
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರಸ್ತೆ ಕಾಳಗ ನಡೆದಿದ್ದು, ಕಾರಿನಲ್ಲಿ ತೆರಳುತ್ತಿದ್ದ ದಂಪತಿಗೆ ಬೈಕ್ ನಲ್ಲಿ ಬಂದ ಪುಂಡರು ಅಡ್ಡಗಟ್ಟಿ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಕೆಆರ್ ಪುರಂ ನ ಟಿಸಿ ಪಾಳ್ಯ ಜಂಕ್ಷನ್ ನಲ್ಲಿ ಮಾರ್ಚ್ 9ರ ರಾತ್ರಿ 9 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು, ರೆಡ್ ಸಿಗ್ನಲ್ ಇದ್ದಾಗ ಸೈಡ್ ಬಿಟ್ಟಿಲ್ಲ ಅಂತ KA 01 Q 9634 ಸಂಖ್ಯೆಯ ಬೈಕ್ ನಲ್ಲಿ ಬಂದ ಇಬ್ಬರು ಬೈಕರ್ ಗಳು ಪುಂಡಾಟ ಮೆರೆದಿದ್ದಾರೆ.
ಕಾರಿನಲ್ಲಿ ದಂಪತಿಗಳ ಜೊತೆ ಮಗು ಕೂಡ ಇತ್ತು. ಆದಾಗ್ಯೂ ಬೈಕ್ ನಲ್ಲಿ ಬಂದ ದುಷ್ಕರ್ಮಿಗಲು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಕಾರಿನ ಮಿರರ್ ಅನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಇವಿಷ್ಟೂ ಘಟನೆ ಕಾರಿನ ಡ್ಯಾಶ್ ಕ್ಯಾಂ ನಲ್ಲಿ ಮತ್ತು ತಮ್ಮ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಬೆಂಗಳೂರು ಪೊಲೀಸ್ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಈ ಕುರಿತು ಸಂತ್ರಸ್ಥ ಕಾರು ಮಾಲೀಕ ನಿರಂಜನ್ ಅವರು ಟ್ವೀಟ್ ಮಾಡಿದ್ದು, 'ಈ ಘಟನೆ ಮಾರ್ಚ್ 9 ರಂದು ರಾತ್ರಿ 9 ಗಂಟೆಗೆ ಟಿಸಿ ಪಾಳ್ಯ ಸಿಗ್ನಲ್ ಬಳಿ ನಡೆದಿತ್ತು. ಸಿಗ್ನಲ್ ಇದ್ದ ಕಾರಣ ಕಾರು ನಿಲ್ಲಿಸಲಾಗಿತ್ತು. ಹಿಂದೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾರ್ನ್ ಮಾಡಿದ್ದಾರೆ.
ರೆಡ್ ಸಿಗ್ನಲ್ ಇದ್ದ ಕಾರಣ ನಾನು ಕಾರನ್ನು ಮೂವ್ ಮಾಡಲಿಲ್ಲ. ಈ ವೇಳೆ ಅವರು ನನ್ನ ಕಾರನ್ನು ಅಡ್ಡಗಟ್ಟಿ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿ ಮಗು ಇದೆ ಎಂದರೂ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನಲ್ಲಿದ್ದ 10 ತಿಂಗಳ ಮಗು ಸೇರಿದಂತೆ ನನ್ನ ಕುಟುಂಬವನ್ನು ರಕ್ಷಿಸಲು ನಾನು ಹೆಣಗಾಡಿದೆ ಎಂದು ತಮಗಾದ ಕರಾಳ ಅನುಭವವನ್ನು ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.
ಪೊಲೀಸರ ಪ್ರತಿಕ್ರಿಯೆ
ಇನ್ನು ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ನಿಮ್ಮ ಪ್ರಕರಣವನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿದ್ದೇವೆ ಎಂದು ಹೇಳಿದ್ದಾರೆ.
Advertisement