
ಬೆಂಗಳೂರು: ತನ್ನ ಸ್ನೇಹಿತರೊಂದಿಗೆ 10,000 ರೂ. ಬೆಟ್ ಕಟ್ಟಿ ಐದು ಬಾಟಲಿ ಕಚ್ಚಾ ಮದ್ಯ ಕುಡಿದು 21 ವರ್ಷದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮದ್ಯದೊಂದಿಗೆ ನೀರನ್ನು ಸೇರಿಸದೆಯೇ ಐದು ಬಾಟಲ್ ಕುಡಿಯುವುದಾಗಿ ಕಾರ್ತಿಕ್ ತನ್ನ ಸ್ನೇಹಿತರಾದ ವೆಂಕಟ ರೆಡ್ಡಿ, ಸುಬ್ರಮಣಿ ಮತ್ತು ಇತರ ಮೂವರಿಗೆ ಹೇಳಿದ್ದಾನೆ. ಒಂದು ವೇಳೆ ಕಾರ್ತಿಕ್ ನೀರನ್ನು ಮಿಶ್ರಣ ಮಾಡದೆಯೇ ಮದ್ಯ ಸೇವಿಸಿದರೆ 10,000 ರೂ. ನೀಡುವುದಾಗಿ ವೆಂಕಟ ರೆಡ್ಡಿ ಹೇಳಿದ್ದಾನೆ.
ಅದಾದ ಬಳಿಕ ಕಾರ್ತಿಕ್ ಐದು ಬಾಟಲಿ ಮದ್ಯವನ್ನು ಸೇವಿದ್ದಾನೆ. ಬಳಿಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಆತ ಸಾವಿಗೀಡಾಗಿದ್ದಾನೆ. ಕಾರ್ತಿಕ್ ಮದುವೆಯಾಗಿ ಒಂದು ವರ್ಷವಾಗಿತ್ತು ಮತ್ತು ಅವರ ಪತ್ನಿ ಎಂಟು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.
ವೆಂಕಟ ರೆಡ್ಡಿ ಮತ್ತು ಸುಬ್ರಮಣಿ ಸೇರಿದಂತೆ ಆರು ಜನರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 2.6 ಮಿಲಿಯನ್ ಜನರು ಮದ್ಯ ಸೇವನೆಯಿಂದ ಸಾಯುತ್ತಾರೆ. ಇದು ಜಾಗತಿಕ ಸಾವುಗಳಲ್ಲಿ ಶೇ 4.7 ರಷ್ಟಿದೆ.
Advertisement