕಟ್ಟೆ ಬಳಿ ಭೇಟಿಯಾಗುವುದಾಗಿ ತಿಳಿಸಿದ್ದಾನೆ. ಫೆಬ್ರವರಿ 2 ರಂದು ಶ್ರೀನಿವಾಸ್ ಮಧ್ಯರಾತ್ರಿ 1.30 ರ ಸುಮಾರಿಗೆ ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾನೆ. ಈ ವೇಳೆ ಪಾಷಾ ಹಾಗೂ ನಾಗೇಂದ್ರ ಸ್ಥಳಕ್ಕೆ ಬರುವವರೆಗೂ ಮಾತನಾಡುತ್ತಲೇ ರುಬಿಯಾ ನಿಲ್ಲಿಸಿಕೊಂಡಿದ್ದಾರೆ. ಬಳಿಕ ಪಾಷಾ ಮತ್ತು ನಾಗೇಂದ್ರ ಕದ್ದ ಆಟೋದಲ್ಲಿ ಹಿಂದಿನಿಂದ ಬಂದಿದ್ದು, ಶ್ರೀನಿವಾಸ್ ನನ್ನು ಎಳೆದುಕೊಂಡು ಹೋಗಿ ಸಾಯುವವರೆಗೂ ಥಳಿಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ನಡುವೆ ಶ್ರೀನಿವಾಸ್ ಚಾಲನೆ ಮಾಡುತ್ತಿದ್ದ ಲಾರಿ ಮಾಲೀಕ ಮಂಜುನಾಥ್ ರೆಡ್ಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು.
ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಪಾಷಾ ಹಾಗೂ ರುಬಿಯಾ ಸುಳ್ಳು ಹೇಳಿಕೆಗಳನ್ನು ನೀಡಿ ದಾರಿ ತಪ್ಪಿಸುತ್ತಿದ್ದರು. ಹಣಕಾಸಿನ ವಿಚಾರಕ್ಕೆ ಅಪರಿಚಿತ ವ್ಯಕ್ತಿಗಳು ಗಲಾಟೆ ಮಾಡಿ ಕೊಲೆಗೈದಿದ್ದಾರೆ ಎಂದಿದ್ದರು. ಆದರೆ, ಕೊಲೆಗೂ ಮುನ್ನ ರುಬಿಯಾ ಶ್ರೀನಿವಾಸ್ಗೆ 26 ಬಾರಿ ಫೋನ್ ಮಾಡಿದ್ದಳು. ಇದರ ಜಾಡು ಹಿಡಿದ ಪೊಲೀಸರು ಮೊಬೈಲ್ ಲೋಕೇಷನ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಈ ಮೂವರು ಆರೋಪಿಗಳು ಹಿಂದೊಮ್ಮೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಆರೋಪಿ (ಎ1) ನಾಗೇಂದ್ರ ಕುಮಾರ್ ಮೇಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಇನ್ನೂ ಎ2 ಆರೋಪಿ ಖೈಸರ್ ಪಾಷನ ಮೇಲೆ ಬೆಂಗಳೂರು ನಗರದ ಅಶೋಕ ನಗರ, ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಮನೆಗಳವು ಸೇರಿದಂತೆ ಒಟ್ಟು16 ಪ್ರಕರಣಗಳು ದಾಖಲಾಗಿದೆ. ಖೈಸರ್ ಅಶೋಕನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಬಂಧಿಯಾಗಿದ್ದು, ಹೆಚ್ಚಿನ ವಿಚಾರಣೆಯನ್ನು ಮುಂದುವರಿಸಿದ್ದಾರೆ.