'ಹೂಡಿಕೆದಾರರು ಬೇರೆ ರಾಜ್ಯಕ್ಕೆ ಹೋಗಲು ಬಿಡುವುದಿಲ್ಲ': ನಾರಾ ಲೋಕೇಶ್ ಹೇಳಿಕೆಗೆ ಜಿ ಪರಮೇಶ್ವರ ತಿರುಗೇಟು

ಕರ್ನಾಟಕ ಸರ್ಕಾರವು ದೇವನಹಳ್ಳಿಯಲ್ಲಿ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಹೂಡಿಕೆದಾರರಿಗೆ ಪರ್ಯಾಯ ಸ್ಥಳವನ್ನು ನೀಡುತ್ತದೆ ಎಂದು ಹೇಳಿದರು.
G Parameshwara
ಗೃಹ ಸಚಿವ ಜಿ ಪರಮೇಶ್ವರ
Updated on

ಬೆಂಗಳೂರು: ಏರೋಸ್ಪೇಸ್ ಪಾರ್ಕ್ ಅನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಒತ್ತಾಯಿಸಿದ ನಂತರ, ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು ಹೂಡಿಕೆದಾರರನ್ನು ಇತರ ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಕರ್ನಾಟಕ ಸರ್ಕಾರವು ದೇವನಹಳ್ಳಿಯಲ್ಲಿ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಹೂಡಿಕೆದಾರರಿಗೆ ಪರ್ಯಾಯ ಸ್ಥಳವನ್ನು ನೀಡುತ್ತದೆ ಎಂದು ಹೇಳಿದರು.

'ದೇವನಹಳ್ಳಿಯಲ್ಲಿ ನಮಗೆ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಬೇರೆ ಸ್ಥಳದಲ್ಲಿ ನಾವು ಭೂಮಿ ನೀಡುತ್ತೇವೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಇತರ ರಾಜ್ಯಗಳಿಗೆ ಹೋಗಲು ಹೂಡಿಕೆದಾರರನ್ನು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ನಾವು ಖಂಡಿತವಾಗಿಯೂ ಅವರನ್ನು ಮನವೊಲಿಸುತ್ತೇವೆ' ಎಂದು ಪರಮೇಶ್ವರ ಹೇಳಿದರು.

ರೈತರು, ರೈತ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ ಕಾರಣ ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್‌ಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದ ನಂತರ, ನಾರಾ ಲೋಕೇಶ್ ಅವರು ಏರೋಸ್ಪೇಸ್ ಉದ್ಯಮವನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು.

G Parameshwara
ದೇವನಹಳ್ಳಿ ಭೂಸ್ವಾಧೀನ ರದ್ದು: ಏರೋ ಸ್ಪೇಸ್ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಗಾಳ; CM ಪುತ್ರ ನಾರಾ ಲೋಕೇಶ್ ಓಪನ್‌ ಆಫರ್‌!

'ಪ್ರೀತಿಯ ಏರೋಸ್ಪೇಸ್ ಉದ್ಯಮ, ಈ ಬಗ್ಗೆ ಕೇಳಿ ವಿಷಾದವಾಯಿತು. ನಿಮಗಾಗಿ ನನ್ನ ಬಳಿ ಉತ್ತಮವಾದ ಉಪಾಯವಿದೆ. ನೀವು ಆಂಧ್ರ ಪ್ರದೇಶದಲ್ಲಿ ಏಕೆ ಜಾಗವನ್ನು ನೋಡಬಾರದು? ನಾವು ನಿಮಗಾಗಿ ಆಕರ್ಷಕ ಏರೋಸ್ಪೇಸ್ ನೀತಿಯನ್ನು ಹೊಂದಿದ್ದೇವೆ. ಅತ್ಯುತ್ತಮ ಪ್ರೋತ್ಸಾಹಕಗಳು ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ (ಬೆಂಗಳೂರಿನಿಂದ ಹೊರಗೆ) ಬಳಸಲು ಸಿದ್ಧವಿದೆ! ಈ ಬಗ್ಗೆ ಮಾತನಾಡಲು ಶೀಘ್ರದಲ್ಲೇ ನಿಮ್ಮನ್ನು ನೋಡುವ ಭರವಸೆ ಇದೆ' ಎಂದು ನಾರಾ ಲೋಕೇಶ್ X ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಕೃಷಿಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳಲು ಕರ್ನಾಟಕ ಸರ್ಕಾರ ನಿರ್ಧರಿಸಿದ ನಂತರ ಈ ವಿಚಾರ ಚರ್ಚೆಗೆ ಬಂದಿದೆ. ಭೂಸ್ವಾಧೀನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಜಯ ಸಿಕ್ಕಿದೆ.

'ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಫಲವತ್ತಾದ ಕೃಷಿ ಭೂಮಿಯನ್ನು ರಕ್ಷಿಸಲು ನಮ್ಮ ಬದ್ಧತೆಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ದೇವನಹಳ್ಳಿ ತಾಲ್ಲೂಕಿನ ಇತರ ಹಳ್ಳಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ನಿರ್ಧರಿಸಿದೆ' ಎಂದು ಸಿದ್ದರಾಮಯ್ಯ ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

G Parameshwara
ದೇವನಹಳ್ಳಿ ರೈತರ ಹೋರಾಟಕ್ಕೆ ದೊಡ್ಡ ಗೆಲುವು: ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com