
ಬೆಂಗಳೂರು: ಬೆಂಗಳೂರಿನಲ್ಲಿ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳದ ಆಯ್ಕೆಯ ಕುರಿತು ಚರ್ಚೆ ನಡೆಸುವುದು ಅನಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಗುರುವಾರ ಹೇಳಿದರು.
ಸುದ್ದಿಗಾರರೊಂದಗೆ ಮಾತನಾಡಿದ ಅವರು, ಬೆಂಗಳೂರಿನ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಜಿಲ್ಲೆಯಲ್ಲಿ ಆಗಲಿ ಎಂಬುವುದು ನಮ್ಮ ಬೇಡಿಕೆ. ಅಂತಿಮವಾಗಿ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಸ್ಥಾಪನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಎರಡನೇ ಏರ್ಪೋರ್ಟ್ ತುಮಕೂರಿನಲ್ಲೇ ಆಗಬೇಕೆಂಬುವುದು ನಮ್ಮ ಬೇಡಿಕೆಯಾಗಿದೆ, ಬೇರೆಯವರೂ ತಮ್ಮದೇ ಆದ ಬೇಡಿಕೆಯನ್ನು ಇಡಬಹುದು. ಇದರ ಬಗ್ಗೆ ಚರ್ಚಿಸಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.
ತಮಿಳುನಾಡು ಸರ್ಕಾರದಿಂದ ಹೊಸೂರಿನಲ್ಲಿ ಏರ್ ಪೋರ್ಟ್ ಬೇಡಿಕೆ ಮೊದಲಿಂದಲೇ ಇದೆ. ಕೇಂದ್ರಕ್ಕೂ ಪ್ರಸ್ತಾವನೆ ಕಳುಹಿಸಿದ್ದಾರೆ.
ಬೆಂಗಳೂರು ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. 35 ನಿಮಿಷದ ಪ್ರಯಾಣಕ್ಕೆ 2 ಗಂಟೆ ತೆಗೆದುಕೊಳ್ಳುತ್ತಿದೆ. ಅಂತರಾಷ್ಟ್ರೀಯ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಈ ನಿಟ್ಟಿನಲ್ಲಿ 2ನೇ ಏರ್ ಪೋರ್ಟ್ ಬೇಕು. ಈಗಾಗಲೇ ಮುಂಬೈ, ದೆಹಲಿಯಲ್ಲಿ ಎರಡೆರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಇವೆ. ಹೀಗಾಗಿ ಬೆಂಗಳೂರಿನಲ್ಲೂ ಆಗಬೇಕು ಎಂಬುವುದು ಬೇಡಿಕೆಯಾಗಿದೆ. ನಮ್ಮ ರಾಜ್ಯದ ಬೆಳವಣಿಗೆ ದೃಷ್ಟಿಯಿಂದ ಇದು ಅನುಕೂಲಕರವಾಗಿದೆ. ಆದರೆ, ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಅನುಮತಿ ಕೊಡುತ್ತೆ ನೋಡಬೇಕು ಎಂದು ತಿಳಿಸಿದರು.
ತುಮಕೂರು ಭಾಗದಲ್ಲಿ ಆಗಲಿ ಎಂಬುವುದು ನಮ್ಮ ಬೇಡಿಕೆ, ಬೇರೆಯವರು ಅವರ ಬೇಡಿಕೆ ಇಟ್ಟಿದ್ದಾರೆ. ಈಗಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮನಾ ನಿಲ್ದಾಣವನ್ನು ಬಿಡದಿಯಲ್ಲಿ ಮಾಡಬೇಕು ಎಂಬ ಪ್ರಸ್ತಾವನೆ ಇತ್ತು. ಆದರೆ ತಾಂತ್ರಿಕ ಕಾರಣದಿಂದ ಆಗಿರಲಿಲ್ಲ. ಎಲ್ಲಿ ವಿಮಾನ ನಿಲ್ದಾಣ ಮಾಡಬೇಕು ಎಂಬ ಬಗ್ಗೆ ಸ್ಥಳ ಅಂತಿಮಗೊಂಡಿಲ್ಲ. ಇದೀಗ ಮತ್ತೊಂದು ಬಾರಿ ಬಿಡದಿಯನ್ನು ಪರಿಗಣಿಸಲಾಗುತ್ತದಾ ಎಂಬುವುದನ್ನು ನೋಡಬೇಕಾಗಿದೆ ಎಂದು ಹೇಳಿದರು.
Advertisement