ಬೆಂಗಳೂರು ಮೆಟ್ರೋಗೆ ಕರ್ನಾಟಕ ಕೇಂದ್ರಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಪ್ರಕಾರ, 96.10 ಕಿ.ಮೀ ಮೆಟ್ರೋ ಮಾರ್ಗಗಳು ಪೂರ್ಣಗೊಂಡಿವೆ. ಇದಕ್ಕೆ ರಾಜ್ಯವು 25,387 ಕೋಟಿ ರೂ. ಮತ್ತು ಕೇಂದ್ರವು 7,468.86 ಕೋಟಿ ರೂ. ಖರ್ಚು ಮಾಡಿದೆ.
PM Narendra Modi with CM Siddaramaiah during an event to lay the foundation stone of development projects and the inauguration of the Metro Yellow Line in Bengaluru.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗದ ಉದ್ಘಾಟನೆ ಮತ್ತು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ.
Updated on

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಜಾಲದ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸಮನಾಗಿ ಹಣಕಾಸು ಒದಗಿಸಬೇಕಿದ್ದರೂ, ರಾಜ್ಯವು ಕೇಂದ್ರಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದರು.

ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೆಟ್ರೋ ಹಂತ-3 ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದರು.

ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಅಶ್ವಿನಿ ವೈಷ್ಣವ್ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಒಪ್ಪಂದದ ಪ್ರಕಾರ ಮೆಟ್ರೋ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಣವನ್ನು ನೀಡಬೇಕಾಗಿದೆ. ಆದರೆ, 'ರಾಜ್ಯವು ಈ ಯೋಜನೆಗೆ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ' ಎಂದು ಹೇಳಿದರು.

ಅದರಲ್ಲಿ ಹೆಚ್ಚಿನ ಭಾಗ ಸಾಲ ಮತ್ತು ಷೇರುಗಳ ರೂಪದಲ್ಲಿ ಬರುತ್ತದೆ. ಇದನ್ನು ರಾಜ್ಯವು ಬಡ್ಡಿಯೊಂದಿಗೆ ಮರುಪಾವತಿಸಬೇಕು. ಇಲ್ಲಿಯವರೆಗೆ, 3,987 ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆ ಕೇಂದ್ರದ ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ಶ್ಲಾಘಿಸಿದರು.

PM Narendra Modi with CM Siddaramaiah during an event to lay the foundation stone of development projects and the inauguration of the Metro Yellow Line in Bengaluru.
Operation Sindoor ಯಶಸ್ಸಿಗೆ ಭಾರತದ ತಾಂತ್ರಿಕ ಪರಾಕ್ರಮ ಕಾರಣ; ಕರ್ನಾಟಕದ ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ಮುಖ್ಯಮಂತ್ರಿ ಪ್ರಕಾರ, 96.10 ಕಿ.ಮೀ ಮೆಟ್ರೋ ಮಾರ್ಗಗಳು ಪೂರ್ಣಗೊಂಡಿವೆ. ಇದಕ್ಕೆ ರಾಜ್ಯವು 25,387 ಕೋಟಿ ರೂ. ಮತ್ತು ಕೇಂದ್ರವು 7,468.86 ಕೋಟಿ ರೂ. ಖರ್ಚು ಮಾಡಿದೆ. 19.15 ಕಿ.ಮೀ ಉದ್ದದ ಹಳದಿ ಮಾರ್ಗವನ್ನು 7,610 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಪ್ರತಿದಿನ 7.5 ಲಕ್ಷ ಪ್ರಯಾಣಿಕರಿಗೆ ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದರು.

ಸದ್ಯ ಒಂಬತ್ತು ಲಕ್ಷ ಜನರು ಮೆಟ್ರೋ ಬಳಸುತ್ತಿದ್ದು, ಹಳದಿ ಮಾರ್ಗ ಕಾರ್ಯಾರಂಭವಾದ ನಂತರ ಈ ಸಂಖ್ಯೆ 12.5 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ. ಬೆಂಗಳೂರಿನ ತ್ವರಿತ ಬೆಳವಣಿಗೆ ಮತ್ತು ಭಾರಿ ಸಂಚಾರದಿಂದಾಗಿ ನಗರಕ್ಕೆ ಮೆಟ್ರೋ ಅತ್ಯಗತ್ಯವಾಗಿದೆ. 2030ರ ವೇಳೆಗೆ ಮೆಟ್ರೋ ಜಾಲವನ್ನು 220 ಕಿ.ಮೀಗೆ ವಿಸ್ತರಿಸಲು ಯೋಜಿಸಲಾಗಿದ್ದು, 30 ಲಕ್ಷ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಂತ 1, 2, 2A ಮತ್ತು 2B ಪೂರ್ಣಗೊಂಡಿವೆ; ಹಂತ-3 ಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಮತ್ತು ಕೇಂದ್ರವು ಅನುಮತಿ ನೀಡಿದ ನಂತರ ಹಂತ-3A ಪ್ರಾರಂಭವಾಗುತ್ತದೆ. ನಾಲ್ಕನೇ ಹಂತದ ಮೆಟ್ರೋ 53 ಕಿ.ಮೀ. ಕ್ರಮಿಸಲಿದೆ ಎಂದರು.

ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ನೀಡಿದ ಆದ್ಯತೆಯನ್ನು ಕರ್ನಾಟಕಕ್ಕೂ ವಿಸ್ತರಿಸುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದರು ಮತ್ತು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲನ್ನು ಪ್ರಾರಂಭಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com