ರಾಜ್ಯ ಬಜೆಟ್ 2025: ತಾಯಿ ಮರಣ ಶೂನ್ಯಕ್ಕಿಳಿಸಲು 320 ಕೋಟಿ ರೂ ಮೀಸಲು

ಇನ್ನು ಪ್ರಸವ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಅಪರೂಪದ ಚಯಾಪಚಯ ಕಾಯಿಲೆಗಳನ್ನು ಪತ್ತೆ ಹಚ್ಚಲು ಕಾರ್ಯಕ್ರಮ ರೂಪಿಸಲಾಗುವುದು.
ಗರ್ಭಿಣಿ ಮಹಿಳೆ (ಸಂಗ್ರಹ ಚಿತ್ರ)
ಗರ್ಭಿಣಿ ಮಹಿಳೆ (ಸಂಗ್ರಹ ಚಿತ್ರ)
Updated on

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ತೀವ್ರ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ 320 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ.

ಆರೋಗ್ಯ ಇಲಾಖೆಗೆ ಒಟ್ಟು 17473 ಕೋಟಿ ಅನುದಾನ ಮೀಸಲಿಟ್ಟಿದ್ದು, ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕವೃದ್ಧಿಗೆ 873 ಕೋಟಿ ರು. ವಿಶೇಷ ಅನುದಾನ, ಮಕ್ಕಳ ಶ್ರವಣದೋಷಕ್ಕೆ ಶ್ರವಣ ಸಂಜೀವಿನಿ ಕ್ಲಾಕಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ, ಪ್ರತಿ ಜಿಲ್ಲೆಯಲ್ಲೂ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ, ಆಶಾ ಕಾರ್ಯಕರ್ತೆಯರ ಗೌರವ ಧನ 1000 ರು. ಹೆಚ್ಚಳ, ಪ್ರತಿ ತಾಲೂಕು ಆಸ್ಪತ್ರೆ ಯಲ್ಲಿ ಎಂಸಿಎಚ್ ಶಸ್ತ್ರಚಿಕಿತ್ಸಕ ತಜ್ಞರ ನೇಮಕ ಸೇರಿ ಹಲವು ಮಹತ್ವದ ಯೋಜನೆ ಘೋಷಿಸಲಾಗಿದೆ.

ತಾಯಿ ಸಾವು ಪ್ರಮಾಣ ಶೂನ್ಯಕ್ಕಿಳಿಸಲು ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆ ಗಂಭೀರ ರಕ್ತಸ್ರಾವ ತಡೆಗಟ್ಟಲು, ಚಿಕಿತ್ಸೆ ನೀಡಲು ಅವಶ್ಯವಿರುವ ಉಪಕರಣ ಪೂರೈಕೆ, ನವೀನ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆ, ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್‌ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳ ವಿತರಣೆ. ಜತೆಗೆ ರಾಜ್ಯದಲ್ಲಿ ಸಂಭವಿಸುವ ತಾಯಿ ಮರಣವನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್ ಮಾಡಿಸಿ ಶಿಫಾರಸುಗಳನ್ನು ರಾಜ್ಯ ಅಧಿಕಾರಯುಕ್ತ ಸಮಿತಿ ಮುಂದೆ ಮಂಡಿಸುವುದು ಸೇರಿ ಅನೇಕ ಪ್ರಮುಖ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

ಇನ್ನು ಪ್ರಸವ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಅಪರೂಪದ ಚಯಾಪಚಯ ಕಾಯಿಲೆಗಳನ್ನು ಪತ್ತೆ ಹಚ್ಚಲು ಕಾರ್ಯಕ್ರಮ ರೂಪಿಸಲಾಗುವುದು. ಮೊದಲನೆಯ ಹಂತದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 10 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್‌ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು.

ಗರ್ಭಿಣಿ ಮಹಿಳೆ (ಸಂಗ್ರಹ ಚಿತ್ರ)
ಮಹಿಳಾ ಪರ ಬಜೆಟ್ ಎಂದು ಕೊಂಡಾಡಿದ ಲಕ್ಷ್ಮೀ ಹೆಬ್ಬಾಳ್ಕರ್; ಉದ್ಯೋಗ ಸೃಷ್ಟಿಯತ್ತ ಗಮನವೇ ಹರಿಸಿಲ್ಲ- BJP ಟೀಕೆ

ಹುದ್ದೆಗಳನ್ನು ಪುನರ್ ಹಂಚಿಕೆ ಮಾಡುವ ಮೂಲಕ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಎಂಸಿಎಚ್‌ ತಜ್ಞರನ್ನು ನಿಯೋಜಿಸಲಾಗುವುದು.

ಕರ್ನಾಟಕದಲ್ಲಿ ಸಂಭವಿಸುವ ತಾಯಿ ಮರಣವನ್ನು ಕರ್ನಾಟಕ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್‌ ಮಾಡಿಸಿ ಶಿಫಾರಸ್ಸುಗಳನ್ನು ಕರ್ನಾಟಕ ಅಧಿಕಾರಯುಕ್ತ ಸಮಿತಿ ಮುಂದೆ ಮಂಡಿಸಲಾಗುವುದು. ಸಮಿತಿಯ ನಿರ್ದೇಶನದಂತೆ ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಮಹಿಳೆಯರಲ್ಲಿ ಸುಟ್ಟ ಗಾಯಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ ಸರ್ಕಾರವು ಒಂದು ನೀತಿಯನ್ನು ಪರಿಚಯಿಸಲಿದ್ದು, ಈ ನೀತಿಯನ್ನು ಜಾರಿಗೆ ತಂದ ಏಕೈಕ ರಾಜ್ಯವಾಗಲಿದೆ.

ರಾಜ್ಯದಲ್ಲಿ ನಕಲಿ ಔಷಧಿಗಳನ್ನು ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ವೈದ್ಯಕೀಯ ಉಪಕರಣಗಳನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (ಕೆಎಸ್ಎಂಎಸ್ಸಿಎಲ್) ಹೊಸ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ದಾವಣಗೆರೆಯ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಜೊತೆಗೆ ತಾಲ್ಲೂಕು ಆಸ್ಪತ್ರೆಗಳನ್ನು ನವೀಕರಿಸಲು 650 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಸಮಗ್ರ ಆರೋಗ್ಯ ಯೋಜನೆಯಡಿ 873 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.

ಗರ್ಭಿಣಿ ಮಹಿಳೆ (ಸಂಗ್ರಹ ಚಿತ್ರ)
ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್'ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆ: BJP ಟೀಕೆ

ಬಜೆಟ್ ಇತರೆ ಪ್ರಮುಖ ಘೋಷಣೆಗಳು

  • ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆ ಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲೂಕು ಗಳಲ್ಲಿ 9 ಕೋಟಿ ರು. ವೆಚ್ಚದಲ್ಲಿ 14 ವರ್ಷದ ಮಕ್ಕಳಿಗೆ ಎಚ್‌ಪಿವಿ ಲಸಿಕೆ ಹಾಕಿಸಲಾಗುವುದು

  • ಕರ್ನಾಟಕ ಮಿದುಳಿನ ಆರೋಗ್ಯ ಉಪಕ್ರಮವನ್ನು ಎಲ್ಲಾ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲು 20 ಕೋಟಿ ರೂ.

  • ಗೃಹ ಆರೋಗ್ಯ ಯೋಜನೆಯನ್ನು 100 ಕೋಟಿ ರೂ. ಹಂಚಿಕೆಯೊಂದಿಗೆ ವಿಸ್ತರಿಸಲಾಗುವುದು

  • ಆಹಾರ ಮಾದರಿಗಳನ್ನು ವಿಶ್ಲೇಷಿಸಲು ಮೊಬೈಲ್ ಪ್ರಯೋಗಾಲಯಗಳ ಸ್ಥಾಪನೆ.

  • ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು 50 ಕೋಟಿ ರೂ. ಮಿಷನ್-ಮೋಡ್ ಕಾರ್ಯಕ್ರಮ

  • 108 ಆಂಬ್ಯುಲೆನ್ಸ್ ಸೇವೆಗಳನ್ನು ನಿರ್ವಹಿಸುವ ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಆರೋಗ್ಯ ಇಲಾಖೆಯ ವ್ಯಾಪ್ತಿಗೆ ತರಲಾಗುವುದು

  • ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 3 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ವರ್ಗ, ಅವಲಂಬಿತರಿಗೆ 5 ಲಕ್ಷ ರು.ವರೆಗೆ ನಗದು ರಹಿತ ಚಿಕಿತ್ಸೆಗೆ ಯೋಜನೆ ರೂಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com