
ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಿಂದಿ vs ಕನ್ನಡ ಸಂಘರ್ಷ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಹಿಂದಿ ಭಾಷಿಕನೋರ್ವ ಕನ್ನಡಿಗ ಆಟೋ ಚಾಲಕನೊಂದಿಗೆ ಗಲಾಟೆ ಮಾಡಿಕೊಂಡಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭಾಷಾ ಸಂಘರ್ಷ ವರದಿಯಾಗಿದ್ದು, ಪರಭಾಷಿಕನೋರ್ವ ಕನ್ನಡಿಗ ಆಟೋ ಚಾಲಕನಿಗೆ ಧಮ್ಕಿ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಎಸ್ಎಂಎಸ್ ಆರ್ಕೇಡ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ಆಟೋ ಚಾಲಕನಿಗೆ ಧಮ್ಕಿ ಹಾಕುತ್ತಿದ್ದರೆ ಅತ್ತ ಆಟೋ ಚಾಲಕನೂ ತಿರುಗೇಟು ನೀಡುತ್ತಿದ್ದಾನೆ. ಇದನ್ನು ಒಬ್ಬಾತ ವಿಡಿಯೋ ಮಾಡುತ್ತಿದ್ದರೆ, ಮತ್ತೊಬ್ಬ ಮಹಿಳೆ ಹಿಂದಿ ಭಾಷಿಕ ಯುವಕನನ್ನು ಹಿಡಿದೆಳೆದು ಕರೆದೊಯ್ದಿದ್ದಾಳೆ.
ಮೂಲಗಳ ಪ್ರಕಾರ ಆಟೋ ಪ್ರಯಾಣದ ವೇಳೆ ಹಿಂದಿ ಭಾಷಿಕ ಮತ್ತು ಚಾಲಕನ ನಡುವೆ ಕಿರಿಕ್ ಆಗಿದ್ದು, ಹಿಂದಿಯಲ್ಲಿ ಮಾತನಾಡು ಎಂದು ಯುವಕ ಧಮ್ಕಿ ಹಾಕಿದ್ದಕ್ಕೆ ಆಟೋ ಚಾಲಕ ‘ಏನೂ ಮಾಡಕ್ಕಾಗಲ್ಲ. ಕನ್ನಡ ಮಾತನಾಡು ಕಲಿ ನೀನು. ನೀನು ಬೆಂಗಳೂರಿಗೆ ಬಂದಿರುವುದು ಆಯ್ತಾ..’ ಎಂದು ತಿರುಗೇಟು ಕೊಡುತ್ತಾನೆ. ಇದನ್ನು ರೆಕಾರ್ಡ್ ಮಾಡಿಕೊಳ್ಳಲು ಕನ್ನಡಿಗ ಮುಂದಾದಾಗ, ರೆಕಾರ್ಡ್ ಬೇಕಾ ಮಾಡ್ಕೋ, ಕರ್ನಾಟಕ ನಮ್ದು, ಬೆಂಗಳೂರು ನಮ್ದು, ಇಲ್ಲಿ ಹಿಂದಿ ಮಾತಾಡು ಎಂದು ಅವಾಜ್ ಹಾಕಿದ್ದಾನೆ.
ಆಟೋ ಚಾಲಕ ತಿರುಗೇಟು
ಇದಕ್ಕೆ ಸರಿಯಾಗಿ ಬೆವರಳಿಸಿರುವ ಕನ್ನಡಿಗ, ಲೋ ನೀನು ಎಲ್ಲಿಂದಲೋ ಬೆಂಗಳೂರಿಗೆ ಬಂದಿರೋದು, ನೀನು ಮೊದಲು ಕನ್ನಡದಲ್ಲಿ ಮಾತಾಡು ಎಂದು ಹೇಳಿದ್ದಾನೆ. ಆದರೂ ಸುಮ್ಮನಾಗದ ಹಿಂದಿವಾಲ ನೀನು ಹಿಂದಿ ಮಾತಾಡು, ಹಿಂದಿಯಲ್ಲೇ ಮಾತಾಡು ಎನ್ನುತ್ತಾ ಕೂಗಾಡಿದ್ದಾನೆ. ಕೊನೆಗೆ ಅವನೊಂದಿಗೆ ಇದ್ದ ಯುವತಿ ಆತನನ್ನು ಪಕ್ಕಕ್ಕೆ ಎಳೆದೊಯ್ದಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗುತ್ತಿದೆ.
ರೂಪೇಶ್ ರಾಜಣ್ಣ ಕಿಡಿ
ಈ ವಿಡಿಯೋ ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ, ತಮ್ಮ ಊರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಗದೆ ನಮ್ಮೂರಿಗೆ ಬಂದ್ರು, ಕನ್ನಡವನ್ನ ಕನ್ನಡ್ ಮಾಡಿದ್ರು. ಕನ್ನಡ ಕಲೀರಪ್ಪ ಅಂದ್ರೆ, ಇಲ್ಲ ನಾವು ಕಲಿಯಲ್ಲ ಅಂದ್ರು. ಈಗ ನಮ್ಮೂರಲ್ಲಿ ನಮಗೆ ಹಿಂದಿಲಿ ಮಾತಾಡಿ ಅಂತ ಬೆದರಿಕೆ ಹಾಕೋ ಲೆವೆಲ್ಗೆ ಬಂದಿದ್ದಾರೆ. ಇವರ ದುರಹಂಕಾರಕ್ಕೆ ಕಾರಣ ನಮ್ಮಲ್ಲೇ ಇರೋ ಗುಲಾಮಗಿರಿ ಮಾಡೋರು ಎಂದು ಕಿಡಿಕಾರಿದ್ದಾರೆ.
ನೆಟ್ಟಿಗರ ಆಕ್ರೋಶ
ಇನ್ನು ಪರಭಾಷಿಕ ದುರ್ವರ್ತನೆ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, 'ನಾವು ಕನ್ನಡ ಕಲಿರಿ ಅಂದರೆ ಕಲಿಯಲ್ಲ ಅಂದ್ರು. ಆಯ್ತು ಅಂತ ಸುಮ್ಮನಿದ್ವಿ, ಈಗ ನೋಡಿದ್ರೆ ನಮ್ಮೂರಲ್ಲೇ ಬಂದು ನಮ್ಮನ್ನೇ ಹಿಂದಿ ಮಾತಾಡು ಎಂದು ಅವಾಜ್ ಹಾಕೋಕೆ ಇವರಿಗೆ ಎಷ್ಟು ಪೊಗರು? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರನ್ನು ಪರಭಾಷಿಕರ ಸ್ವರ್ಗ ಮಾಡಿರೋ ಸರ್ಕಾರಗಳಿಗೆ ಇದೆಲ್ಲ ಕಾಣಲ್ವಾ? ಎಂದು ಮತ್ತೆ ಕೆಲವರು ಸರ್ಕಾರವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಪತ್ತೆ ಮಾಡಿ ಬುದ್ದಿ ಕಲಿಸಿ
ಅಂತೆಯೇ ಮೊದಲು ಇವನನ್ನ ಪತ್ತೆ ಹಚ್ಚಿ, ಮುಂದೆಂದೂ ಹಿಂದಿಯೇತರ ರಾಜ್ಯದಲ್ಲಿ ಇಂತಹ ಅವಿವೇಕ ದುರ್ವರ್ತನೆ ತೋರಿಸಬಾರದು ಹಾಗೆ ಬುದ್ಧಿ ಕಲಿಸೋಣ ಎಂದು ಹಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ಮಟ್ಟಕ್ಕೆ ವಲಸಿಗರ ದುರಹಂಕಾರ, ದೌರ್ಜನ್ಯ ಮೆರೆಯಲು ಕಾರಣರಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ನಾಚಿಕೆಯಾಗಬೇಕು. ಅವರವರ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದ್ದರೆ ಇಲ್ಲಿಗೆ ಬಂದು ಈ ರೀತಿ ಬದುಕುವ ದುರ್ಗತಿ ಅವರಿಗೆ ಬರುತ್ತಿರಲಿಲ್ಲ. ಇವನು ಕೂಡಲೇ ಕ್ಷಮೆ ಕೇಳದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.
Advertisement