
ಬೆಂಗಳೂರು: ಕರ್ನಾಟಕದಲ್ಲಿ ಬಿಡುವು ಪಡೆದಿದ್ದ ಮಳೆರಾಯ ಮತ್ತೆ ಸಕ್ರಿಯವಾಗಿದ್ದು ಜೂನ್ 14ರವರೆಗೂ ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ (IMD) ತಿಳಿಸಿದೆ.
ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ(Rain)ಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿ ಸೇರಿ 13 ಜಿಲ್ಲೆಗಳಲ್ಲಿ ಜೂನ್ 14ರವರೆಗೂ ಭಾರಿ ಮಳೆ ಸಾಧ್ಯತೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಪೈಕಿ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಂತೆಯೇ ವಿಜಯನಗರ, ಮೈಸೂರು, ಹಾಸನ, ದಾವಣಗೆರೆ, ಕೊಪ್ಪಳ, ರಾಯಚೂರು, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಭಾರಿ ಮಳೆ
ಮಂಗಳವಾರ ರಾತ್ರಿ ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಔರಾದ್, ಬೀದರ್, ಬರಗೂರು, ಅಣ್ಣಿಗೆರೆ, ಹುಮ್ನಾಬಾದ್, ಚಿತ್ತಾಪುರ್, ಚಿಟಗುಪ್ಪ, ಸಿರಾ, ಬೆಂಗಳೂರು, ದಾವಣಗೆರೆ, ಮದ್ದೂರು, ಗುಬ್ಬಿ, ಜಗಳೂರು, ಹಿರಿಯೂರು, ಇಂಡಿ, ಭಾಲ್ಕಿ, ಸೇಡಂ, ಕಾರ್ಕಳ, ಮಂಗಳೂರು, ಬಂಟವಾಳ, ಕುಂದಾಪುರ, ಜಿಕೆವಿಕೆಯಲ್ಲಿ ಮಳೆಯಾಗಿದೆ.
ಮುಂಗಾರು ಪೂರ್ವ ಮಳೆ ಹೊಯ್ದು ಮುಂಗಾರು ಆರಂಭವಾದ ಬಳಿಕ ಮಳೆಯೇ ಇರಲಿಲ್ಲ, ಈಗ ಮತ್ತೆ ಜೂನ್ 10ರಿಂದ ಮುಂಗಾರು ಚುರುಕುಗೊಂಡಿದೆ.
ಕರಾವಳಿ ಕರ್ನಾಟಕದಲ್ಲಿ ಜೂನ್ 12 ರಿಂದ 16ರ ವರೆಗೂ, ಉತ್ತರ ಕರ್ನಾಟಕದಲ್ಲಿ ಜೂನ್ 12 ರಿಂದ 15ರ ವರೆಗೂ ಮತ್ತು ದಕ್ಷಿಣ ಒಳನಾಡಿನಲ್ಲಿ ಜೂನ್ 15 ರಿಂದ 16ವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement