
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2025ಕ್ಕೆ ದಿನಗಣನೆ ಶುರುವಾಗಿದ್ದು, ಈ ನಡುವೆ ಭಾರತೀಯ ವಾಯುಸೇನೆ ಯಲಹಂಕದ ವಾಯುನೆಲೆಯಲ್ಲಿ ಗುರುವಾರ ನಡೆಸಿದ ಯುದ್ಧ ವಿಮಾನಗಳ ತಾಲೀಮು ಮೈನವಿರೇಳಿಸುವಂತಿತ್ತು.
ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್, ಸರಕು ವಿಮಾನ, ಲಭು ತರಬೇತಿ ವಿಮಾನ, ಮಿಲಿಟರಿ ರಹಸ್ಯ ಕಾರ್ಯಾಚರಣ ವಿಮಾನಗಳು ತಾಲೀಮು ನಡೆಸಿದವು.
ಈ ಪೈಕಿ ಸೂರ್ಯ ಕಿರಣ್ ತಂಡ ಹೆಚ್ಚು ಗಮನ ಸೆಳೆಯಿತು. ನೀಲಾಕಾಶದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸಂಯೋಜನೆ ವಿಮಾನಗಳು 5 ಮೀಟರ್ ಸಮೀಪದ ಅಂತರ ಕಾಪಾಡಿಕೊಂಡ ನೂರಾರು ಕಿ.ಮೀ ವೇಗದಲ್ಲಿ ಹಾರುತ್ತಿತ್ತು. ಇದು ನೋಡುಗರ ಮೈ ಜುಂ ಎನ್ನುವಂತೆ ಮಾಡಿತು.
ತಲಾ ಎ2 ಡು ವಿಮಾನಗಳು ವಿರುದ್ಧ ದಿಕ್ಕಿನಲ್ಲಿ ನೂರಾರು ಕಿ.ಮೀ ವೇಗದಲ್ಲಿ ಹಾರುತ್ತ ಮುಖಾಮುಖಿ ಡಿಕ್ಕಿಯಾಗುತ್ತವೆ ಎನ್ನುವಷ್ಟರಲ್ಲಿ ತಿರುವು ತೆಗೆದುಕೊಂಡು ಸುರಕ್ಷಿತವಾಗಿ ಸಾಗುವ ಕ್ಷಣಗಳು ವೀಕ್ಷಕರ ಹೃದಯ ಬಡಿತ ಹೆಚ್ಚಿಸಿದವು. ನೀಲಾಕಾಶದಲ್ಲಿ ಬಿಳಿ ಹೊಗೆ ಬಿಡುತ್ತಾ ರಚಿಸಿದ ‘ಹೃದಯ ಚಿಹ್ನೆ’ ಸೇರಿದಂತೆ ವಿವಿಧ ಆಕಾರಗಳು ಕಣ್ಣಿಗೆ ಮುದ ನೀಡಿದವು.
ಇನ್ನು ಭಾರತೀಯ ವಾಯುಸೇನೆಯ ಬೆನ್ನೆಲೆಬು ಎಂದು ಕರೆಯಲಾಗುವ ಯುದ್ಧ ವಿಮಾನ ಸುಖೋಯ್ ಎಸ್ಯು-30 ಮತ್ತು ಎಚ್ಎಎಲ್ ಲಘು ಯುದ್ಧ ವಿಮಾನ ತೇಜಸ್ ಗರ್ಜಿಸಿದವು. ಎಚ್ಎಎಲ್ನ ವಿವಿಧ ಹೆಲಿಕಾಪ್ಟರ್ಗಳು ಆಕರ್ಷಕ ಪ್ರದರ್ಶನ ನೀಡಿದವು.
ವಾಯುಸೇನೆಯ ಯುದ್ಧ ವಿಮಾನಗಳ ತಾಲೀಮು ಜನರ ಉತ್ಸಾಹವನ್ನು ಹೆಚ್ಚಿಸಿದ್ದರೂ ಸ್ಥಳದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬೇಸರವನ್ನು ತರಿಸಿದೆ.
ಭಾರತೀಯ ವಾಯುಪಡೆ ಮತ್ತು ಸಿಐಎಸ್ಎಫ್ ಸಿಬ್ಬಂದಿ ಅವರು ಮಾತನಾಡಿ, ಪ್ರತಿ ವರ್ಷವೂ ಪರಿಸ್ಥಿತಿ ಒಂದೇ ಆಗಿರುತ್ತದೆ. ಏರೋ ಇಂಡಿಯಾ ವೀಕ್ಷಣೆಗೆ ಗೊತ್ತುಪಡಿಸಿದ ಸ್ಥಳದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವರ್ಷಗಳಿಂದಲೂ ಮೂಲಭೂತ ಸೌಲಭ್ಯ ಕೊರತೆ ಬಗ್ಗೆ ಜನರು ದೂರು ನೀಡುತ್ತಲೇ ಇದ್ದಾರೆ. ಆದರೆ, ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ವೀಕ್ಷರಾಗಿ ಬಂದಿದ್ದ ಜಾನ್ಸಿ ಬಿ ಎಂಬುವವರು ಮಾತನಾಡಿ, ಏರೋ ಇಂಡಿಯಾ ನೋಡಲು ಬರುವ ಜನರಿಗೆ ಕುಳಿತುಕೊಳ್ಳಲು ಹಾಗೂ ನಿಲ್ಲಲು ಸರ್ಕಾರ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಹೇಳಿದರು.
ಧೂಳು ಏಳದಂತೆ ಮಾಡಲು ರಸ್ತೆ ಹಾಗೂ ಶಾಲಾ ಮೈದಾನಗಳಲ್ಲಿ ನೀರಿನ ಸಿಂಪಡಣೆ ಮಾಡಲಾಗುತ್ತದೆ. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಸ್ಥಳದಲ್ಲಿ ಇಂತಹ ಯಾವುದೇ ಕ್ರಮ ಕೈಗೊಳ್ಳದಿರುವುದು ಆಘಾತ ತಂದಿದ ಎಂದು ಮತ್ತೊಬ್ಬ ವೀಕ್ಷಕ ಶೋಭೋಜಿತ್ ಎಲ್ ಎಂಬುವವರು ಹೇಳಿದ್ದಾರೆ.
ಎರಡು ಶೆಡ್ಗಳಲ್ಲಿ ಮಾತ್ರ ಸ್ಪೀಕರ್ ಗಳಿದ್ದವು. ಆದರೆ, ಅಷ್ಟಾಗಿ ಕೇಳಿಸುತ್ತಿರಲಿಲಲ. ಹೆಚ್ಚಿನವರು ಹೊರಗೇ ನಿಂತಿದ್ದರಿಂದ ಯಾವ ವಿಮಾನ ಹಾರುತ್ತಿದೆ, ಎಲ್ಲಿ ನೋಡಬೇಕು ಎಂಬುದೇ ತಿಳಿಯುತ್ತರಲಿಲ್ಲ. ಸ್ಥಳದಲ್ಲಿ ಮತ್ತಷ್ಟು ಸ್ಪೀಕರ್ ಗಳ ಅಳವಡಿಕೆ ಮಾಡಬೇಕು ಎಂದು ಮತ್ತೊಬ್ಬ ವೀಕ್ಷಕ ಪವೀನ್ ಎಲ್ ಎಂಬುವವರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ತಂಡವು, ಸ್ಪೀಕರ್ ಗಳ ಅಳವಡಿಸಲಾಗುವುದು ಎಂದು ಭರವಸೆ ನೀಡಿದೆ.
ಯುದ್ಧ ವಿಮಾನಗಳು ತಾಲೀಮು ನಡೆಸುತ್ತಿದ್ದರಿಂದ ಸಮಸ್ಯೆಗಳು ಎದುರಾಗಿತ್ತು. ನೀರು ಸಿಂಪಡಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
Advertisement