

ಬೆಂಗಳೂರು: ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ತೋರಿಸಿ, ಸಹಕರಿಸುವಂತೆ ತಾನು ಮಾಡಿದ ಒತ್ತಾಯವನ್ನು ಕೇಳದ ಪತಿಯನ್ನು ಪತಿಯೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ನಡೆದಿದೆ.
ಮಮತಾ (33) ಕೊಲೆಯಾದ ದುರ್ದೈವಿ. ಸುರೇಶ್ (40) ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದಾನೆ.
ಸುರೇಶ್ ಮತ್ತು ಮಮತಾ ದಂಪತಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಸುರೇಶ್ ಕುಡಿದು ಬಂದು ಪತ್ನಿ ಜತೆ ಜಗಳ ಮಾಡುತ್ತಿದ್ದ. ಬುಧವಾರ ಬೆಳಗ್ಗೆ ಕೂಡ ಪತಿ-ಪತ್ನಿ ಮಧ್ಯೆ ಜಗಳವಾಗಿದೆ. ಜಗಳದ ವೇಳೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಸುರೇಶ್ ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್. ಪುರದವರು. ಪತ್ನಿ ಮಮತ ತುಮಕೂರು ಜಿಲ್ಲೆ ನಿಡುವಳ್ಳಿಯವರು. ಕಳೆದ 13 ವರ್ಷದ ಹಿಂದೆ ವಿವಾಹ ಮಾಡಿಕೊಂಡಿದ್ದು, ಇತ್ತೀಚೆಗೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೆ, ಹೆಂಡತಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸೆಕ್ಸ್ ವಿಚಾರಕ್ಕೆ ಪತ್ನಿ ಮಮತಾ ಜೊತೆಗೆ ಸುರೇಶ್ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಮೊಬೈಲ್ ಫೋನ್ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ, ಅದೇ ರೀತಿ ಸಹಕರಿಸಲು ಒತ್ತಾಯ ಮಾಡುತ್ತಿದ್ದ. ಈ ಬಗ್ಗೆ ಬೇಸತ್ತಿದ್ದ ಮಮತಾ ಗಂಡನ ಕಿರುಕುಳದ ಬಗ್ಗೆ ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದಳು. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ದಂಪತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕಡೆ ಮನೆಯವರು ಮಾತಾಡಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು.
ಇದಾದ ನಂತರ ದೊಡ್ಡ ಮಗನನ್ನ ನಾವು ನೋಡಿಕೊಳ್ಳುತ್ತೇವೆ ಎಂದು 10 ವರ್ಷದ ಮಗನನ್ನು ಸುರೇಶನ ಪೋಷಕರು ಕರೆದೊಯ್ದಿದ್ದರು. ಸಣ್ಣ ಮಗ ಅಪ್ಪ ಸುರೇಶ್, ಅಮ್ಮ ಮಮತಾ ಜೊತೆಯಲ್ಲಿದ್ದನು. ನಿನ್ನೆ ಬೆಳಗ್ಗೆ ಮತ್ತೆ ಪತಿ-ಪತ್ನಿ ಮಧ್ಯೆ ಜಗಳ ಶುರುವಾಗಿದ್ದು, ಮಗ ಟಿವಿ ನೋಡುತ್ತಿದ್ದಾಗಲೇ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ನಡುವೆ ಬೆಳಿಗ್ಗೆ 11.30ರ ಸುಮಾರಿಗೆ ಅಜ್ಜಿಗೆ ಕರೆ ಮಾಡಿದ್ದ ಮಗು, ‘ಅಮ್ಮ ಮಾತನಾಡುತ್ತಿಲ್ಲ. ತಕ್ಷಣವೇ ಬನ್ನಿ’ ಎಂದು ಮನವಿ ಮಾಡಿದ್ದಾನೆ. ಅಜ್ಜಿ ಬಂದು ನೋಡಿದಾಗ ಮಮತಾ ಉಸಿರಾಡುತ್ತಿರಲಿಲ್ಲ. ಮೂಗಿನಿಂದ ರಕ್ತ ಬಂದಿರುವುದು, ಸುರೇಶ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement