
ಬೆಂಗಳೂರು: ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು, ಈ ನಡುವೆ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ ಪಂದ್ಯಾವಳಿ ನಡೆಯುವ ಚಿನ್ನಸ್ವಾಮಿ ಕ್ರೀಡಾಂಗಣದೊಳಗಿನ ಆಹಾರ ಮಳಿಗೆಗಳಲ್ಲಿ ಶುಕ್ರವಾರ ತಪಾಸಣೆ ನಡೆಸಿದೆ.
ಮಳಿಗೆಗಳಿಗೆ ಭೇಟಿ ನೀಡಿರುವ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್ಡಿಎ) ಇಲಾಖೆಯ ಅಧಿಕಾರಿಗಳು ಪ್ರಸಿದ್ಧ ಬ್ರ್ಯಾಂಡ್ಗಳು ಸೇರಿದಂತೆ ಮಳಿಗೆಗಳಲ್ಲಿನ ಎಲ್ವಾ ರೀತಿಯ ಆಬಾರ ಮಾದರಿಗಳನ್ನು ಸಂಗ್ರಹಿಸಿವೆ. ಪರೀಕ್ಷೆ ವೇಳೆ ನೈರ್ಮಲ್ಯ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದೇ ಆದರೆ, ದಂಡ ವಿಧಿಸಲಿದ್ದಾರೆ.
ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆದಿದ್ದು, ಈ ಕ್ರೀಡಾಂಗಣದೊಳಗೆ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 12 ಆಹಾರ ಮಳಿಗೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ಎರಡು ಪ್ರಮುಖ ಸಂಸ್ಥೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆಂದು ತಿಳಿದುಬಂದಿದೆ.
ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿ ಹಾಗೂ ಸಿಹಿತಿಂಡಿಗಳು, ಮತ್ತು ಮಸಾಲೆ ಪುಡಿಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಆಹಾರ ಬ್ರ್ಯಾಂಡ್'ನ ಕಂಪನಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಪಿಜ್ಜಾ, ಬರ್ಗರ್ ಮತ್ತು ಇತರ ತಿಂಡಿಗಳನ್ನು ಮಾರಾಟ ಮಾಡಲು ಹೆಸರುವಾಸಿಯಾದ ಹಲವಾರು ಜನಪ್ರಿಯ ಆಹಾರ ಬ್ರ್ಯಾಂಡ್ ಹೊಂದಿರುವ ಕಂಪನಿಗಳ ಆಹಾರ ಮಾದರಿಗಳನ್ನೂ ಕೂಡ ಅಧಿಕಾರಿಗಳು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ್ದಾರೆಂದು ವರದಿಗಳು ತಿಳಿಸಿವೆ.
ಕಳೆದ ವರ್ಷದ ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯದ ಕೊರತೆಯ ಬಗ್ಗೆ ಜನರು ಕಳವಳ ವ್ಯಕ್ತಪಡಿಸಿದ್ದರು. ಈ ಸಂಬಂಧ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಂದ್ಯದ ಸಮಯದಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ, ಇಲಾಖೆಯು ಯಶವಂತಪುರ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿರುವ ಆಹಾರ ಮಳಿಗೆಗಳಲ್ಲಿಯೂ ತಪಾಸಣೆ ನಡೆಸಿತ್ತು.
ಕೆಲವು ತಿಂಗಳುಗಳಿಂದ ತಪಾಸಣೆ ತೀವ್ರತರವಾಗಿ ನಡಸಲಾಗುತ್ತಿದ್ದು, ಹಲವು ಮಳಿಗೆಗಳಲ್ಲಿ ಗುಣಮಟ್ಟ ಕಳಪೆಯಾಗಿರುವುತು ತಿಳಿದುಬಂದಿದೆ. ಪರಿಶೀಲನೆಯ ಸಮಯದಲ್ಲಿ ಅಂಗಡಿ ಮಾಲೀಕರು ಸಹಕರಿಸರಲಿಲ್ಲ. ತಪಾಸಣೆಗಳಿಂದ ತಮ್ಮ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ಆಕ್ಷೇಪಣೆಗಳನ್ನೂ ಎತ್ತಿದರು. ಕೆಲವು ಕಾರ್ಮಿಕರು ಕೂಡ ಕಳವಳ ವ್ಯಕ್ತಪಡಿಸಿದರು.
ಕಡಿಮೆ ಬೆಲೆಯ ಆಹಾರಕ್ಕಾಗಿ ಈ ಮಳಿಗೆಗಳೇ ನಮಗಿರುವ ಆಯ್ಕೆಯಾಗಿದೆ ಎಂದು ಹೇಳಿದರು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Advertisement