
ಬೆಂಗಳೂರು: ನಗರದ ಎಸ್ಜೆಪಿ ರಸ್ತೆಯಲ್ಲಿ ನೀರಿನ ಬಿಕ್ಕಟ್ಟು ಶುರುವಾಗಿದ್ದು, ಅಂಗಡಿಗಳ ಮಾಲೀಕರು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ವೈಟ್ ಟಾಪಿಂಗ್ ಕಾರ್ಯ ಕೆಲ ತಿಂಗಳುಗಳಿಂದ ವ್ಯಾಪಾರ-ವಹಿವಾಟುಗಳಿಗೆ ಅಡ್ಡಿಯುಂಟು ಮಾಡಿತ್ತು. ಇದೀಗ ನೀರಿನ ಬಿಕ್ಕಟ್ಟು ನಮ್ಮ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಈ ಪ್ರದೇಶದಲ್ಲಿ 2,000ಕ್ಕೂ ಹೆಚ್ಚು ಅಂಗಡಿಗಳಿದ್ದು, ನೀರಿನ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಅಂಗಡಿಗಳ ನಿರ್ವಹಣೆಗೆ ಪ್ರತಿದಿನ ಮನೆಗಳಿಂದ 8-10 ಕ್ಯಾನ್ ಕುಡಿಯುವ ನೀರನ್ನು ಸಾಗಿಸುವಂತಾಗಿದೆ. ನೀರಿನ ಪೈಪ್ ಪೈನ್ ಗಳು ಒಡೆದಿದ್ದು, ಈ ಬಗ್ಗೆ ಬಿಡಬ್ಲ್ಯೂಎಸ್ಎಸ್ಬಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೀರಿನ ಸಮಸ್ಯೆಯಿಂದಾಗಿ ಸಾಕಷ್ಟು ನೌಕರರು ಹೇಳದೆ, ಕೇಳದೆ ಹೋಗಿಬಿಡುತ್ತಿದ್ದಾರೆ. ಮಹಿಳಾ ಸಹಾಯಕರು ಕೆಲಸಕ್ಕೆ ಬರಲು ನಿರಾಕರಿಸುತ್ತಿದ್ದಾರೆ. ಇದಲ್ಲದೆ ಸಾರ್ವಜನಿಕ ಶೌಚಾಲಯವು ಒಂದು ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿದೆ. ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್'ಬಿ ಎರಡೂ ಸಂಸ್ಥೆಗಳಿಗೂ ಹಲವಾರು ಬಾರಿ ದೂರು ನೀಡಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ದೈನಂದಿನ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ನೀರಿನ ಸೌಲಭ್ಯಗಳ ಕೊರತೆಯಿಂದಾಗಿ ನೌಕರರು ಕೆಲಸ ಬಿಡುತ್ತಿದ್ದಾರೆ. ಹೀಗಾಗಿ ನೌಕರರನ್ನು ಉಳಿಸಿಕೊಳ್ಳಲು, ನಾವೇ ನೀರನ್ನು ದೊಡ್ಡ ಪ್ರಮಾಣದಲ್ಲಿ ತರಬೇಕಾಗಿದೆ. ಡಿಸೆಂಬರ್ನಿಂದ ಪ್ರತಿದಿನ ನಾವು ನಮ್ಮ ಕಾರುಗಳ ಮೂಲಕ ನೀರಿನ ಕ್ಯಾನ್ಗಳನ್ನು ತರುತ್ತಿದ್ದೇವೆಂದು ವ್ಯಾಪಾರಿ ರಾಹುಲ್ ಗೋಯಲ್ ಎಂಬುವವರು ಹೇಳಿದ್ದಾರೆ.
ವ್ಯಾಪಾರಿಗಳ ಸಂಘದ ಸದಸ್ಯ ಮುರ್ತುಜಾ ಮೊಹಮ್ಮದ್ ಅವರು ಮಾತನಾಡಿ. ಈ ಬಗ್ಗೆ ಅನೇಕ ಸಭೆಗಳನ್ನು ನಡೆಸಲಾಗಿದ. ಹಲವು ಭರವಸೆಗಳ ಹೊರತಾಗಿಯೂ BWSSB ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ನೀರಿನ ಸಮಸ್ಯೆಯಿಂದಾಗಿ ಕೆಲಸಕ್ಕೆ ಬರುವ ನೌಕರರು ಎರಡು ದಿನ ಕೆಲಸ ಮಾಡಿ ನಂತರ ಏನನ್ನೂ ಹೇಳದೆ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ರಂಜಾನ್ ಸಮಯದಲ್ಲಿಯೂ ಕೂಡ ಸಾವಿರಾರು ಮುಸ್ಲಿಂ ವ್ಯಾಪಾರಿಗಳು BWSSB ಕಚೇರಿಗಳಿಗೆ ಭೇಟಿ ನೀಡಿ, ಪ್ರಾರ್ಥನೆಗೆ ಮೊದಲು ಬಳಕೆಗಾಗಿ ಕನಿಷ್ಠ ತಾತ್ಕಾಲಿಕ ನೀರಿನ ಸಂಪರ್ಕವನ್ನಾದರೂ ನೀಡುವಂತೆ ಮನವಿ ಮಾಡಿದ್ದರು. ಆದರೆ, ಯಾವುದೇ ಸ್ಪಂದನೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಎಲೆಕ್ಟ್ರಾನಿಕ್ಸ್ ಡೀಲರ್ಸ್ ಅಸೋಸಿಯೇಷನ್ (BEDA) ಅಧ್ಯಕ್ಷ ವಿಶಾಲ್ ವರಂದಾನಿ ಅವರು ಮಾತನಾಡಿ, ಬಿಬಿಎಂಪಿ 310 ಮೀಟರ್ ಉದ್ದದ ವೈಟ್-ಟಾಪಿಂಗ್ ಕೆಲಸವನ್ನು ಪೂರ್ಣಗೊಳಿಸಿದೆ. ನೀರಿನ ಸಮಸ್ಯೆ ಕುರಿತು BWSSB ಪದೇ ಪದೇ ಮನವಿ ಮಾಡಿದರೂ ವಿಳಂಬ ಮಾಡುತ್ತಿದೆ. ಹೊಸ ಯೋಜನೆಯಡಿಯಲ್ಲಿ ಭವಿಷ್ಯದಲ್ಲಿ ವೈಟ್-ಟಾಪಿಂಗ್ಗೆ ತೊಂದರೆಯಾಗದಂತೆ ಪಾದಚಾರಿ ಮಾರ್ಗಗಳ ಕೆಳಗೆ ಪೈಪ್ಲೈನ್ಗಳನ್ನು ಹಾಕಲಾಗುವುದು ಎಂದು ತಿಳಿಸಿದ್ದರು. ಇದಕ್ಕಾಗಿ ಪಾದಚಾರಿ ಮಾರ್ಗಗಳನ್ನು ಅಗೆದರು. ನಂತರ ಯಾವುದೇ ಕಾಮಗಾರಿ ಕೆಲಸ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾದಚಾರಿ ಮಾರ್ಗ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಗ್ರಾಹಕರು ಕೂಡ ಅಂಗಡಿಗಳಿಗೆ ಬರುತ್ತಿಲ್ಲ. ಇದು ನಮ್ಮ ವ್ಯಾಪಾರ ಹಾಗೂ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ರಸ್ತೆಗಳ ಕಳಪೆ ಸ್ಥಿತಿ ಮತ್ತು ನೀರು ಸರಬರಾಜಿನ ಕೊರತೆಯು ವ್ಯವಹಾರಗಳನ್ನು ಸಂಪೂರ್ಣ ನಷ್ಟಕ್ಕೆ ತಳ್ಳಿದೆ.
ಕಾಮಗಾರಿ ಕೆಲಸಗಳ ಬಗ್ಗೆ ಬಿಬಿಎಂಪಿ ಅಥವಾ ಬಿಡಬ್ಲ್ಯೂಎಸ್ಎಸ್ಬಿ ನಮಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ನಾವು ಹೆಚ್ಚೆಚ್ಚು ಬಂಡವಾಳ ಹೂಡಿ ನೌಕರರಿಗೆ ವೇತನ ಪಾವತಿಸುವುದನ್ನು ಮುಂದುವರೆಸಿದ್ದವು. ಇದೀಗ ಗ್ರಾಹಕರು ಬರುತ್ತಿಲ್ಲ. ನಷ್ಟ ಎದುರಿಸುತ್ತಿದ್ದೇವೆಂದು ತಿಳಿಸಿದ್ದಾರೆ.
ಈ ನಡುವೆ TNIE ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ತಮ್ ಜವಾಬ್ದಾರಿಯನ್ನು ಬಿಬಿಎಂಪಿ ಹೆಗಲಿಗೆ ಹಾಕುವ ಪ್ರಯತ್ನ ಮಾಡಿದರು. ಯೋಜನೆಯು ಸ್ಮಾರ್ಟ್ ಸಿಟಿ ಉಪಕ್ರಮದ ಅಡಿಯಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.
ಇನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಶೀಘ್ರದಲ್ಲೇ ಕಾಮಗಾರಿ ಕಾರ್ಯಗಳು ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Advertisement