ಬೆಂಗಳೂರು: ಹಳ್ಳ ಹಿಡಿದ 13 ಕೋಟಿ ರೂ ವೆಚ್ಚದ BBMP 'ಪಾಲಿಕೆ ಬಜಾರ್' ಯೋಜನೆ!

13 ಕೋಟಿ ರೂ ಮೊತ್ತದ ಯೋಜನೆ ಪೂರ್ಣಗೊಳ್ಳಲು ಸುಮಾರು ಏಳು ವರ್ಷ ತೆಗೆದುಕೊಂಡರೂ, 79 ಅಂಗಡಿಗಳನ್ನು ಅಧಿಕೃತವಾಗಿ ಹಂಚಿಕೆ ಮಾಡಲು ಬಿಬಿಎಂಪಿ ಇನ್ನೂ ಟೆಂಡರ್‌ ಕರೆದಿಲ್ಲ.
Palike Bazaar in Vijayanagar, Bengaluru
ವಿಜಯನಗರ ಪಾಲಿಕೆ ಬಜಾರ್
Updated on

ಬೆಂಗಳೂರು: 'ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಭೂಗತ ಮಾರುಕಟ್ಟೆ' ಎಂಬ ಹೆಸರಿನೊಂದಿಗೆ ಸುಮಾರು ಒಂದು ವರ್ಷದ ಹಿಂದೆ ಅತ್ಯಂತ ಉತ್ಸಾಹದಿಂದ ಆರಂಭಿಸಲಾದ ವಿಜಯನಗರದ ಕೃಷ್ಣದೇವರಾಯ ಪಾಲಿಕೆ ಬಜಾರ್ ಯೋಜನೆ ಹಳ್ಳ ಹಿಡಿದಿದೆ.

ರೂ. 13 ಕೋಟಿಯ ಯೋಜನೆ ಪೂರ್ಣಗೊಳ್ಳಲು ಸುಮಾರು ಏಳು ವರ್ಷ ತೆಗೆದುಕೊಂಡರೂ, 79 ಅಂಗಡಿಗಳನ್ನು ಅಧಿಕೃತವಾಗಿ ಹಂಚಿಕೆ ಮಾಡಲು ಬಿಬಿಎಂಪಿ ಇನ್ನೂ ಟೆಂಡರ್‌ ಕರೆದಿಲ್ಲ. ಇದೇ ವೇಳೆ ಸುಮಾರು 25 ಮಂದಿ ಮಾರಾಟಗಾರರು ಅಕ್ರಮವಾಗಿ ಮಳಿಗೆ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆದರೆ ವ್ಯಾಪಾರವೇ ಆಗದೇ ನಷ್ಟದಲ್ಲಿದ್ದಾರೆ.

ಈ ಮಾರುಕಟ್ಟೆಯನ್ನು ನಮಗಾಗಿ ನಿರ್ಮಿಸಲಾಗಿದೆ, ಆದರೆ ನಮ್ಮನ್ನು ಹೊರಗಿಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಬೀದಿ ವ್ಯಾಪಾರಿಗಳ ಸಂಘದ ದೇವರಾಜ್ ಎಂ ಹೇಳಿದರು. 2021 ರಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಲಾಗಿತ್ತು. ಆದರೆ ನಮಗೆ ಯಾರಿಗೂ ಅಂಗಡಿಗಳನ್ನು ನೀಡಿಲ್ಲ. ಬದಲಾಗಿ ವಿಜಯನಗರದಲ್ಲಿ ಇಲ್ಲದ, ಬೇರೆಯವರು ಬಂದು ಯಾವುದೇ ಪ್ರಕ್ರಿಯೆ ಇಲ್ಲದೆ ಮಳಿಗೆಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.

ಬೇರೆ ಏರಿಯಾದವರಿಂದ ಅಕ್ರಮವಾಗಿ ಮಳಿಗೆ ಒತ್ತುವರಿ:

ವಿಜಯನಗರದ ಜನನಿಬಿಡ ಸರ್ವಿಸ್ ರಸ್ತೆಯಿಂದ ಬೀದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲು ಮಾರುಕಟ್ಟೆ ಸ್ಥಾಪಿಸಲಾಯಿತು. 2021 ರಲ್ಲಿ ಸುಮಾರು 30 ಮಾರಾಟಗಾರರನ್ನು ಅಲ್ಲಿಗೆ ಸ್ಥಳಾಂತರಿಸಲು ಬಿಬಿಎಂಪಿ ಗುರುತಿಸಿತ್ತು. ಆದರೆ ಅಧಿಕೃತವಾಗಿ ಸರ್ವೆ ಮಾಡಿದವರ ಬದಲು ಬೇರೆ ಬೇರೆ ವರ್ತಕರು ಈಗ ಮಳಿಗೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ತಮಗೆ ಹೇಗೆ ಮಳಿಗೆ ಹಂಚಿಕೆಯಾಗಲಿದೆ ಎಂಬ ಬಗ್ಗೆ ಸ್ಪಷ್ಟತೆಯಾಗಲಿ ಇಲ್ಲ. ರಾಜಕೀಯ ಮುಖಂಡರೊಬ್ಬರ ಮೂಲಕ ಮಾಡಿದ ಮನವಿಯ ಮೇರೆಗೆ ಬಿಬಿಎಂಪಿ ಅನುಮತಿ ನೀಡಿದೆ ಎಂದು ಕೆಲವು ಮಾರಾಟಗಾರರು ಹೇಳಿಕೊಂಡಿದ್ದಾರೆ. ಆದರೆ ಅವರು ಯಾರಿಗೆ ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ಹೇಳಲು ನಿರಾಕರಿಸಿದರು.

ಬಿಬಿಎಂಪಿ ಅಧಿಕಾರಿಗಳು ಹೇಳಿದ್ದು ಏನು?

ಅಂಗಡಿ ಹಂಚಿಕೆಗೆ ಶೀಘ್ರದಲ್ಲಿಯೇ ಟೆಂಡರ್‌ ಕರೆಯಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು TNIE ಗೆ ತಿಳಿಸಿದ್ದಾರೆ. ಆದರೆ ಪ್ರಸ್ತುತ ಅಲ್ಲಿ ಮಳಿಗೆ ಪಡೆದವರು ಹೇಗೆ ಬಂದರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಅಲ್ಲಿ ವ್ಯಾಪಾರ ಮಾಡುತ್ತಿರುವವರು ವಿಜಯನಗರದವರಲ್ಲ. ಅವರು ಈ ಹಿಂದೆ ಗುರುತಿಸಲಾದ ಮೂಲ ಪಟ್ಟಿಯಲ್ಲಿ ಇಲ್ಲ. ಅವರು ಅಧಿಕೃತ ವ್ಯಾಪಾರಗಳು ಅಲ್ಲ ಎಂದು ಸಂಕೀರ್ಣದ ಹೊರಗೆ ಕಾರ್ಯನಿರ್ವಹಿಸುತ್ತಿರುವ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಇಡೀ ಯೋಜನೆಯೇ ಹಾಳಾಗಲಿದ್ದು, ಬಿಬಿಎಂಪಿ ಕ್ರಮಕೈಗೊಳ್ಳಬೇಕು ಎಂದು ದೇವರಾಜ್ ಒತ್ತಾಯಿಸಿದರು.

ಎಷ್ಟೋ ಜನರಿಗೆ ಪಾಲಿಕೆ ಬಜಾರ್ ಬಗ್ಗೆ ತಿಳಿದಿಲ್ಲ: ಈಗ ಮಾರುಕಟ್ಟೆಯೊಳಗೆ ವ್ಯಾಪಾರ ಮಾಡುತ್ತಿರುವವರಿಗೂ ಲಾಭ ವಾಗುತ್ತಿಲ್ಲ. ಬಹಳ ಕಡಿಮೆ ಜನರು ಅಲ್ಲಿಗೆ ಬರುತ್ತಿದ್ದು, ಪ್ರತಿದಿನ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೊಸ ಮಾರುಕಟ್ಟೆಯನ್ನು ಉತ್ತೇಜಿಸುಲ್ಲಿ ಬಿಬಿಎಂಪಿ ಮತ್ತು ಸರ್ಕಾರ ವಿಫಲವಾಗಿದೆ ಎಂದು ವ್ಯಾಪಾರಿಗಳು ಆರೋಪಿಸುತ್ತಾರೆ. ಪಾಲಿಕೆ ಬಜಾರ್ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಯಾವುದೇ ಸೂಚನಾ ಫಲಕಗಳಿಲ್ಲ. ಅದರ ಮೇಲೆ ಪ್ರವೇಶದ್ವಾರದ ಹೊರಗಿನ ವೈಟ್-ಟಾಪ್ ಕೆಲಸದಿಂದ ಅದರೊಳಗೆ ಹೋಗದಂತಾಗಿದೆ ಎಂದು ಮಾರಾಟಗಾರರಲ್ಲಿ ಒಬ್ಬರಾದ ಸುರೇಶ್ ಹೇಳಿದರು.

Palike Bazaar in Vijayanagar, Bengaluru
ವಿಜಯನಗರ ಪಾಲಿಕೆ ಬಜಾರ್: ಅತಿಕ್ರಮದಾರರ ವಿರುದ್ಧ BBMP ಕ್ರಮ, 50 ಮಾರಾಟಗಾರರು ಹೊರಕ್ಕೆ..!

ಈಗ ರಸ್ತೆ ನಿರ್ಮಾಣದ ಕೆಲಸ ಮಾಡುವ ಅಗತ್ಯ ಏನು? ಈಗ ರಸ್ತೆ ಕಾಮಗಾರಿಯ ಅಗತ್ಯವೇನಿತ್ತು? ಅದರ ಅಗತ್ಯವಿದ್ದರೆ ಉದ್ಘಾಟನೆಗೆ ಮುಂಚೆಯೇ ಅದನ್ನು ಯಾಕೆ ಮಾಡಲಿಲ್ಲ?" ಎಂದು ಮತ್ತೊಬ್ಬ ಮಾರಾಟಗಾರ ಪ್ರಸಾದ್ ಕೆ. ಪ್ರಶ್ನಿಸಿದರು. ಇದನ್ನು ಮಾಡುವ ಹೊತ್ತಿಗೆ ಸಾರ್ವಜನಿಕರು ಮಾರುಕಟ್ಟೆಯ ಬಗ್ಗೆ ಮರೆತುಬಿಡುತ್ತಾರೆ. ಈಗ ರಸ್ತೆಗಳನ್ನು ಅಗೆಯುವ ಬದಲು, ಮಾರುಕಟ್ಟೆಯನ್ನು ಉತ್ತೇಜಿಸಲು ಮತ್ತು ಮಳಿಗೆಗಳನ್ನು ಸರಿಯಾಗಿ ಭರ್ತಿ ಮಾಡಲು ಸರ್ಕಾರ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com