
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದ್ದು, ನಗರವನ್ನು ಮತ್ತಷ್ಟು ಜನಪ್ರಿಯ ತಾಣವನ್ನಾಗಿ ಮಾಡಲು ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.
ನವೀಕರಣಗೊಂಡ ವೆಂಕಟಪ್ಪ ಕಲಾ ಗ್ಯಾಲರಿಯ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ಫ್ಲೈಓವರ್ಗಳು, ಉತ್ತಮ ರಸ್ತೆಗಳು, ಸುರಂಗ ರಸ್ತೆ ಮತ್ತು ಮೆಟ್ರೋ ನಿರ್ಮಾಣದೊಂದಿಗೆ ಬೆಂಗಳೂರಿನ ಸಂಚಾರ ಮತ್ತು ಮೂಲಸೌಕರ್ಯವನ್ನು ಸುಧಾರಿಸಲು ರಾಜ್ಯ ಸರ್ಕಾರ 1 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದೆ ಎಂದು ಹೇಳಿದರು.
ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಪ್ರಾರಂಭಿಸಲಾಗುವುದು ಮತ್ತು ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಬಗ್ಗೆ ಜಾಗೃತಿ ಮೂಡಿಸಲು ರಜಾದಿನಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರಾಥಮಿಕ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಗಳು ಯುವಕರನ್ನು ಪ್ರೋತ್ಸಾಹಿಸಲು, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಶಿಕ್ಷಣದಲ್ಲಿ ಸಂಯೋಜಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರು ಸೇರಿ ರಾಜ್ಯದ ಆಡಳಿತವನ್ನು ಸುಧಾರಿಸುವ ಕುರಿತು ಜನರು, ವಿದ್ಯಾರ್ಥಿಗಳು, ಕಲಾವಿದರು ಮತ್ತು ತಜ್ಞರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ. ನಮ್ಮದು ಮುಕ್ತ ಮನಸ್ಸಿನ ಸರ್ಕಾರ. ಸಲಹೆಗಳು, ಟೀಕೆ ಮತ್ತು ಪರಿಹಾರಗಳನ್ನು ಸ್ವಾಗತಿಸುತ್ತೇವೆ. ರಾಜ್ಯ ಮತ್ತು ಬೆಂಗಳೂರನ್ನು ಸುಧಾರಿಸಲು ನಾಗರಿಕರು ಮತ್ತು ತಜ್ಞರಿಂದ ಸಹಕಾರವನ್ನು ಪಡೆಯುತ್ತೇವೆಂದು ಹೇಳಿದರು.
ಬಳಿಕ ಮಾತನಾಡಿದ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು, ಪ್ರವಾಸೋದ್ಯಮ ತಾಣಗಳನ್ನು ಸುಧಾರಿಸಲು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು ಎಂದು ಹೇಳಿದರು.
ಲಕ್ಕುಂಡಿಯಲ್ಲಿ ಪ್ರಾಚ್ಯಕಲೆಗಳನ್ನು ಹೊಂದಿರುವ ಅನೇಕ ಗುಡಿಗಳು ಮಣ್ಣಿನಲ್ಲಿ ಮುಚ್ಚಿ ಹೋಗುತ್ತಿವೆ. ಇದರ ಕಡೆಗೆ ಕೂಡ ಬ್ರಿಗೇಡ್ ಫೌಂಡೇಷನ್ ಗಮನಹರಿಸಬೇಕು. ನಾಲ್ಕೈದು ಗುಡಿಗಳನ್ನು ಇದೇ ರೀತಿ ಅಭಿವೃದ್ಧಿ ಪಡಿಸಬೇಕು. ಇಲ್ಲಿಯ ರೀತಿಯಲ್ಲಿ ಕೋಟ್ಯಂತರ ರೂಪಾಯಿ ಅಲ್ಲಿ ಬೇಕಾಗಿಲ್ಲ. ಕೆಲವೇ ಲಕ್ಷ ರೂಪಾಯಿ ಸಾಕಾಗುತ್ತದೆ. ಲಕ್ಕುಂಡಿಯಲ್ಲಿ 4-5 ದೇವಾಲಯಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳಿಗೆ ನೀಡಲು ನಾವು ಉತ್ಸುಕರಾಗಿದ್ದೇವೆಂದು ತಿಳಿಸಿದರು.
ಬ್ರಿಗೇಡ್ ಫೌಂಡೇಶನ್ 10 ಕೋಟಿ ರೂ. ವೆಚ್ಚದಲ್ಲಿ ವೆಂಕಟಪ್ಪ ಕಲಾ ಗ್ಯಾಲರಿಯನ್ನು ನವೀಕರಿಸಿದ್ದು, ಆವರಣದಲ್ಲಿ ಮೂರು ಶಾಶ್ವತ ಗ್ಯಾಲರಿಗಳು ಮತ್ತು ಎರಡು ಮುಕ್ತ ಗ್ಯಾಲರಿಗಳಿವೆ, ಜೊತೆಗೆ ಆಡಿಯೋ-ವಿಶುವಲ್ ಕೊಠಡಿ ಮತ್ತು AI-ಸಕ್ರಿಯಗೊಳಿಸಿದ ಸ್ಮರಣಿಕೆ ವಿಭಾಗವಿದೆ.
Advertisement