
ಬೆಂಗಳೂರು: ಆಕಸ್ಮಿಕವಾಗಿ ಉಂಟಾದ ಅಗ್ನಿ ಅವಘಡದಲ್ಲಿ ಕೂಲಿ ಕಾರ್ಮಿಕರು ವಾಸವಿದ್ದ 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗಾಹುತಿ ಆಗಿರುವ ಘಟನೆ ಬೆಂಗಳೂರಿನ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ನಡೆದಿದೆ. ಬೆಂಕಿ ಅವಘಡದಿಂದ ಆಟಿಕೆ ಫ್ಯಾಕ್ಟರಿಯ ಕಾರ್ಮಿಕರಿಗೆ ನಿರ್ಮಿಸಲಾಗಿದ್ದ 50 ಶೆಡ್ ಗಳ ಪೈಕಿ 20 ಶೆಡ್ಗಳು ಬೆಂಕಿಗಾಹುತಿ ಆಗಿವೆ.
ಶೆಡ್ನಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜನರಿಗೆ ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿದ್ದ ಶೆಡ್ಗಳನ್ನು ನಿರ್ಮಿಸಲಾಗಿದೆ. ಮೊದಲಿಗೆ ಒಂದು ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇತರೆ ಶೆಡ್ಗಳಿಗೂ ಹಬ್ಬಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನರು ಹೊರಗೆ ಓಡಿ ಬಂದಿದ್ದಾರೆ.
ಅನೇಕ ವರ್ಷಗಳಿಂದ ಮಕ್ಕಳು, ಮಹಿಳೆಯರು ಚಿಕ್ಕ ಚಿಕ್ಕ ಶೆಡ್ಗಳಲ್ಲಿ 100ಕ್ಕೂ ಹೆಚ್ಚು ಜನರು ಇಲ್ಲೇ ವಾಸವಿದ್ದರು. ಬೆಂಕಿಯ ಜ್ವಾಲೆಗೆ ಶೆಡ್ಗಳು ಬೆಂಕಿಗಾಹುತಿ ಹಿನ್ನಲೆ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಇತ್ತ ಬೆಳಗ್ಗೆ ಜಾಗದ ಮಾಲೀಕ ಸ್ಥಳಕ್ಕೆ ಬಂದು ಇತರೆ ಶಡ್ಗಳಲ್ಲಿರುವ ಜನರಿಗೆ ಆದಷ್ಟು ಬೇಗ ಎಲ್ಲರೂ ಮನೆ ಖಾಲಿ ಮಾಡಲು ಸೂಚಿಸಿದ್ದು, ಮಾಲೀಕನ ಮಾತು ಕೇಳಿ ಬಡ ಜನರು ತಬ್ಬಿಬ್ಬಾಗಿದ್ದಾರೆ.
Advertisement