

ಬೆಳಗಾವಿ: ಈ ಹಿಂದೆ ಬೆಂಗಳೂರಿನಲ್ಲಿ ಭಾರಿ ಸದ್ದು ಮಾಡಿದ್ದ ನಾಟಿ ಕೋಳಿ, ಇದೀಗ ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡುತ್ತಿದೆ.
ಹೌದು.. ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಸಾರು ಸವಿದಿದ್ದರು. ಈ ಕುರಿತ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತದೇ ನಾಟಿ ಕೋಳಿ ವಿಚಾರ ಬೆಳಗಾವಿಯಲ್ಲೂ ಸದ್ದು ಮಾಡುತ್ತಿದೆ.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತುಕತೆ ನಡೆಸಿದರು. ಈ ವೇಳೆ ಅಶೋಕ ಅವರ ಹೆಗಲಿಗೆ ಕೈ ಇಟ್ಟು ಸಿದ್ದರಾಮಯ್ಯ ಅವರು ಆಪ್ತವಾಗಿ ಮಾತನಾಡಿದ್ದು ಗಮನ ಸೆಳೆಯಿತು.
'ಅವಿಶ್ವಾಸ'ದ ಮಾತು
ಸಿಎಂ ಬರುವ ಮುಂಚೆಯೇ ಸ್ಪೀಕರ್ ಖಾದರ್ (UT Khader) ಅವರನ್ನುಅಶೋಕ್, ಸುನೀಲ್ ಕುಮಾರ್ ಭೇಟಿಯಾದರು. ಈ ವೇಳೆ ಸಿದ್ದರಾಮಯ್ಯನವರಿಗೆ ಕೈಕುಲುಕಿ ವಿಪಕ್ಷ ನಾಯಕರು ಶುಭ ಕೋರಿದರು. ಈ ವೇಳೆ ಸಿಎಂ, ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಾಡ್ತೀರೇನಪ್ಪಾ ಎಂದು ನಗುನಗುತ್ತಲೇ ಸಿಎಂ ಕಿಚಾಯಿಸಿದರು. ಇದಕ್ಕೆ ಇಬ್ಬರು ನಾಯಕರು ಯಾವುದೇ ಉತ್ತರ ನೀಡದೇ ನಕ್ಕಿದರು.
ಏನ್ ಸಣ್ಣ ಆಗಿದ್ಯಾ? ಎಂದ ಸಿದ್ದರಾಮಯ್ಯ
ಈ ವೇಳೆ ಅಶೋಕ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಏನ್ ಸಣ್ಣ ಆಗಿದ್ದೀಯಾ ಅಶೋಕ್' ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಶೋಕ್, 'ನಿಮ್ಮ ಥರ ನಾಟಿ ಕೋಳಿ ತಿನ್ನಲ್ಲ ಸರ್. ನಾನು ಎಲ್ಲವನ್ನು ಬಿಟ್ಟಿದ್ದೀನಿ ಎಂದರು. ಈ ಉತ್ತರಕ್ಕೆ ಸಿಎಂ, ಹೇ.. ತಿನ್ನು ಏನೂ ಆಗಲ್ಲ. ಬಾ ತಿನ್ನೋಣ ಎಂದರು. ಇದಕ್ಕೆ ಅಶೋಕ್ ನಕ್ಕು ಮುಂದೆ ಸಾಗಿದರು.
ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣಸೌದಲ್ಲಿ ಸ್ಪೀಕರ್ ಯು.ಟಿ.ಖಾದರ್, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ಅವರ ಜೊತೆ ಚರ್ಚೆ ನಡೆಸಿದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಕಾನೂನು ಸಲಹಗರರಾದ ಪೊನ್ನಣ್ಣ ಅವರು ಉಪಸ್ಥಿತರಿದ್ದರು.
Advertisement