
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕಳೆದ 2 ತಿಂಗಳುಗಳಿಂದ ಸ್ಥಗಿತವಾಗಿದ್ದ ಬೈಕ್ ಟ್ಯಾಕ್ಸಿ ಇಂದಿನಿಂದ ಪುನಾರಂಭಗೊಂಡಿದ್ದು ಉಬರ್ ಮತ್ತು ರ್ಯಾಪಿಡೋ ಸಂಸ್ಥೆಗಳು ಆ್ಯಪ್ ಮೂಲಕ ಸೇವೆ ಪುನಾರಂಭಿಸಿವೆ.
ಹೌದು.. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಿದ್ದು, ಓಲಾ ಹೊರತುಪಡಿಸಿ ಉಬರ್ ಮತ್ತು ರ್ಯಾಪಿಡೋ ಆ್ಯಪ್ಗಳಲ್ಲಿ ಮಾತ್ರ ಸೇವೆ ಲಭ್ಯವಿದೆ. ಸುರಕ್ಷತಾ ಕಾರಣಗಳಿಂದ ಜೂನ್ 16 ರಿಂದ ನಿಲ್ಲಿಸಲಾಗಿದ್ದ ಸೇವೆಯನ್ನು ಹೈಕೋರ್ಟ್ನ ನಿರ್ದೇಶನದ ಮೇರೆಗೆ ಪುನರಾರಂಭಿಸಲಾಗಿದೆ.
ಜೂನ್ 16ರಿಂದ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಸದ್ಯ ಓಲಾ ಹೊರತುಪಡಿಸಿ ಊಬರ್, ರ್ಯಾಪಿಡೊ ಆ್ಯಪ್ಗಳಲ್ಲಿ ಮಾತ್ರ ಬೈಕ್ ಟ್ಯಾಕ್ಸಿ ಸೇವೆ ಲಭ್ಯವಿದೆ ಎಂದು ಹೇಳಲಾಗಿದೆ.
ಜೂನ್ 16 ರಂದು ರಾಜ್ಯ ಸರ್ಕಾರ ವಿಧಿಸಿದ ಎರಡು ತಿಂಗಳ ನಿಷೇಧದ ನಂತರ ಬೆಂಗಳೂರಿನಲ್ಲಿ ಉಬರ್ ಮತ್ತು ರ್ಯಾಪಿಡೊ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪುನರಾರಂಭಗೊಂಡಿದ್ದು, ಈ ಕುರಿತು ಸರ್ಕಾರವು ಸವಾರರ ಜೀವನೋಪಾಯದ ಮೇಲಿನ ಪರಿಣಾಮವನ್ನು ಪರಿಗಣಿಸುವಂತೆ ಬೈಕ್ ಟ್ಯಾಕ್ಸಿ ಚಾಲಕರ ಸಂಘಟನೆ ಒತ್ತಾಯಿಸಿದೆ.
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರ ಪಟ್ಟು ಬೆನ್ನಲ್ಲೇ ಸುರಕ್ಷತೆಯ ದೃಷ್ಟಿಯಿಂದ ಜೂನ್ 16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು. ಆ ಸಂದರ್ಭದಲ್ಲಿ ಅನಧಿಕೃತವಾಗಿ ಸಂಚರಿಸಿದ ಬೈಕ್ ಟ್ಯಾಕ್ಸಿಗಳ ಮೇಲೆ ಆರ್ಟಿಓ ಅಧಿಕಾರಿಗಳು ಕ್ರಮಕೈಗೊಂಡಿದ್ದರು.
ಬೈಕ್ ಟ್ಯಾಕ್ಸಿಗೆ ನೀತಿ ಚೌಕಟ್ಟು ನಿಗದಿಗೆ ಹೈಕೋರ್ಟ್ ಸೂಚನೆ
ಇದರ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಸೇವೆ ರದ್ದು ಪ್ರಶ್ನಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದವು. ಸದ್ಯ ಬೈಕ್ ಟ್ಯಾಕ್ಸಿ ಸಂಬಂಧ ನೀತಿ ಚೌಕಟ್ಟು ನಿಗದಿಪಡಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಸದ್ಯ ರಾಜ್ಯ ಸರ್ಕಾರ ಇಂದಿನಿಂದ ಬೈಕ್ ಟ್ಯಾಕಿ ಸೇವೆಯನ್ನು ಆರಂಭಿಸಿದೆ.
ಬೈಕ್ ಟ್ಯಾಕ್ಸಿ ಸವಾರರು ಫುಲ್ ಖುಷ್
ಬೆಂಗಳೂರು ವ್ಯಾಪ್ತಿಯಲ್ಲೇ 1.20 ಲಕ್ಷ ಬೈಕ್ಗಳು ಬೈಕ್ ಟ್ಯಾಕ್ಸಿ ಸೇವೆಗೆ ನೋಂದಣಿ ಮಾಡಿಕೊಂಡಿವೆ. ಇನ್ನು ರಾಜ್ಯದಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಬೈಕ್ ಟ್ಯಾಕ್ಸಿ ನಂಬಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಬೈಕ್ ಟ್ಯಾಕಿ ಸೇವೆ ರದ್ದಾದ ವೇಳೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಇದೀಗ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭಗೊಂಡಿರುವುದು ಬೈಕ್ ಟ್ಯಾಕ್ಸಿ ಚಾಲಕರಿಗೆ ಖುಷಿ ತಂದಿದೆ.
ಕುತೂಹಲ ಕೆರಳಿಸಿದ ಆಯುಕ್ತರ ಭೇಟಿ
ಬೈಕ್ ಟ್ಯಾಕಿ ಸೇವೆ ಆರಂಭ ಬೆನ್ನಲ್ಲೇ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಸಾರಿಗೆ ಸಚಿವರ ಭೇಟಿಗೆ ತೆರಳಲಿದ್ದಾರೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಕೋರ್ಟ್ ನಿರ್ದೇಶನ ಪ್ರತಿ ಸಾರಿಗೆ ಇಲಾಖೆಗೆ ಅಧಿಕೃತವಾಗಿ ಸಾರಿಗೆ ಅಧಿಕಾರಿಗಳ ಕೈಸೇರುವ ಸಾಧ್ಯತೆ ಇದೆ. ತಲುಪಿದ ನಂತರ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಚಿಂತನೆ ನಡೆಸಲಿದೆ. ಸದ್ಯ ಈ ಬಗ್ಗೆ ಮಾಧ್ಯಮಗಳಿಗೆ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 'ಬುಧವಾರ, ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತ್ತು, ಇತರ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಗಮನಿಸಿ ನೀತಿ ಚೌಕಟ್ಟಿನ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನಿರ್ದೇಶಿಸಿತ್ತು.
ಟ್ಯಾಕ್ಸಿ ಅಗ್ರಿಗೇಟರ್ಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಲು ನ್ಯಾಯಾಲಯವು ಅನುಮತಿಸಿಲ್ಲ. ನಾನು ಅಡ್ವೊಕೇಟ್ ಜನರಲ್ ಅವರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಅಭಿಪ್ರಾಯವನ್ನು ಪಡೆಯುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
Advertisement