ನಾಲ್ಕು ವರ್ಷದ ಮಗು ಹತ್ಯೆ ಪ್ರಕರಣ: ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ವಶಕ್ಕೆ!

ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ಹಾಗೂ ಬ್ಯಾಗ್ ನಲ್ಲಿದ್ದ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಸುಚನಾ ಸೇಠ್
ಸುಚನಾ ಸೇಠ್
Updated on

ಬೆಂಗಳೂರು/ಪಣಜಿ: ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ಹಾಗೂ ಬ್ಯಾಗ್ ನಲ್ಲಿದ್ದ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸುಚನಾ ಸೇಠ್ ಮಾನಸಿಕ ಸ್ಥಿತಿಯ ಕುರಿತು ಹಲವು ಪ್ರಶ್ನೆಗಳು ಮೂಡತೊಡಗಿದ್ದು, ಈ ಬಗ್ಗೆ ಪರೀಕ್ಷೆ ನಡೆಸಿರುವ ಮನೋವೈದ್ಯರು ಯಾವುದೇ ಮಾಹಿತಿಗಳನ್ನೂ ಬಹಿರಂಗಪಡಿಸಿಲ್ಲ.

ಗುರುವಾರ ಗೋವಾ ಪೊಲೀಸರು ಸುಚನಾಳನ್ನು ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದು, ವೈದ್ಯರು ಪರೀಕ್ಷೆ ನಡೆಸಿದ್ದಾರೆ.

ಈ ನಡುವೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಆರೋಪಿ ನೆಲೆಸಿದ್ದ ಹೋಟೆಲ್ ರೂಮ್ ನಲ್ಲಿ (ಅಪರಾಧ ನಡೆದ ಸ್ಥಳ) ಚಾಕು ಹಾಗೂ ಬ್ಯಾಗ್ ನಲ್ಲಿ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆ ವೇಳೆ ಸುಚನಾ ಮಲಗಿದ್ದಾಗ ಮಗು ಸಾವನ್ನಪ್ಪಿದೆ ಎಂದು ಹೇಳಿಕೊಂಡಿದ್ದು, ಒಂದು ವೇಳೆ ಮಗು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದರೆ, ಹೋಟೆಲ್ ಸಿಬ್ಬಂದಿ ಅಥವಾ ವೈದ್ಯರ ಸಹಾಯವನ್ನೇಕೆ ಕೇಳಲಿಲ್ಲ? ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿ, ಮಗು ಇದೆ ಎಂದು ಏಕೆ ಬಿಂಬಿಸಲಾಗಿತ್ತು ಎಂದು ಪೊಲೀಸರು ವಿಚಾರಣೆ ವೇಳೆ ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.

ಇನ್ನು ಬ್ಯಾಗ್ ನಲ್ಲಿ ಪತ್ತೆಯಾದ ಪತ್ರದಲ್ಲಿ ತನ್ನ ಅತ್ತೆ-ಮಾವಂದಿರು ತನಗೆ ನೀಡಿದ ಕಿರುಕುಳದ ಬಗ್ಗೆ ಬರೆದಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸುಚನಾ ಸಂಚಾರ ದಟ್ಟಣೆಯಿಂದಾಗಿ ಕ್ಯಾಬ್ ನಲ್ಲಿ 4 ಗಂಟೆಗಳ ಕಾಲ ಸಿಲುಕಿಕೊಂಡಿದ್ದಳು ಎಂಬ ವಿಚಾರ ಇದೀಗ ತಿಳಿದುಬಂದಿದೆ. ಒಂದು ವೇಳೆ ಕ್ಯಾಬ್ ನಲ್ಲಿ ಸಿಲುಕಿಕೊಳ್ಳದೇ ಹೋಗಿದ್ದರೆ, ಆಕೆ ಬೆಂಗಳೂರು ತಲುಪಿ ಬಿಡುತ್ತಿದ್ದಳು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಈ ಮಧ್ಯೆ, ಹೇಳಿಕೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಗೋವಾ ಪೊಲೀಸರು ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲಿದ್ದಾರೆಂದು ಎಂದು ಹೇಳಿದ್ದಾರೆ.

ಪ್ರಕರಣವನ್ನು ಭೇದಿಸುವ ಮೂಲಕ ಗೋವಾ ಪೊಲೀಸರು ಇಲ್ಲಿಯವರೆಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಡಿಸೆಂಬರ್‌ನಲ್ಲಿ ತಮ್ಮ ಮಗನನ್ನು ಭೇಟಿಯಾಗಲು ಸುಚನಾ ತನ್ನ ಪತಿ ವೆಂಕಟ್ ರಾಮನ್ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 7 ರಂದು ಗೋವಾದಲ್ಲಿದ್ದ ಸುಚನಾ ತನ್ನ ಗಂಡನ ವೀಡಿಯೊ ಕರೆಗೆ ಉತ್ತರಿಸಿದ್ದಳು. ಇದು ಮಗನೊಂದಿಗಿನ ರಾಮನ್ ಅವರು ಮಾತನಾಡಿದ್ದ ಕೊನೆಯ ಸಂಭಾಷಣೆಯಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com