
ಬೆಂಗಳೂರು: ಬೆಂಗಳೂರಲ್ಲಿ ಅಮೆರಿಕಾ ರಾಯಭಾರ ಕಚೇರಿ ಆರಂಭಗೊಳ್ಳುತ್ತಿದ್ದು, ವರ್ಷಗಳ ಪಟ್ಟು ಬಿಡದೆ ನಿರಂತರತೆವಾಗಿ ನಡೆಸಿದ ಯತ್ನ ಅಂತಿಮವಾಗಿ ಸಾಕಾರಗೊಂಡಿದೆ ಎಂದು ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ನವದೆಹಲಿಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ ಅವರು, ಕರ್ನಾಟಕದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಕೇಂದ್ರವಾಗಿ ಜಾಗತಿಕವಾಗಿ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಆರಂಭವಾಗುವುದರೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಈ ಮಹತ್ವದ ಬೆಳವಣಿಗೆಯು ಬೆಂಗಳೂರಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದಲ್ಲದೆ, ಈ ಕನಸನ್ನು ನನಸಾಗಿಸಲು ಸತತವಾಗಿ ಶ್ರಮಿಸಿದ ಹಲವು ನಾಯಕರ ಅವಿರತ ಪ್ರಯತ್ನಕ್ಕೆ ಸಂದ ಜಯವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಆರಂಭಿಸಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾಯಕರ ಈ ಬೆಂಬಲ ಭಾರತ ಹಾಗೂ ಅಮೆರಿಕಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ.
2006 ರಲ್ಲಿ ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಸ್ಥಾಪನೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂದಿನಿಂದ ವಿದೇಶಾಂಗ ಸಚಿವಾಲಯದೊಂದಿಗೆ ಸತತವಾಗಿ ಮಾತುಕತೆ ನಡೆಸಲಾಗುತ್ತಿತ್ತು. ದುರದೃಷ್ಟವಶಾತ್, ಯುಪಿಎ ಆಡಳಿತಾವಧಿಯಲ್ಲಿ ಮತ್ತೊಂದು ರಾಜ್ಯದ ಮುಖ್ಯಮಂತ್ರಿಯಿಂದ ರಾಜಕೀಯ ಒತ್ತಡದಿಂದಾಗಿ ರಾಯಭಾರ ಕಚೇರಿ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಾರಣವಾಯಿತು. ಆದರೂ ಕುಗ್ಗಲಿಲ್ಲ. 2018ರಲ್ಲಿ ಮುಖ್ಯಮಂತ್ರಿಯಾದಾಗ ಭಾರತದಲ್ಲಿನ ಆಗಿನ ಅಮೆರಿಕಾ ರಾಯಭಾರಿ ಕೆನ್ನೆತ್ ಜಸ್ಟರ್ ಅವರನ್ನು ಭೇಟಿ ಮಾಡಿದ್ದೆ. ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಸ್ಥಾಪಿಸಲು ಮನವಿ ಮಾಡಿಕೊಂಡಿದ್ದೆ. ಜಸ್ಟರ್ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಆರಂಭವಾಗುವುದರಲ್ಲಿ ಪ್ರಧಾನಿ ಮೋದಿ ಅವರ ಒತ್ತಾಸೆ ಇದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಸಹಕಾರವೂ ಇದೆ’ ಎಂದು ತಿಳಿಸಿದ್ದಾರೆ.
Advertisement