
ಬೆಂಗಳೂರು: ನಗರದ ಖಾಲಿ ನಿವೇಶನದಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವ ರಾವ್ ಅವರು ಮಂಗಳವಾರ ಸೂಚನೆ ನೀಡಿದರು.
ಮಂಗಳವಾರ ಸಪ್ತಗಿರಿ ವೈದ್ಯಕೀಯ ಕಾಲೇಜು ಬಳಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಅವರು, ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಕಸ ಸುರಿಯುವುದರಿಂದ ಬ್ಲಾಕ್ ಸ್ಪಾಟ್ಗಳು ನಿರ್ಮಾಣವಾಗುತ್ತಿದೆ. ಇದನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಬದಿ, ಖಾಲಿ ನಿವೇಶನದಲ್ಲಿ ಕಸ ಬಿಸಾಡಿದ ಬ್ಲಾಕ್ ಸ್ಪಾಟ್ಗಳು ನಿರ್ಮಾಣ ವಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಿ. ರಸ್ತೆ ಬದಿಯಲ್ಲಿ ಬಿಸಾಡಿರುವ ಸೋಫಾ, ಕುರ್ಚಿ, ಪೀಠೋಪಕರಣ, ಬಟ್ಟೆ, ದಿಂಬು, ಹಾಸಿಗೆ ಸೇರಿ ಇನ್ನಿತರೆ ವಸ್ತುಗಳನ್ನು ಒಣತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಪುನರ್ಬಳಸಲು ವ್ಯವಸ್ಥೆ ಮಾಡಲು ಸೂಚಿಸಿದರು.
ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜ್ ಬಳಿ ಅಡ್ಡ ಮೋರಿ ರಸ್ತೆ ಕಿರಿದಾಗಿದ್ದು, ರಸ್ತೆ 7.5 ಮೀಟರ್ಗೆ ಅಗಲೀಕರಣಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸೂಚಿಸಿದರು.
ಪರಿಶೀಲನೆ ವೇಳೆ ಪಾದಚಾರಿ ಮಾರ್ಗ ಅತಿಕ್ರಮಣಗಳನ್ನು ತೆರವುಗೊಳಿಸಲು, ಕಿರ್ಲೋಸ್ಕರ್ ಲೇಔಟ್ನಲ್ಲಿ ಮರದ ಕೊಂಬೆಗಳನ್ನು ತೆಗೆದುಹಾಕಲು ಮತ್ತು ಸಸಿ ನೆಡುವ ಅಭಿಯಾನವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ನೇವಿ ಲೇಔಟ್ನ ಕೆಲವು ರಸ್ತೆಗಳನ್ನು ಜಲಮಂಡಳಿ ಅಗೆದು ದುರಸ್ತಿ ಮಾಡದೆ ಬಿಟ್ಟಿರುವುದನ್ನು ಗಮನಿಸಿದ ಅವರು, ಹಾನಿಗೊಳಗಾದ ಭಾಗವನ್ನು ಸರಿಪಡಿಸಲು ಸೂಚಿಸಿದರು.
ಈ ಸಂದರ್ಭಧಲ್ಲಿ ವಲಯ ಆಯುಕ್ತ ನವೀನ್ ಕುಮಾರ್ರಾಜು, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.
Advertisement