
ಬೆಂಗಳೂರು: ಎಲ್.ಕೆ. ಅತೀಕ್ ಅವರ ನಿವೃತ್ತಿಗೆ ಇನ್ನು ಕೇವಲ ಎರಡು ವಾರಗಳು ಬಾಕಿ ಇರುವ ನಡುವೆ, ಸರ್ಕಾರದ ಹಣಕಾಸು ಇಲಾಖೆ ಮತ್ತು ಮುಖ್ಯಮಂತ್ರಿ ಕಚೇರಿಯ ಎಸಿಎಸ್ ಪ್ರಭಾವಿ ಹುದ್ದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಊಹಾಪೋಹಗಳು ಎದ್ದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಾರಿಗೆ ಬಜೆಟ್ ಮಂಡಿಸಲು ಸಿದ್ಧವಾಗುತ್ತಿದ್ದಾರೆ. ಈ ನಡುವೆ, ಎಸಿಎಸ್ ಹಣಕಾಸು ಹುದ್ದೆಯು ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದ್ದು, ತೀವ್ರವಾದ ರಾಜಕೀಯ ತಂತ್ರಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಅತೀಕ್ ಅವರು ದೆಹಲಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಡಿಯಲ್ಲಿ ಮತ್ತು ವಿಶ್ವಬ್ಯಾಂಕ್ನಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದವರು. ಅತೀಖ್ ಅವರ ವೃತ್ತಿಜೀವನ ಸುದೀರ್ಘವಾಗಿದ್ದು ಮಹತ್ವದ ಹೆಜ್ಜೆಗುರುತನ್ನು ಬಿಟ್ಟುಹೋಗುತ್ತಿದ್ದಾರೆ. ಅವರಿಗೆ ಯೋಗ್ಯ ಉತ್ತರಾಧಿಕಾರಿಯನ್ನು ಹುಡುಕುವುದು ಸುಲಭದ ಕೆಲಸವಲ್ಲ. ಹಾಗಾದರೆ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಪ್ರಶ್ನೆ ಎದ್ದಿದೆ.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಹುದ್ದೆಗೆ ಸಂಭಾವ್ಯ ಅಧಿಕಾರಿಗಳ ಪಟ್ಟಿ ಸಾಕಷ್ಟು ಸಂಚಲನವನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನದಲ್ಲಿ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಇದ್ದಾರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಉಮಾ ಮಹಾದೇವನ್ ಅವರ ಹೆಸರುಗಳು ಕೂಡ ಕೇಳಿಬರುತ್ತಿವೆ. ಶೀಘ್ರದಲ್ಲೇ ನಿವೃತ್ತರಾಗಲಿರುವ ಎಸ್.ಆರ್. ಉಮಾಶಂಕರ್ ಅವರ ಹೆಸರು ಕೂಡ ಕೇಳಿಬರುತ್ತಿದೆ. ಸೇವಾ ಹಿರಿತನ ನೋಡಿದರೆ ಅಂಜುಮ್ ಪರ್ವೇಜ್ ಅವರನ್ನು ಸರ್ಕಾರ ನೇಮಿಸಿದರೂ ಅಚ್ಚರಿಯಿಲ್ಲ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಉಮಾಶಂಕರ್ ಅವರ ಸ್ಥಾನಕ್ಕೆ ಗಿರಿನಾಥ್ ಅವರ ನೇಮಕವಾದರೂ ಆಗಬಹುದು.
ದೆಹಲಿಯಲ್ಲಿ ನಿಯೋಜನೆಯಲ್ಲಿರುವ ಕೆಲವು ಉನ್ನತ ಅಧಿಕಾರಿಗಳಾದ ಅತುಲ್ ತಿವಾರಿ, ನಿಲಯ ಮಿತಾಶ್, ವಂದನಾ ಗುರ್ನಾನಿ ಮತ್ತು ವಿ ವಿದ್ಯಾವತಿ ಅವರ ಹೆಸರುಗಳು ಸಹ ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕೇಳಿಬರುತ್ತಿದೆ. ಆದರೆ ಇವರು ಬೆಂಗಳೂರಿಗೆ ಬರುವ ಸಾಧ್ಯತೆ ಕಡಿಮೆ. ನಿವೃತ್ತಿಯ ನಂತರದ ಅವಕಾಶಗಳು ಹೆಚ್ಚು ಅನುಕೂಲಕರವಾಗಿರುವ ದೆಹಲಿಯಲ್ಲಿಯೇ ಉಳಿಯಲು ಬಯಸಬಹುದು ಎಂದು ಆಂತರಿಕ ಮೂಲಗಳು ಹೇಳುತ್ತವೆ.
ಅತೀಕ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಬಹುದು ಎಂಬ ವದಂತಿಗಳಿದ್ದರೂ, ಅದು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿಲ್ಲ. ವಿಸ್ತರಣೆಗಳನ್ನು ನೀಡುವುದು ಸ್ಥಾಪಿತ ಶಿಷ್ಟಾಚಾರದ ಭಾಗವಲ್ಲ ಮತ್ತು ಸಿದ್ದರಾಮಯ್ಯ ವಿನಾಯಿತಿಗಳನ್ನು ನೀಡುವ ಬದಲು ನಿಯಮಗಳನ್ನು ಪಾಲಿಸುತ್ತಾರೆ ಎಂದು ಮೂಲಗಳು ಹೇಳುತ್ತವೆ. ಆಂಧ್ರ ಪ್ರದೇಶದಲ್ಲಿ ಕಿರಿಯ ಅಧಿಕಾರಿಯನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ ಇತ್ತೀಚಿನ ನಡೆ ಊಹಾಪೋಹಗಳಿಗೆ ಉತ್ತೇಜನ ನೀಡಿದೆ, ಸಿದ್ದರಾಮಯ್ಯ ಅವರು ಸಂಪ್ರದಾಯಕ್ಕೆ ಬದ್ಧರಾಗಬಹುದೆಂದು ಹೇಳಲಾಗುತ್ತಿದೆ. ಆದರೂ ಅತೀಕ್ ಅವರ ಅವಧಿ ವಿಸ್ತರಣೆಯನ್ನು ತಳ್ಳಿಹಾಕುವಂತಿಲ್ಲ.
ಅಧಿಕಾರಿಯ ನಿವೃತ್ತಿಯ ಗಡುವು ಸಮೀಪಿಸುತ್ತಿದ್ದಂತೆ, ಪರ್ವೇಜ್ ಅವರ ಹೆಸರು ಮುಂಚೂಣಿಯಲ್ಲಿ ಹೆಚ್ಚಾಗಿ ಉಲ್ಲೇಖಿಸಲ್ಪಡುತ್ತಿದ್ದರೂ, ಎಲ್ಲರ ಚಿತ್ತ ಮುಖ್ಯಮಂತ್ರಿಗಳ ಅಂತಿಮ ನಿರ್ಧಾರದ ಮೇಲೆ ಇದೆ.
Advertisement