
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪರೀಕ್ಷೆಯಲ್ಲಿನ ಎಡವಟ್ಟುಗಳು ಸರಣಿ ಮುಂದುವರೆದಿದ್ದು, ಇದೀಗ ಮಧ್ಯರಾತ್ರಿ ಹಾಲ್ ಟಿಕೆಟ್ ಬಿಡುಗಡೆ ಮಾಡಿ ಅಭ್ಯರ್ಥಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಮೇ 2ರಂದು ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಆಘಾತ ನೀಡಿದೆ. ಮೇ 3ರಂದು ನಡೆಯಲಿರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದಿದ್ದ ಇದೇ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳ ಭಾಷಾಂತರದ ಗೊಂದಲದಿಂದಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯದವರ ನೆರವಿಗೆ ಬಂದಿದ್ದ ಹೈಕೋರ್ಟ್ ಸುಮಾರು 120 ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಕೆಪಿಎಸ್ಸಿ, ಈ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಿ, ಮೇ 2ರಂದೇ ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್ ನೀಡುವುದಾಗಿ ಇತ್ತೀಚೆಗೆ ಪ್ರಕಟಿಸಿತ್ತು.
ಅದರಂತೆ, ಮೇ 2ರಂದು ಮಧ್ಯಾಹ್ನ 3ರೊಳಗೆ ಶುಲ್ಕ ಸಹಿತ ಅರ್ಜಿ ಸಲ್ಲಿಸಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಿತ್ತು. ಹೀಗೆ ಅರ್ಜಿ ಸಲ್ಲಿಸಿದವರಿಗೆ ಕೆಪಿಎಸ್ಸಿ ಕಚೇರಿಯಲ್ಲೇ ಸಂಜೆ 5.30ರವರೆಗೆ ಹಾಲ್ ಟಿಕೆಟ್ ನೀಡುವುದಾಗಿ ಸೂಚಿಸಲಾಗಿತ್ತು. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಕಸ್ತೂರ್ ಬಾ ನಗರದಲ್ಲಿರುವ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮರುದಿನ 8 ಗಂಟೆಗೆ ಹೋಗಿ ಹಾಲ್ ಟಿಕೆಟ್ ಪಡೆದುಕೊಂಡು ಪರೀಕ್ಷೆ ಬರೆಯಬೇಕು ಎಂದು ಸೂಚಿಸಿತ್ತು.
ಆದರೆ, ಮೇ 2ರಂದು ಮಧ್ಯಾಹ್ನ 3 ಗಂಟೆಯೊಳಗೆ ಅರ್ಜಿಗಳನ್ನು ಸ್ವೀಕರಿಸಬೇಕಿದ್ದ ಕೆಪಿಎಸ್ಸಿ, ಮಧ್ಯರಾತ್ರಿಯಾದರೂ ಅರ್ಜಿಗಳನ್ನು ಸ್ವೀಕರಿಸುತ್ತಲೇ ಇದೆ. ರಾತ್ರಿ ವೇಳೆಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ ಕೆಪಿಎಸ್ಸಿ, ರಾತ್ರಿ 12ರವರೆಗೆ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಸಲ್ಲಿಸುವವರು ಅರ್ಜಿ ಸಲ್ಲಿಸಿದ ಕೂಡಲೇ ಹಾಲ್ ಟಿಕೆಟ್ ಪಡೆದು ಮರುದಿನ ಬೆಂಗಳೂರಿನ ಕಸ್ತೂರ್ ಬಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಇದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯೇಂದ್ರ ಆಕ್ರೋಶ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ಪರೀಕ್ಷೆ ಹಿಂದಿನ ದಿನ ಮಧ್ಯರಾತ್ರಿವರೆಗೆ ಅರ್ಜಿ ತುಂಬಿ ಹಾಲ್ ಟಿಕೆಟ್ ಪಡೆಯುವಂತೆ ಗೊಂದಲ ಸೃಷ್ಟಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಹಿಳಾ ಅಭ್ಯರ್ಥಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಡುತ್ತಾ ವಿಡಿಯೋ ಹಂಚಿಕೊಂಡಿರುವುದನ್ನು ವಿಜಯೇಂದ್ರ ಉಲ್ಲೇಖಿಸಿದ್ದಾರೆ.
ಅಲ್ಲದೆ ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಬಿಜೆಪಿ ನೊಂದವರ ದನಿಯಾಗಿ ನಿಲ್ಲಲಿದೆ ಎಂದು ಬಿವೈ ವಿಜಯೇಂದ್ರ ಹೇಳಿದರು.
ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು. ಆದರೆ ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ ಕೆಪಿಎಸ್ಸಿ ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಕೆಪಿಎಸ್ಸಿ ಚೆಲ್ಲಾಟವಾಡುತ್ತಿದ್ದರೆ. ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ ಕೆಪಿಎಸ್ಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ. ಅಂತೆಯೇ ಅಭ್ಯರ್ಥಿಗಳ ಶಾಪ ಸರ್ಕಾರಕ್ಕೆ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರ ಕೋರ್ಟ್ನಲ್ಲಿ ಕೇಸ್ ವಿಚಾರಣೆ ಇದ್ದರೂ ತರಾತುರಿಯಲ್ಲಿ ಕೆಪಿಎಸ್ಸಿ ಪರೀಕ್ಷೆ ನಡೆಸಲಾಗುತ್ತಿದೆ. ಇಂದು ಮುಂಜಾನೆ 3 ಗಂಟೆಯವರೆಗೂ ಕೆಪಿಎಸ್ಸಿ ಹಾಲ್ಟಿಕೆಟ್ ನೀಡಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಅಭ್ಯರ್ಥಿಗಳ ಬದುಕಿನ ಜೊತೆ ಕೆಪಿಎಸ್ಸಿ ಚೆಲ್ಲಾಟವಾಡುತ್ತಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಆದ ಯಡವಟ್ಟು ಸರಿಪಡಿಸದೆ ಸೀದಾ ಮೇನ್ಸ್ ಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಕೋರ್ಟ್ ಮೆಟ್ಟಿಲೇರಿದ ಅಭ್ಯರ್ಥಿಗಳು!
ಪ್ರಿಲಿಮ್ಸ್ ಭಾಷಾಂತರ ಸಮಸ್ಯೆ ಪ್ರಕರಣ ಹೈ ಕೋರ್ಟ್ ನಲ್ಲಿ ವಿಲೇವಾರಿ ಇದೆ. ಸೋಮವಾರ ಹೈ ಕೋರ್ಟ್ ಹಾಗೂ KAT ಅಂತಿಮ ತೀರ್ಪು ನೀಡಲಿದೆ. ಈ ನಡುವೆಯೇ ಮೇನ್ಸ್ ಗೆಜೆಟೆಡ್ ಪ್ರೊಬೆಷನರಿ ಎಕ್ಸಾಂಗೆ ಮುಂದಾಗಿದೆ. ನಿನ್ನೆ ಸಂಜೆಯಿಂದ ಮೇನ್ಸ್ ಎಕ್ಸಾಂಗೆ ಹಾಲ್ ಟಿಕೆಟ್ ನೀಡಿ ತರಾತುರಿ ನಡೆ ತೋರಿದೆ. ಆದೇಶ ಬರುವ ಮೊದಲೇ ಮೇನ್ಸ್ ಎಕ್ಸಾಂ ಮಾಡಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸಾಂ ಸೆಂಟರ್ ಮುಂಭಾಗದಲ್ಲಿ ನಿಂತು ಅಭ್ಯರ್ಥಿಗಳು ಆತಂಕಗೊಂಡಿದ್ದಾರೆ.
ಅನುಮಾನ
ನಾಳಿನ ಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕೆಎಎಸ್ ಮೇನ್ ಪರೀಕ್ಷೆಗೆ ಬೆಂಗಳೂರು ಮತ್ತು ಧಾರವಾಡ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಿರುತ್ತದೆ ಹಾಗೂ ನಾಳೆ ಬೆಳಗ್ಗೆ ಏಳು ಗಂಟೆವರೆಗೆ ಪ್ರಶ್ನೆ ಪತ್ರಿಕೆಗಳು ಸದರಿ ಧಾರವಾಡ ಹಾಗೂ ಬೆಂಗಳೂರಿನ ಕೆಪಿಎಸ್ಸಿ ಕಚೇರಿಯಲ್ಲಿ ಇರುತ್ತದೆ.ಇಂತಹ ಸಂದರ್ಭದಲ್ಲಿ 270 ಅಭ್ಯರ್ಥಿಗಳನ್ನು ತನ್ನ ಕಚೇರಿ ಒಳಗಡೆ ಇರಿಸಿಕೊಂಡಿರುವಂತದು ಪ್ರಶ್ನೆ ಪತ್ರಿಕೆ ಸೋರಿಕೆ ಎಂತಹ ಅನುಮಾನಗಳಿಗೂ ಕಾರಣವಾಗಿದೆ. 500 ಅಭ್ಯರ್ಥಿಗಳಲ್ಲಿ ಕೇವಲ 119 ಅಭ್ಯರ್ಥಿಗಳ ಹೆಸರನ್ನು ಕೆಪಿಎಸ್ಸಿ ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಿರುತ್ತದೆ ಕೋರ್ಟ್ ಆದೇಶದಂತೆ ಇನ್ನುಳಿದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ಹೆಸರನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟ ಮಾಡಲಾಗಿರುವುದಿಲ್ಲ.
Advertisement