Bengaluru Heart Attack
ಪತಿಗೆ ರಸ್ತೆಯಲ್ಲೇ ಹೃದಯಾಘಾತ, ನೆರವಿಗೆ ಬಾರದ ಜನ

'ಅಣ್ಣಾ ಕಾಪಾಡಿ ಪ್ಲೀಸ್': ರಸ್ತೆಯಲ್ಲೇ ಪತಿಗೆ Heart Attack, ಜೀವ ಉಳಿಸಲು ಅಂಗಲಾಚಿದ ಪತ್ನಿ.. ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ!

ರಸ್ತೆಯಲ್ಲಿ ಬಿದ್ದು ಆತ ಒದ್ದಾಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್‌, ಗೂಡ್ಸ್‌ ವಾಹನ ಎಲ್ಲದಕ್ಕೂ ಕೈಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ.
Published on

ಬೆಂಗಳೂರು: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಂತೆ ಆತನ ಪತ್ನಿ ಅಂಗಲಾಚಿದರೂ ಸುತ್ತಮುತ್ತಲ ಜನ ನೆರವಾಗದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿ ಬಳಿ ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 34 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿದ್ದು, ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಮುಂದೆ ಬಾರದ ಕಾರಣ, ಅವರು ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಡಿಸೆಂಬರ್ 13 ರಂದು ಬನಶಂಕರಿ ಬಳಿಯ ಕದಿರೇನಹಳ್ಳಿಯ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, 34 ವರ್ಷದ ವೆಂಕಟರಮಣನ್ ಹೃದಯಾಘಾತದಿಂದ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಚಲಿಸುತ್ತಿದ್ದ ಬೈಕ್‌ನಲ್ಲಿಯೇ ವ್ಯಕ್ತಿಗೆ ಹೃದಯಾಘಾತವಾಗಿದೆ. ರಸ್ತೆಯಲ್ಲಿ ಬಿದ್ದು ಆತ ಒದ್ದಾಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್‌, ಗೂಡ್ಸ್‌ ವಾಹನ ಎಲ್ಲದಕ್ಕೂ ಕೈಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ.

ಇದರಿಂದಾಗಿ 34 ವರ್ಷದ ವ್ಯಕ್ತಿ ಸಾವಿನ ಕೊನೆಯ ಕ್ಷಣದಲ್ಲಿ ಒದ್ದಾಟ ಅನುಭವಿಸಿ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ವ್ಯಕ್ತಿಗೆ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಹಾರ್ಟ್‌ ಅಟ್ಯಾಕ್‌ ಆದ ಸೂಚನೆ ಸಿಕ್ಕಿತ್ತು. ಆಂಬ್ಯುಲೆನ್ಸ್ ಸಿಗದ ಹಿನ್ನಲೆಯಲ್ಲಿ ಬೈಕ್ ನಲ್ಲೇ ದಂಪತಿ ಆಸ್ಪತ್ರೆಗೆ ಹೋಗುತ್ತಿದ್ದರು.

ಈ ವೇಳೆ ಚಲಿಸುತ್ತಿದ್ದ ಬೈಕ್‌ನಲ್ಲೇ ಮತ್ತೊಮ್ಮೆ ದೊಡ್ಡ ಹಾರ್ಟ್‌ ಅಟ್ಯಾಕ್‌ ಆಗಿದೆ. ಈ ವೇಳೆ ಆತ ಬೈಕ್‌ನಿಂದ ಕೆಳಗೆ ಬಿದ್ದು ರಸ್ತೆಯಲ್ಲಿಯೇ ಒದ್ದಾಟ ನಡೆಸಿದ್ದಾರೆ. ಪತ್ನಿ ಜನರ ಸಹಾಯ ಕೇಳಲು ಮುಂದಾದರೆ ಯಾರೂ ಕೂಡ ಸಹಾಯಕ್ಕೆ ಧಾವಿಸಲಿಲ್ಲ. ಇದರಿಂದಾಗಿಯೇ ಅಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

ಇಟ್ಟುಮಡುವಿನ ಬಾಲಾಜಿನಗರ ನಿವಾಸಿಯಾಗಿರುವ 34 ವರ್ಷದ ವೆಂಕಟರಮಣನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬುಧವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಪತ್ನಿಯೊಂದಿಗೆ ಬೈಕ್‌ನಲ್ಲಿಯೇ ಜಯದೇವ ಹೃದಯ ಆಸ್ಪತ್ರೆ ಕಡೆಗೆ ಹೊರಟಿದ್ದರು. ಮನೆಯಿಂದ ಕೇವಲ 100 ಮೀಟರ್ ದೂರ ಬಂದಾಗಲೇ ವೆಂಕಟರಮಣನ್‌ಗೆ ಲಘು ಹೃದಯಾಘಾತ ಸಂಭವಿಸಿದೆ.

ಚಲಿಸುತ್ತಿದ್ದ ಬೈಕ್‌ನಲ್ಲೇ ತೀವ್ರ ಹೃದಯಾಘಾತವಾದ ಕಾರಣ, ವೆಂಕಟರಮಣನ್ ರಸ್ತೆ ಮಧ್ಯೆ ಕುಸಿದುಬಿದ್ದಿದ್ದರು. ನೋವಿನಿಂದ ಒದ್ದಾಡುತ್ತಿದ್ದರೂ, ಸುತ್ತಮುತ್ತಲಿದ್ದ ಜನರು ನೆರವಿಗೆ ಬರಲಿಲ್ಲ. ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಕೈಮುಗಿದು ಅಂಗಲಾಚಿದರೂ ಸಹಾಯಕ್ಕೆ ಯಾರೂ ಮುಂದಾಗಲಿಲ್ಲ. ಆಂಬ್ಯುಲೆನ್ಸ್ ಸಿಗದ ಹಿನ್ನೆಲೆ, ದಂಪತಿ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳಲು ಪ್ರಯತ್ನಿಸಿದ್ದಾರೆ.

ಆದರೆ ಮಾರ್ಗಮಧ್ಯೆ ಕದೇರನಹಳ್ಳಿ ಸಮೀಪ ವೆಂಕಟರಮಣನ್ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್ ಕುಟುಂಬಸ್ಥರು, ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪತ್ನಿ ರೂಪಾ ಆರೋಪ

ಇನ್ನು ಮೃತ ವೆಂಕಟರಮಣ ಪತ್ನಿ ರೂಪ ಪತಿಯನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದು, ಅವರಿಗೆ ಮನೆಯಲ್ಲೆ ಎದು ನೋವು ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳಿಯ ಆಸ್ಪತ್ರೆಗೆ ಬೈಕಿನಲ್ಲೇ ಹೋದ್ವಿ. ಮೇಜರ್ ಇದೆ ಜಯದೇವಾಗೆ ಹೋಗಿ ಅಂತ ವೈದ್ಯರು ಹೇಳಿದರು. ಆದರೆ ಈ ವೇಳೆ ಆಸ್ಪತ್ರೆಯವರು ಒಂದು ಆ್ಯಂಬುಲೆನ್ಸ್ ವ್ಯವಸ್ಥೆ ಕೂಡ ಮಾಡಲಿಲ್ಲ. ಜಯದೇವ ಆಸ್ಪತ್ರೆಗೆ ನಾವು ಬೈಕಿನಲ್ಲೆ ಹೊರಟ್ವಿ. ಅದ್ರೆ ಕದೇರನಹಳ್ಳಿ ಬಳಿ ಹೋಗ್ತಾ ಅವ್ರಿಗೆ ಎದೆನೋವು ಜಾಸ್ತಿಯಾಯ್ತು.

Bengaluru Heart Attack
ತೆಗೆದುಕೊಂಡದ್ದು 1 ಲಕ್ಷ ರೂ ಸಾಲ; ಬಡ್ಡಿ, ಚಕ್ರಬಡ್ಡಿ ಸೇರಿ ಆದದ್ದು 74 ಲಕ್ಷ ರೂ: ಕಿಡ್ನಿ ಮಾರಿದ ರೈತ!

ರಸ್ತೆಯಲ್ಲೇ ಬೈಕ್ ಅಪಘಾತ

ಎದೆನೋವು ತಡೆಯಲಾಗದೇ ಮತ್ತೊಂದು ಬೈಕ್ ಗೆ ಅಪಘಾತವಾಗಿ ರಸ್ತೆಯಲ್ಲೆ ಇಬ್ಬರೂ ಬಿದ್ವಿ. ನನಗೆ ಗಾಯವಾಗಿ ರಕ್ತ ಬರ್ತಿದ್ರೂ ಎಲ್ಲರಲ್ಲೂ ಕೈ ಮುಗಿದು ಕೇಳಿಕೊಂಡೆ. ರಸ್ತೆಯಲ್ಲಿ ಹೋಗುವವರು ಯಾರು ನಮ್ಮ ಕಡೆ ನೋಡಲೆ ಇಲ್ಲ. ಯಜಮಾನ್ರು ಕಣ್ಣು ಬಿಟ್ಟು ತಲೆ ಎತ್ತಿ ನನ್ನನ್ನ ಬೇಡ್ತಾ ಇದ್ರೂ. ಅವ್ರಿಗೆ ಮಕ್ಕಳನ್ನ ನೋಡ್ಬೇಕು ಅನ್ನೋ ಆಸೆಯಾಗಿತ್ತು.15 ನಿಮಿಷ ಆದ್ಮೆಲೆ ಒಬ್ಬರು ಕ್ಯಾಬ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ್ರು. ಅಷ್ಟರಲ್ಲಿ ಅವರ ಪ್ರಾಣ ಹೋಗಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ನೇತ್ರದಾನ

ಅವ್ರ ಎರಡೂ ಕಣ್ಣನ್ನ ನಾನು ದಾನ ಮಾಡಿದ್ದೇವೆ. ಅದ್ರಿಂದ ಯಾರಿಗಾದ್ರೂ ದೃಷ್ಟಿ ಬಂದ್ರೆ ಅವ್ರಿಗಾದ್ರೂ ಉಪಯೋಗ ಆಗ್ಲಿ.ಜನ ಸ್ವಲ್ಪನಾದ್ರೂ ಮಾನವೀಯತೆ ಹೊಂದಿರಬೇಕು. ಜನ ಮಾನವೀಯತೆಯನ್ನೆ ಮರೆತಿದ್ದಾರೆ ಎಂದು ರೂಪ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com