ನಕಲಿ ಸರ್ಕಾರಿ ಇಮೇಲ್ ಐಡಿ ಸೃಷ್ಟಿಸಿ ಬ್ಯಾಂಕ್‌ಗೆ 1.32 ರೂ ಕೋಟಿ ವಂಚನೆ: ಮೂವರ ಬಂಧನ

ಕೆಲ ದಿನಗಳ ಹಿಂದೆ ನಕಲಿ ದಾಖಲೆ ಸಲ್ಲಿಸಿ ರೂ.30 ಲಕ್ಷ ಹಣ ವಂಚನೆ ಬಗ್ಗೆ ಹಲಸೂರಿನ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಂದ ದೂರು ಸಲ್ಲಿಕೆಯಾಗಿತ್ತು.
Cyber Crime
ಸೈಬರ್ ಅಪರಾಧ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ವಂಚನೆ ಸಂಬಂಧ ಮುಟ್ಟುಗೋಲು ಹಾಕಿದ್ದ ಬ್ಯಾಂಕ್ ಖಾತೆಗಳಿಂದ ಪೊಲೀಸರು ಹಾಗೂ ನ್ಯಾಯಾಲಯದ ಹೆಸರಿನಲ್ಲಿ ನಕಲಿ ಆದೇಶಗಳನ್ನು ಸೃಷ್ಟಿಸಿ 1.32 ಕೋಟಿ ರೂ.ಹಣ ದೋಚಿದ್ದ ಮೂವರು ವಂಚಕರನ್ನು ಪೊಲೀಸರು ಬಂಧನಕ್ಕೊಳಪಡಿಸಲಿದ್ದಾರೆ.

ಆರೋಪಿಗಳನ್ನು ದೆಹಲಿಯ ಅಭಿಮನ್ಯು ಕುಮಾರ್ ಪಾಂಡೆ, ನೀರಜ್ ಸಿಂಗ್ ಮತ್ತು ರಾಜಸ್ಥಾನದ ನಿವಾಸಿ ಸಾಗರ್ ಲಕುರಾ ಎಂದು ಗುರುತಿಸಲಾಗಿದೆ.

ಕೆಲ ದಿನಗಳ ಹಿಂದೆ ನಕಲಿ ದಾಖಲೆ ಸಲ್ಲಿಸಿ ರೂ.30 ಲಕ್ಷ ಹಣ ವಂಚನೆ ಬಗ್ಗೆ ಹಲಸೂರಿನ ಐಸಿಐಸಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಂದ ದೂರು ಸಲ್ಲಿಕೆಯಾಗಿತ್ತು.

ಈ ಬಗ್ಗೆ ತನಿಖೆಗಿಳಿದ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್‌ಹಜರೇಶ್ ಕಿಲ್ಲೇದಾರ್‌ ನೇತೃತ್ವದ ತಂಡವು, ಬ್ಯಾಂಕ್ ಖಾತೆ ಹಣ ವರ್ಗಾವಣೆ ವಿವರ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.

ರಾಜಸ್ಥಾನದ ತನ್ನೂರಿನಲ್ಲಿ ಪೋಟೋ ಸ್ಟುಡಿಯೋ ಇಟ್ಟಿದ್ದ ಸಾಗರ್, ವಿಪರೀತ ಬೆಟ್ಟಿಂಗ್ ವ್ಯಸನಿಯಾಗಿದ್ದ. ಬೆಟ್ಟಿಂಗ್ ಆ್ಯಪ್‌ನಲ್ಲಿ ಸಾಗರ್ ಖಾತೆ ಹೊಂದಿದ್ದ. ಕೆಲ ತಿಂಗಳ ಹಿಂದೆ ವಂಚನೆ ಆರೋಪದ ಮೇರೆಗೆ ಬೆಟ್ಟಿಂಗ್ ಆ್ಯಪ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆಗ ನ್ಯಾಯಾಲಯದ ಮೊರೆ ಹೋಗಿ ಜಪ್ತಿ ಖಾತೆ ಮುಕ್ತ ಗೊಳಿಸಿದ್ದ.

ಮುಟ್ಟು ಗೋಲು ಖಾತೆಗಳಿಂದ ಹಣ ಪಡೆಯುವ ಪ್ರಕ್ರಿಯೆ ತಿಳಿದ ಸಾಗರ್, ಪೊಲೀಸರ ಹೆಸರಲ್ಲಿ ಖಾತೆಗಳ ಬಗ್ಗೆ ಮಾಹಿತಿ ಪಡೆದು ಬಿಡುಗಡೆಗೆ ನ್ಯಾಯಾಲಯದ ಹೆಸರಿನಲ್ಲಿ ನಕಲಿ ಆದೇಶ ಸೃಷ್ಟಿಸಿ ಹಣ ದೋಚುತ್ತಿದ್ದ. ಇದೇ ರೀತಿ ಕರ್ನಾಟಕ, ಬಿಹಾರ, ಉತ್ತರಪ್ರದೇಶ ಹಾಗೂ ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ನಕಲಿ ಆದೇಶವನ್ನು ಬ್ಯಾಂಕ್ ಗಳಿಗೆ ಕಳುಹಿಸಿ ವಂಚನೆ ಯತ್ನಿಸಿದ್ದಾನೆ. ಕೆಲವು ಕಡೆ ಸಾಗರ್‌ನ ಸಂಚು ಯಶಸ್ಸು ಕಂಡಿತ್ತು.

Cyber Crime
ಸೈಬರ್ ಅಪರಾಧ ಕಡಿವಾಣಕ್ಕೆ ರಾಜ್ಯ ಸರ್ಕಾರ ಬದ್ಧ: ಸಚಿವ ಪರಮೇಶ್ವರ್‌

ಇದೇ ರೀತಿ ವಂಚನೆ ಕೃತ್ಯದಲ್ಲಿ ಆತನನ್ನು ಗುಜರಾತ್ ನ ಅಲಹದಾಬಾದ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಆಗಲೇ ಹಲಸೂರಿನ ಐಸಿಐಸಿಐ ಬ್ಯಾಂಕ್‌ಗೆ ಆತ ಕನ್ನ ಹಾಕಿದ್ದ. ಬ್ಯಾಂಕ್‌ಗಳಿಗೆ ರಾಜ್ಯ ಸರ್ಕಾರದ ಅಧಿಕಾರಿ ಹೆಸರಿನಲ್ಲಿ ಇಮೇಲ್ ಕಳುಹಿಸಿದ್ದ. ಇದಕ್ಕಾಗಿ ನಕಲಿ ಸೀಲು, ಸಹಿ ಸೃಷ್ಟಿಸಿ ಇ-ಗೌರ್ವನೆಸ್‌ ಗೆ (ಕೆ-ಸ್ವಾನ್) (ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್) ಇಮೇಲ್‌ನಲ್ಲಿ ಮನವಿ ಸಲ್ಲಿಸಿದ್ದ.

ಸರ್ಕಾರಿ ಅಧಿಕಾರಿ ಇರಬೇಕೆಂದು ಇಮೇಲ್ ಐಡಿ ಕೊಟ್ಟಿದ್ದರು. ಈ ಇಮೇಲ್ ಬಳಸಿ ಬ್ಯಾಂಕ್‌ನ ನೋಡಲ್ ಅಧಿಕಾರಿಗೆ ಚಿಕ್ಕಪೇಟೆ ಎಸ್ಪಿ ಹೆಸರಿನಲ್ಲಿ ಬೆಟ್ಟಿಂಗ್ ಆ್ಯಪ್ ಖಾತೆಯ ಹಣದ ವಿವರ ಪಡೆದಿದ್ದ. ಬಳಿಕ ಆ ಖಾತೆಯಿಂದ ಹಣ ಬಿಡುಗಡೆಗೆ ಮೈಸೂರಿನ ನ್ಯಾಯಾಲಯದ ಹೆಸರಿನಲ್ಲಿ ನಕಲಿ ಆದೇಶ ಕಳುಹಿಸಿದ್ದ. ತಮಗೆ ಕರೆ ಮಾಡಿದ್ದ ಹಾಗೂ ಆದೇಶದಲ್ಲಿನ ಮೊಬೈಲ್ ಸಂಖ್ಯೆ ಒಂದೇ ಆಗಿರುವ ಕಾರಣ ಪೊಲೀಸರೇ ಎಂದು ಬ್ಯಾಂಕ್‌ನವರನ್ನು ನಂಬಿಸಿದ್ದ. ಆಗ ಸಾಗರ್‌ ಸೂಚಿಸಿದ್ದ ಖಾತೆಗೆ 21.38 ಕೋಟಿ ಹಣ ವರ್ಗಾಯಿಸಿದ್ದರು.

2024ರ ಸೆ.19 ರಿಂದ 2025ರ ಫೆಬ್ರವರಿ 13 ವರೆರೆಗೆ 18 ಬಾರಿ ನಕಲಿ ಕೋರ್ಟ್ ಆದೇಶವನ್ನು ಬ್ಯಾಂಕ್‌ಗೆ ಆ ಕಳುಹಿಸಿದ್ದ. ಅಲ್ಲದೆ ಎಸ್ಪಿ ಹೆಸರಿನಲ್ಲಿ ಕರೆ ಮಾಡಿ ಅಭಿಮನ್ಯು ಮತ್ತು ನೀರಜ್ 'ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಸೂಚಿಸಿದ್ದ. ಮೊದ ಮೊದಲು ಆತನ ಮಾತು ನಂಬಿದ್ದ ಬ್ಯಾಂಕ್ ಅಧಿಕಾರಿಗಳಿಗೆ, ಪದೇ ಪದೇ ಹಣಕ್ಕೆ ಕರೆ ಬಂದಾಗ ಅನುಮಾನ ಬಂದಿದೆ.

ಈ ಶಂಕೆ ಮೇರೆಗೆ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಪ್ರಕರಣ ಬಯಲಾಗಿದೆ ಕೂಡಲೇ ಸಿಸಿಬಿ ಸೈಬರ್‌ ಠಾಣೆಗೆ ಬ್ಯಾಂಕ್ ವ್ಯವಸ್ಥಾಪಕರು ದೂರು ನೀಡಿದ್ದಾರೆ. ಕೊನೆಗೆ ಬ್ಯಾಂಕ್ ನಿಂದ ಹಣ ವರ್ಗಾವಣೆಯಾಗಿದ್ದ ಖಾತೆ ಬೆನ್ನತ್ತಿದ್ದಾಗ ದೆಹಲಿಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com