
ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳ ಹಾವಳಿ ಮತ್ತೆ ಹೆಚ್ಚಾಗಿದ್ದು, ಇದು ನಗರವಾಸಿಗಳು ಹಾಗೂ ಪ್ರಯಾಣಿಕರ ಸುರಕ್ಷತೆ ಕುರಿತು ಕಳವಳವನ್ನುಂಟು ಮಾಡುತ್ತಿದೆ.
ಶುಕ್ರವಾರವಷ್ಟೇ ನಾಗರಭಾವಿಯಲ್ಲಿ ಅನಧಿಕೃತ ಫ್ಲೆಕ್ಸ್ ಮುರಿದು ಬಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಶನಿವಾರ ಸರ್ಜಾಪುರದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ. ಈ ಮಧ್ಯೆ ಕುಮಾರಕೃಪಾ ರಸ್ತೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿರುವವ 40 ಕ್ಕೂ ಹೆಚ್ಚು ಫ್ಲೆಕ್ಸ್ಗಳು ರಾರಾಜಿಸುತ್ತಿರುವುದು ಕಂಡು ಬಂದಿದೆ.
ಹಬ್ಬಗಳು, ರಾಜಕೀಯ ಕಾರ್ಯಕ್ರಮಗಳು, ಖಾಸಗಿ ಆಚರಣೆಗಳು ಮತ್ತು ಇತರ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ನಗರದ ಹಲವು ಭಾಗಗಳಲ್ಲಿ ಫ್ಲೆಕ್ಸ್ಗಳು, ಕಟೌಟ್ಗಳು ಮತ್ತು ಬ್ಯಾನರ್ಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅಕ್ರಮ ಫ್ಲೆಕ್ಸ್ಗಳು ಮತ್ತು ಬ್ಯಾನರ್ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರೂ, ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ತಜ್ಞೆ ಕಾತ್ಯಾಯಿನಿ ಚಾಮರಾಜ್ ಅವರು, ಫ್ಲೆಕ್ಸ್ಗಳು ಮತ್ತು ಹೋರ್ಡಿಂಗ್ಗಳು ನಗರದ ಸೌಂದರ್ಯವನ್ನು ನಾಶಮಾಡುತ್ತವೆ. ಅಲ್ಲದೆ, ಪಾದಚಾರಿಗಳು ಮತ್ತು ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತವೆ ಮತ್ತು ಸಂಚಾರಕ್ಕೆ ಅಡ್ಡಿಪಡಿಸುತ್ತವೆ ಎಂದು ಹೇಳಿದ್ದಾರೆ.
ನಗರದಲ್ಲಿ ಗಮನ ಸೆಳೆಯಲು ಫ್ಲೈಓವರ್ಗಳು, ಸೇತುವೆಗಳು ಮತ್ತು ಪಾದಚಾರಿ ಸೇತುವೆಗಳಂತಹ ಪ್ರಮುಖ ಸ್ಥಳಗಳಲ್ಲಿ ದೊಡ್ಡ ದೊಡ್ಡೆ ಹೋರ್ಡಿಂಗ್ಗಳು ಮತ್ತು ಫ್ಲೆಕ್ಸ್ಗಳನ್ನು ಹಾಕಲಾಗುತ್ತಿದ್ದು. ಇದರಿಂದ ಅಪಘಾತಗಳು ಮತ್ತು ಸಂಚಾರ ದಟ್ಟಣೆ ಎದುರಾಗುತ್ತವೆ. ಈ ಬ್ಯಾನರ್ ಹಾಗೂ ಹೋರ್ಡಿಂಗ್ಸ್ ಗಳನ್ನು ಕಳಪೆ-ಗುಣಮಟ್ಟದ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿರುವುದರಿಂದ ಭಾರೀ ಗಾಳಿಯ ಸಮಯದಲ್ಲಿ ಅವು ಕುಸಿಯುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಕ್ರಮದ ಕುರಿತು ಮಾತನಾಡಿ, ಅನಧಿಕೃತ ಫ್ರೆಕ್ಸ್ ಹಾಗೂ ಬ್ಯಾನರ್ ಗಳು ನಗರದಲ್ಲಿ ಇನ್ನೂ ಕಾಣಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅವುಗಳನ್ನು ತಕ್ಷಣ ತೆಗೆದುಹಾಕುವುದನ್ನು ನೋಡುವುದು ಅಪರೂಪವಾಗಿದೆ ಎಂದು ತಿಳಿಸಿದ್ದಾರೆ.
ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಗೆ ನಗರದಲ್ಲಿ ನಿಷೇಧವಿದ್ದರೂ ಕಟ್ಟಡ ಹಾಗೂ ಮನೆಗಳ ಮೇಲೆ ಅಳವಡಿಸಲು ಹೇಗೆ ಅವಕಾಶ ನೀಡಲಾಗುತ್ತಿದೆ. ಇವುಗಳ ಹಿಂದೆ ರಾಜಕೀಯ ವ್ಯಕ್ತಿಗಳು ಇರುತ್ತಾರೆ. ಸ್ವಂತ ಲಾಭಕ್ಕಾಗಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳ ಹಾಕಿಸಿ ನಂತರ ಅಭಿಮಾನಿಗಳು ಹಾಕಿದ್ದಾರೆಂದು ಹೇಳುತ್ತಾರೆಂದು ಕಿಡಿಕಾರಿದ್ದಾರೆ.
Advertisement