
ಬೆಂಗಳೂರು: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಇನ್ನೂ ಅಂತಿಮವಾಗಿಲ್ಲ. ಆದರೂ ಶಾರ್ಟ್ ಲಿಸ್ಟ್ ನಲ್ಲಿರುವ ಮೂರು ಸ್ಥಳಗಳಲ್ಲಿ ರಿಯಲ್ ಎಸ್ಟೇಟ್ ನಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಆಸಕ್ತಿಗಳು ಹೆಚ್ಚಾಗುತ್ತಿದೆ.
ಕನಕಪುರ ರಸ್ತೆಯಲ್ಲಿ ಎರಡು ಪ್ರದೇಶ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಪ್ರದೇಶವನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಚುರುಕುಗೊಂಡಿದೆ.
ವಿಮಾನ ನಿಲ್ದಾಣಕ್ಕೆ ಕನಕಪುರ ಮುಖ್ಯ ರಸ್ತೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧರಿಸಿದ್ದೇ ಆದರೆ, ಈಗಾಗಲೇ ಗಗನಕ್ಕೇರಿರುವ ಇಲ್ಲಿನ ಭೂಮಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ಡೆವಲಪರ್ಗಳು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕನಕಪುರ ರಸ್ತೆಯಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿವೆ. ಮಳವಳ್ಳಿ, ಕೊಳ್ಳೇಗಾಲ ಮತ್ತು ಚಾಮರಾನಗರದ ಮೂಲಕ ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ಅಗಲೀಕರಣ ಮತ್ತು ದ್ವಿಪಥ ಕಾಮಗಾರಿ ಪ್ರಾರಂಭವಾದ ಬಳಿ ಇಲ್ಲಿನ ಭೂಮಿಗಳಿಗೆ ಚಿನ್ನದ ಬೆಲೆ ಬಂದಿದೆ ಎಂದು ಕನಕಪುರ ರಸ್ತೆಯ ಕದಿರೇನಹಳ್ಳಿಯ ರಿಯಲ್ ಎಸ್ಟೇಟ್ ಏಜೆಂಟ್ ಭಾಸ್ಕರ್ ಅವರು ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ರಸ್ತೆಯ ಪಕ್ಕದಲ್ಲಿರುವ ಒಂದು ಎಕರೆ ಭೂಮಿಯನ್ನು ರೂ.2 ಕೋಟಿಗೆ ಖರೀದಿ ಮಾಡಲಾಯಿತು. ಇದೀಗ ಇಲ್ಲಿನ ಒಳ ಪ್ರದೇಶಗಳಲ್ಲಿರುವ ಒಂದು ಎಕರೆ ಭೂಮಿಗೆ ರೂ.8 ಕೋಟಿ ಬೆಲೆ ಬಂದಿದೆ. ಮುಖ್ಯ ರಸ್ತೆಗಳಲ್ಲಿನ ಭೂಮಿ ಎರಡು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕಲ್ಯಾಣಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ. ಮೋಹನ್ ರಾಜು ಅವರು ಮಾತನಾಡಿ, ಪ್ರಸ್ತಾವಿತ ಎರಡನೇ ವಿಮಾನ ನಿಲ್ದಾಣವು ಕನಕಪುರ ರಸ್ತೆ ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಬರುವ ಸಾಧ್ಯತೆಗಳಿತ್ತು. ಖರೀದಿದಾರರು ಭಾರೀ ಆಸಕ್ತಿ ತೋರುತ್ತಿದ್ದಾರೆ. ಸ್ಥಳ ನಿಗದಿಯಾದ ಬಳಿಕ ಭೂಮಿ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳು ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ತ್ಯಾಜ್ಯ ಮರುಬಳಕೆ ಕಂಪನಿಯ ಮುಖ್ಯಸ್ಥ ವಿನೋದ್ ಜಯಪಾಲ್ ಅವರು ಮಾತನಾಡಿ, ಆರು ತಿಂಗಳ ಹಿಂದೆ, ಕನಕಪುರ ರಸ್ತೆಯಲ್ಲಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಯಾವುದೇ ಚರ್ಚೆಗಳು ಆರಂಭವಾಗದಿದ್ದಾಗ ಕಗ್ಗಲಿಪುರ ಬಳಿ ಚದರ ಅಡಿಗೆ ರೂ. 4,000 ಕ್ಕಿಂತ ಕಡಿಮೆ ಬೆಲೆಗೆ ಒಂದು ನಿವೇಶನವನ್ನು ಖರೀದಿಸಿದ್ದೆವು. ಕಳೆದ ವಾರ ನನ್ನ ಸ್ನೇಹಿತನಿಗಾಗಿ ನಿವೇಶನಗಳನ್ನು ಹುಡುಕಲು ಆ ಪ್ರದೇಶಕ್ಕೆ ಭೇಟಿ ನೀಡಿದಾಗ, ದರಗಳು ರೂ. 5,000 ಏರಿಕೆಯಾಗಿರುವುದು ತಿಳಿದು ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ.
ಬೆಲೆ ಏರಿಕೆಗೆ ಎರಡನೇ ವಿಮಾನ ನಿಲ್ದಾಣದ ಸ್ಥಳ ಪ್ರಸ್ತಾವನೆ ಕಾರಣವೆಂದು ಹೇಳಬಹುದಾದರೂ, ಉತ್ತಮ ಮೆಟ್ರೋ ಸಂಪರ್ಕ, ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳು, ಉತ್ತಮ ನೀರಿನ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳೂ ಕೂಡ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ನೆಲಮಂಗಲ-ಕುಣಿಗಲ್ ರಸ್ತೆಗೆ ಸಮೀಪವಿರುವ ಪ್ರದೇಶಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತಿದೆ ಎಂದು ರಿಯಲ್ ಎಸ್ಟೇಟ್ ಏಜೆಂಟರು ಹೇಳಿದ್ದಾರೆ,
ದೇವನಹಳ್ಳಿ ವಿಮಾನ ನಿಲ್ದಾಣವು ಆಂಧ್ರಪ್ರದೇಶಕ್ಕೆ ಹತ್ತಿರದಲ್ಲಿದೆ. ಕನಕಪುರ ರಸ್ತೆಯಲ್ಲಿ ವಿಮಾನ ನಿಲ್ದಾಣ ಬಂದರೆ ಅದು ತಮಿಳುನಾಡಿಗೆ ಮಾತ್ರ ಹತ್ತಿರವಾಗಲಿದೆ. ನೆಲಮಂಗಲದ ಬಳಿ ವಿಮಾನ ನಿಲ್ದಾಣ ಬಂದರೆ, ಅದು ಕರ್ನಾಟಕಕ್ಕೆ ಪ್ರಯೋಜನಕಾರಿಯಾಗಲಿದೆ ಎಂದು ನೆಲಮಂಗಲದ ರಿಯಲ್ ಎಸ್ಟೇಟ್ ಏಜೆಂಟ್'ವೊಬ್ಬರು ಹೇಳಿದ್ದಾರೆ.
ಗ್ರಾನೈಟ್ ವ್ಯಾಪಾರಿ ಪ್ರಕಾಶ್ ಮುರುಗನ್ ಎಂಬುವವರು ಮಾತನಾಡಿ, ಕನಕಪುರ ರಸ್ತೆಯ ಸುತ್ತಲು ಮಾತ್ರವಲ್ಲದೆ ಮಳವಳ್ಳಿಯವರೆಗಿನ ಪ್ರದೇಶಗಳಲ್ಲಿಯೂ ಜನರು ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆಂದು ಹೇಳಿದ್ದಾರೆ.
Advertisement