
ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನಾಚರಣೆಯಾದ ಮಂಗಳವಾರ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನಾಲ್ಕು ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಅವಕಾಶ ನೀಡಲಾಯಿತು.
ನಗರ ಪೊಲೀಸರು, ಪರಿಹಾರ ಸಂಸ್ಥೆ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೋಲಾಜಿ ಸಹಯೋಗದಲ್ಲಿ ಕ್ಯಾನ್ಸರ್ ದಿನಾಚರಣೆಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಕ್ಯಾನ್ಸರ್ನಿಂದ ಬಳಲುತ್ತಿರುವ 12 ರಿಂದ 14 ವರ್ಷದೊಳಗಿನ ವಿಶ್ವಾಸ್, ಜೀವನ್ ಕುಮಾರ್, ದಾನಮ್ಮ ಮತ್ತು ದಿವ್ಯಶ್ರೀ ಪೊಲೀಸ್ ಸಮವಸ್ತ್ರ ಧರಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ 1 ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಖುದ್ದು ಈ ನಾಲ್ವರು ಮಕ್ಕಳಿಗೆ ಹೂಗುಚ್ಛ ನೀಡಿ ತಮ್ಮ ಕಚೇರಿಗೆ ಸ್ವಾಗತಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ದಯಾನಂದ ಅವರು ಕ್ಯಾನ್ಸರ್ ದೇಹದ ಕಾಯಿಲೆ ಮತ್ತು ಅಪರಾಧವು ಸಮಾಜದ ಕಾಯಿಲೆ. ಪೊಲೀಸ್ ಸಿಬ್ಬಂದಿ ಅಪರಾಧವನ್ನು ಸಮಾಜದಿಂದ ತೆಗೆದುಹಾಕಲು ಹೋರಾಡುತ್ತಾರೆಂದು ಹೇಳಿದರು.
Advertisement