
ಬೆಂಗಳೂರು: ನಮ್ಮ ಮೆಟ್ರೋದ ಹಳದಿ ಮಾರ್ಗ ವಿಳಂಬವನ್ನು ಖಂಡಿಸಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಶನಿವಾರ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಗೆ ಹಳದಿ ಮಾರ್ಗವನ್ನು ಶೀಘ್ರ ಆರಂಭಿಸಲು ಒತ್ತಾಯಿಸಿ ಬಿಜೆಪಿ ನಾಯಕರು ಲಾಲ್ ಬಾಗ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆರಂಭದಲ್ಲಿ ಬಿಜೆಪಿ ನಾಯಕರು ಬೃಹತ್ ಮೆರವಣಿಗೆ ಮೂಲಕ ಲಾಲ್ ಬಾಗ್ನಿಂದ ಬಿಎಂಆರ್ಸಿಎಲ್ ಕಚೇರಿಗೆ ಸಾಗಲು ಯೋಜಿಸಿದ್ದರು, ಆದರೆ, ಪೊಲೀಸರ ಅನುಮತಿ ಸಿಗದ ಕಾರಣ ಲಾಲ್ ಬಾಗ್ ಹತ್ತಿರವೇ ಪ್ರತಿಭಟನೆಗಿಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಮತ್ತು ಬಸ್ ಎರಡು ಪ್ರಮುಖ ಸಾರ್ವಜನಿಕ ಸಾರಿಗೆ ಸಾಧನಗಳಾಗಿವೆ. ಬಿಎಂಸಿಆರ್ಎಲ್ ಇತ್ತೀಚೆಗೆ ಮೆಟ್ರೋದ ದರಗಳನ್ನು ಶೇ.100ರಷ್ಟು ಹೆಚ್ಚಿಸಿದೆ. ಇದಕ್ಕೂ ಮೊದಲು ಸಮಿತಿಯೊಂದು ಅಂತರರಾಷ್ಟ್ರೀಯ ಪ್ರವಾಸವನ್ನು ನಡೆಸಿ ವರದಿಯನ್ನು ಮಂಡಿಸಿತು. ಈ ವರದಿಯನ್ನು ಆಧರಿಸಿ, ಮೆಟ್ರೋ ದರದಲ್ಲಿ ಶೇ.130 ಹೆಚ್ಚಳವನ್ನು ಜಾರಿಗೆ ತರಲಾಯಿತು. ದರಗಳ ಏರಿಕೆಯ ನಂತರ, ಮೆಟ್ರೋ ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸುಮಾರು 1 ಲಕ್ಷ ಕಡಿಮೆಯಾಗುತ್ತಿದೆ. ಪತ್ರಕರ್ತರು, ಸಾರ್ವಜನಿಕ ಕಾರ್ಯಕರ್ತರು ಆರ್ಟಿಐ ಸಲ್ಲಿಸಿದ್ದಾರೆ. ಮೂರು ತಿಂಗಳುಗಳು ಕಳೆದರೂ ಮಾಹಿತಿಯನ್ನು ಸಾರ್ವಜನಿಕಗೊಳಿಸಿಲ್ಲ. ಅವರು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಬಿಬಿಎಂಪಿ ಆಯುಕ್ತರಾದ ಮಹೇಶ್ವರ್ ರಾವ್ ಅವರು, ಆಗಸ್ಟ್ 15 ರ ಒಳಗೆ ಹಳದಿ ಮೆಟ್ರೋ ಓಪನ್ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.
ಆಗಸ್ಟ್ 15 ರೊಳಗೆ ಹಳದಿ ಮಾರ್ಗವನ್ನು ತೆರೆಯುವ ವಿಶ್ವಾಸವಿದೆ.. "ಮೇಕ್ ಇನ್ ಇಂಡಿಯಾ ಷರತ್ತಿನಿಂದಾಗಿ ರೈಲು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಳದಿ ಮಾರ್ಗ ತೆರೆಯುವಲ್ಲಿ ವಿಳಂಬವಾಗಿದೆ. ನಮ್ಮಲ್ಲಿ ಕೇವಲ ಮೂರು ರೈಲುಗಳಿವೆ. ಮಾರ್ಗವನ್ನು ತೆರೆಯಲು CMRS ಅನುಮೋದನೆ ಪ್ರಮುಖವಾಗಿದೆ ಎಂದು ಹೇಳಿದ್ದಾರೆ.
Advertisement