ಸ್ಮಾರ್ಟ್ ಮೀಟರ್ ನಿಯಮಕ್ಕೆ ತಡೆ; ಉಚಿತ ವಿದ್ಯುತ್ ಕೊಡಿ ಅಂತ ಯಾರು ಕೇಳಿದ್ದರು? ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು: ಉಚಿತ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಪ್ರೀ ಪೇಯ್ಡ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವ ಬೆಸ್ಕಾಂ ಕ್ರಮಕ್ಕೆ ತಡೆ ನೀಡಿದೆ.
ದೊಡ್ಡಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಜಯಲಕ್ಷ್ಮೀ ಎಂಬುವರಿಗೆ ನೀಡಿದ್ದ ಸಂವಹನ ಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಬೆಸ್ಕಾಂ ಕ್ರಮಕ್ಕೆ ತಡೆ ನೀಡಿದೆ. ಜೊತೆಗೆ, ಹೊಸದಾಗಿ ನಿರ್ಮಾಣಗೊಂಡಿರುವ ಮನೆಯೊಂದಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಬೆಸ್ಕಾಂ ನೀಡಿದ್ದ ನೋಟಿಸ್ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಸ್ಮಾರ್ಟ್ ಮೀಟರ್ ದೇಶದ ಬೇರೆಬೇರೆ ಕಡೆ 950 ರೂಪಾಯಿ ಇದೆ. ಆದರೆ, ನಮ್ಮಲ್ಲಿ ರೂ.8,000ಕ್ಕೂ ಅಧಿಕ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ವೇಳೆ ಬೆಸ್ಕಾಂನ್ನು ತರಾಟೆಗೆ ತೆಗೆದುಕೊಂಡ ಪೀಠ, ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಏಕಾಏಕಿ ಈ ರೀತಿ ಬೆಲೆ ಏರಿಕೆ ಮಾಡಿದರೆ ಹೇಗೆ? ಎಲ್ಲರೂ ಹೆಚ್ಚು ಹಣ ಕೊಟ್ಟು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದರೆ ಬಡವರು ಏನು ಮಾಡಬೇಕು? ಇದೆಲ್ಲವೂ ಉಚಿತ ಗ್ಯಾರಂಟಿಗಳಿಂದ ಎದುರಾಗಿರುವ ಸಮಸ್ಯೆಯೇ? ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿತು.
ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದು ತಿಳಿಸಿ, ಇದೀಗ ಶಾಶ್ವತ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯ ಮಾಡುವುದು ಕಠಿಣ ಕ್ರಮವಲ್ಲವೇ? ಈ ಸ್ಮಾರ್ಟ್ ಮೀಟರ್ಗಳನ್ನು ಹೊರ ಗುತ್ತಿಗೆದಾರರ ಮೂಲಕ ಖರೀದಿ ಮಾಡುವುದು ಅತ್ಯಂತ ಅಪಾಯಕಾರಿ ಕ್ರಮವಲ್ಲವೇ? ಇದು ಗ್ರಾಹಕರಿಗೆ ದೊಡ್ಡ ಹೊರೆಯಾಗುವುದಿಲ್ಲವೇ? ಇದು ಯಾವ ನ್ಯಾಯ? ಎಂದು ಅಸಮಾಧಾನ ವ್ಯಕ್ತಪಡಿಸಿತು.
ಬಳಿಕ ರಾಜ್ಯ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪರ ವಕೀಲರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ