ಕೆ.ಆರ್ ಮಾರುಕಟ್ಟೆ ಕಸದ ಸಮಸ್ಯೆಗೆ BBMP ಮಾಸ್ಟರ್ ಪ್ಲ್ಯಾನ್: ಪ್ರೆಶರ್ ಜೆಟ್ಟಿಂಗ್ ಯಂತ್ರ ಬಳಕೆಗೆ ನಿರ್ಧಾರ, ದಿನಕ್ಕೆರಡು ಬಾರಿ ಸ್ವಚ್ಛತಾ ಕಾರ್ಯ!

ಇದಕ್ಕಾಗಿ ಮಾರಾಟಗಾರರ ಸಂಖ್ಯೆಯನ್ನು ಮಾರುಕಟ್ಟೆಯ ಸಾಮರ್ಥ್ಯದ ಅಧಿಕೃತ ನೀತಿಗೆ ಅನುಗುಣವಾಗಿ ನೋಂದಾಯಿಸಿ, ಸಂಖ್ಯೆಯನ್ನು ಮಿತಿಗೊಳಿಸಲು ನಿರ್ಧರಿಸಲಾಗಿದೆ.
KR.Market
ಕೆ.ಆರ್. ಮಾರುಕಟ್ಟೆ
Updated on

ಬೆಂಗಳೂರು: ಎಲ್ಲೆಡೆ ಕಸ, ಮಳೆ ಬಂದಾಗಲೆಲ್ಲ ಕೆಸರು ಗದ್ದೆಯಾಗುವ ಅಂಗಳ, ಅಲ್ಲಲ್ಲಿ ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳ ಹಾವಳಿ, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ರೈತರು ಮತ್ತು ವ್ಯಾಪಾರಿಗಳು, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುವ ಟ್ರಾಫಿಕ್ ಸಮಸ್ಯೆ...ಕೆ.ಆರ್. ಮಾರುಕಟ್ಟೆಯ ನರಕಸದೃಶ ಸ್ಥಿತಿ ಇದು.

ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ಕೆ.ಆರ್. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಕಸದ ಗುಡ್ಡೆಗಳೇ ಕಂಡು ಬರುತ್ತಿದ್ದು, ಈ ಸಮಸ್ಯೆಯನ್ನು ದೂರಾಗಿಸಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಬಹುಮುಖಿ ಯೋಜನೆಯನ್ನು ಸಿದ್ಧಪಡಿಸುತ್ತಿದೆ.

ಈ ಉಪಕ್ರಮದ ಭಾಗವಾಗಿ ಪಾಲಿಕೆಯು ಪ್ರೆಶರ್ ಜೆಟ್ಟಿಂಗ್ ಯಂತ್ರ ಬಳಕೆಯ ಮೂಲಕ ಇಡೀ ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗದೊಳಿಸಲು ನಿರ್ಧರಿಸಿದೆ. ಹೆಚ್ಚಿನ ಒತ್ತಡದ ಯಂತ್ರಗಳ ಬಳಸಿ ಕಸ ವಿವೇವಾರಿ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಮಾರಾಟಗಾರರು ಮತ್ತು ಖರೀದಿದಾರರಿಗೆ ಸ್ವಚ್ಛ, ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಮಾರುಕಟ್ಟೆಯನ್ನು ಸ್ವಚ್ಛ ಮತ್ತು ಜನಸ್ನೇಹಿಯನ್ನಾಗಿ ಮಾಡಲು ಬಿಬಿಎಂಪಿ ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾರಾಟಗಾರರ ಸಂಖ್ಯೆ ಅದರ ಸಾಮರ್ಥ್ಯವನ್ನು ಮೀರಿದೆ ಎಂಬುದು ತಿಳಿದುಬಂದಿದೆ. ಹೀಗಾಗಿ ಅಧಿಕೃತ ನೀತಿಗೆ ಅನುಗುಣವಾಗಿ ಮಾರಾಟಗಾರರನ್ನು ಗುರುತಿಸಿ ನೋಂದಾಯಿಸುತ್ತೇವೆ, ಅವರ ಸಂಖ್ಯೆಯನ್ನು ಮಿತಿಗೊಳಿಸುತ್ತೇವೆ ಮತ್ತು ಗೊತ್ತುಪಡಿಸಿದ ಮಾರಾಟ ವಲಯಗಳನ್ನು ನಿಯೋಜಿಸುತ್ತೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ವಿಕಾಸ್ ಸುರಳ್ಕರ್ ಕಿಶೋರ್ ಅವರು ಹೇಳಿದ್ದಾರೆ.

KR.Market
ಕೊಳಚೆ ನೀರಿನಿಂದ ಕೆ.ಆರ್.ಮಾರುಕಟ್ಟೆ ದುರ್ನಾತ: 3 ವರ್ಷಗಳು ಕಳೆದರೂ ಬಗೆಹರಿಯದ ಸಮಸ್ಯೆ!

ಮಾರಾಟಗಾರರು ವಿವೇಚನೆಯಿಲ್ಲದೆ ತ್ಯಾಜ್ಯವನ್ನು ಸುರಿಯುವುದು ಸಮಸ್ಯೆಯನ್ನು ಹೆಚ್ಚು ಮಾಡಿದ್ದು, ಇದಕ್ಕಾಗಿ ಕಸ ವಿಲೇವಾರಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗುವುದು. "ಮಾರಾಟ ವಲಯದಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಕಸದ ಬುಟ್ಟಿಗಳನ್ನು ಇರಿಸಲಾಗುವುದು. ಮಾರಾಟಗಾರರು ತಮ್ಮ ತ್ಯಾಜ್ಯವನ್ನು ಈ ಬುಟ್ಟಿಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕಾಗುತ್ತದೆ. ಬಿಬಿಎಂಪಿ ಸಿಬ್ಬಂದಿ ನಿಯಮಿತವಾಗಿ ಕಸವನ್ನು ತೆರವುಗೊಳಿಸುತ್ತಾರೆ. ನಿಯಮ ಉಲ್ಲಂಘಿಸುವವರು ದಂಡವನ್ನು ಕಟ್ಟ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪಾಲಿಕೆ ಈಗಾಗಲೇ ಎರಡು ಪಾಳಿಗಳಲ್ಲಿ ಹೆಚ್ಚುವರಿ ಪೌರಕಾರ್ಮಿಕರು, ಮಾರ್ಷಲ್‌ಗಳು ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ನಿಯೋಜಿಸಿದೆ. ನೈಜ ಸಮಯದಲ್ಲಿ ಅನುಸರಣೆ ಮತ್ತು ಶುಚಿತ್ವವನ್ನು ಮೇಲ್ವಿಚಾರಣೆ ಮಾಡಲು ಮಾರುಕಟ್ಟೆಯಾದ್ಯಂತ 60 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗುವುದು. ಕ್ಯಾಮೆರಾ ಅಳವಡಿಕೆಗೆ ಸೂಕ್ತ ಸ್ಥಳಗಳನ್ನು ನಿರ್ಧರಿಸಲು ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿದ್ದು, ಶೀಘ್ರದಲ್ಲೇ ಕ್ಯಾಮೆರಾಗಳ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಯೋ ಫೆನ್ಸಿಂಗ್ ಹಾಕಿ ಮಾರುಕಟ್ಟೆಯಲ್ಲಿ ವಲಯಗಳನ್ನು ವಿಂಗಡಿಸಲಾಗುವುದು. ಪ್ರತಿ ಪ್ರದೇಶಕ್ಕೂ ಬಿಬಿಎಂಪಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಯಾವುದೇ ಅಧಿಕಾರಿಯ ವಲಯವು ಸ್ವಚ್ಛತಾ ಮಾನದಂಡಗಳನ್ನು ಪೂರೈಸಲು ವಿಫಲವಾದರೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮಳೆಗಾಲದಲ್ಲಿ ನೆಲಮಾಳಿಗೆಯ ಪಾರ್ಕಿಂಗ್ ಪ್ರದೇಶದಲ್ಲಿ ಪ್ರವಾಹ ಉಂಟಾಗುವುದು ಮತ್ತೊಂದು ದೀರ್ಘಕಾಲದ ಸಮಸ್ಯೆಯಾಗಿದೆ. ಒಳಚರಂಡಿ ನವೀಕರಣಕ್ಕಾಗಿ ಬಿಬಿಎಂಪಿ ಈಗಾಗಲೇ ಟೆಂಡರ್‌ಗಳನ್ನು ಕರೆದಿದೆ, ಇದು ಪೂರ್ಣಗೊಂಡ ನಂತರ ಸಮಸ್ಯೆಯನ್ನು ನಿವಾರಿಲಾಗುವುದು. ಮುಂದಿನ ಮೂರು ತಿಂಗಳೊಳಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬರುವ ವಿಶ್ವಾಸವಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com