
ಬೆಂಗಳೂರು: ನಿಮ್ಹಾನ್ಸ್ನ ಬೆಂಗಳೂರು ಉತ್ತರ ಕ್ಯಾಂಪಸ್ನಲ್ಲಿ (ಕ್ಯಾಲಸನಹಳ್ಳಿ) ಸ್ಥಾಪಿಸಲು ಉದ್ದೇಶಿಸಿರುವ 300 ಹಾಸಿಗೆಗಳ ಸಾಮರ್ಥ್ಯದ ಪಾಲಿಟ್ರಾಮಾ ಕೇಂದ್ರ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಯೋಜನೆಯು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಅಪಘಾತ ಸಂತ್ರಸ್ತರಿಗೆ ಸುಧಾರಿತ ತುರ್ತು ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಯೋಜನೆಗೆ ಒಟ್ಟು ರೂ. 498 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ಇದೀಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುಮೋದನೆಗಾಗಿ ಕಾಯಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಸಲ್ಲಿಸಿದ ಪ್ರಸ್ತಾವನೆಯ ನಂತರ, ಕೇಂದ್ರ ಹಣಕಾಸು ಸಚಿವಾಲಯ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಗಾಗಿ 39 ಎಕರೆ ವಿಸ್ತೀರ್ಣದ ಭೂಮಿಯನ್ನು 2012-13ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ನಿಮ್ಹಾನ್ಸ್ಗೆ ನೀಡಿತ್ತು.
ಪ್ರಸ್ತಾವಿತ ಯೋಜನೆಯು ನಿಮ್ಹಾನ್ಸ್ನ ಉತ್ತರ ಕ್ಯಾಂಪಸ್ನಂತೆ ಕಾರ್ಯನಿರ್ವಹಿಸಲಿದ್ದು, ಕೇವಲ ಆಸ್ಪತ್ರೆ ಮಾತ್ರವಲ್ಲದೆ, ಸಿಬ್ಬಂದಿ, ಹಾಸ್ಟೆಲ್ಗಳು, ಅತಿಥಿ ಗೃಹಗಳು, ಆಡಳಿತಾತ್ಮಕ ಕೇಂದ್ರಗಳು ಮತ್ತು ಇತರ ಸಹಾಯಕ ಮೂಲಸೌಕರ್ಯಗಳಿಗೆ ವಸತಿ ಕ್ವಾರ್ಟರ್ಗಳನ್ನೂ ಕೂಡ ಒಳಗೊಂಡಿರಲಿದೆ.
ಈ ಯೋಜನೆಗೆ ಹಣಕಾಸು ಸಚಿವಾಲಯವು ಹಲವಾರು ಷರತ್ತುಗಳನ್ನು ವಿಧಿಸಿದೆ. ನೀತಿ ಆಯೋಗವು ತನ್ನ 2021 ರ ವರದಿಯಲ್ಲಿ ಶಿಫಾರಸು ಮಾಡಿದಂತೆ ಮಾನವಶಕ್ತಿ ಮತ್ತು ಮೂಲಸೌಕರ್ಯವನ್ನು ಅತ್ಯುತ್ತಮವಾಗಿಸುವುದು, ಕೇಂದ್ರದಲ್ಲಿ ನಿಯಮಿತ ರೋಗಿಗಳಿಗೆ ಕೂಡ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವುದು, ತುರ್ತು ಮತ್ತು ಗಂಭೀರ ಗಾಯದ ಆರೈಕೆಗಾಗಿ ದೀರ್ಘಾವಧಿಯ ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಈ ನಡೆಗೆ ಸಂಸದ ಡಾ.ಮಂಜನಾಥ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ನಿಮ್ಹಾನ್ಸ್ಗೆ ಸಂಬಂಧಿಸಿದಂತೆ ಕನ್ನಡಿಗರ ಬಹುದಿನಗಳ ಕನಸು ಈಗ ನನಸಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಸಹ ಒಂದಾಗಿದೆ. ಬೆಂಗಳೂರಿನಲ್ಲಿರುವ ಈ ಆಸ್ಪತ್ರೆಗೆ ದೇಶ - ವಿದೇಶಗಳಿಂದ ಜನ ಚಿಕಿತ್ಸೆಗೆ ಬರುತ್ತಿದ್ದಾರೆ. ಅಭಿವೃದ್ಧಿಯಾದಂತೆ ಈ ಆಸ್ಪತ್ರೆಯ ಮೇಲೆ ಒತ್ತಡವೂ ಹೆಚ್ಚಾಗುತ್ತಿದೆ. ಇದೀಗ ಕನ್ನಡಿಗರ ಬಹುದಿನಗಳ ಕನಸು ಈಡೇರಿಸಿದ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ "Poly trauma centre" ಸ್ಥಾಪನೆಯ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಈ ಮೂಲಕ ಅನೇಕ ವರ್ಷಗಳ ಕನ್ನಡಿಗರ ಬೇಡಿಕೆ ಈಡೇರಿದಂತಾಗಿದೆ. ಈ ಬಗ್ಗೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೇಂದ್ರ ಹಣಕಾಸು ಸಚಿವರಿಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ಮತ್ತು ವೈಯುಕ್ತಿಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದೆ.
ನಮ್ಮ ದೇಶದಲ್ಲಿ ಶೇ ಶೇ.15ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತಿವೆ ಮತ್ತು ಶೇ.30ರಷ್ಟು ರಸ್ತೆ ಅಪಘಾತಗಳಲ್ಲಿ ಬಹುಗಾಯಗಳಿಗೆ ಒಳಗಾಗುತ್ತಾರೆ. ಈ ಹಿನ್ನಲೆ ಗಾಯಗೊಂಡವರಿಗೆ ಆದಷ್ಟು ತ್ವರಿತವಾಗಿ (golden hour) ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಗೆ ವಿಶೇಷವಾಗಿ ಬೆಂಗಳೂರಿಗರಿಗೆ "Poly trauma centre" ಸ್ಥಾಪನೆ ಅತ್ಯಂತ ಸಹಕಾರಿಯಾಗಲಿದೆ.
ಜಯಪ್ರಕಾಶ್ ನಾರಾಯಣ್ "Poly trauma centre" ನಂತರದಲ್ಲಿ ದೇಶದಲ್ಲಿಯೇ ಎರಡನೇ "Poly trauma centre" ಇದಾಗಲಿದೆ. ಇದರ ಜೊತೆಗೆ ಸ್ನಾತಕೋತ್ತರ ಪದವಿ ಘಟಕವನ್ನು ಸ್ಥಾಪಿಸುವುದರಿಂದ ಆಘಾತ ಚಿಕಿತ್ಸಾ ವಿಭಾಗದಲ್ಲಿ ತಜ್ಞರಿಗೆ ನುರಿತ ತರಬೇತಿ ನೀಡುವ ಮೂಲಕ ಅವರ ಸೇವೆಯನ್ನು ದೇಶಾದ್ಯಂತ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ನಮ್ಮೆಲ್ಲರ ಮನವಿಗೆ ಸ್ಪಂದಿಸಿ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಸ್ನಾತಕೋತ್ತರ ಪದವಿ ಮತ್ತು 300 ಹಾಸಿಗೆ ಸಾಮರ್ಥ್ಯದ "Poly centre" ಸ್ಥಾಪನೆಯ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಹಕರಿಸಿದ ಪ್ರಧಾನಿ ಮೋದಿ ಅವರಿಗೆ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ ನಡ್ಡಾ ಅವರಿಗೆ ಹಾಗೂ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕರ್ನಾಟಕ ಜನತೆಯ ಪರವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿ, ಇದೊಂದು ಸ್ವಾಗತಾರ್ಹ ಕ್ರಮ. ಪಾಲಿ ಟ್ರಾಮಾ ಕೇಂದ್ರವನ್ನು ಸ್ಥಾಪಿಸುವುದರಿಂದ ಅಪಘಾತ ಸಂತ್ರಸ್ತರಿಗೆ ತುರ್ತು ಪರಿಹಾರ ದೊರೆಯುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸುವಂತಹ ಸೌಲಭ್ಯ ಸುತ್ತಮುತ್ತ ಇಲ್ಲ. 498 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರವನ್ನು ಮಂಜೂರು ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
Advertisement