News Headlines 05-05-25 | ಇಂದಿನಿಂದ SC ಒಳಮೀಸಲಾತಿ ಜಾತಿಗಣತಿ; ಕನ್ನಡ ಚಿತ್ರರಂಗದಿಂದ ಸೋನು ನಿಗಮ್ BAN; ಸಿದ್ದು ಕೊಂದರೆ ಹಿಂದೂಗಳಿಗೆ ನೆಮ್ಮದಿ; ಜನಿವಾರ ತೆಗೆಸಿದ ಪ್ರಕರಣ: ಇಬ್ಬರ ಬಂಧನ!

News Headlines 05-05-25 | ಇಂದಿನಿಂದ SC ಒಳಮೀಸಲಾತಿ ಜಾತಿಗಣತಿ; ಕನ್ನಡ ಚಿತ್ರರಂಗದಿಂದ ಸೋನು ನಿಗಮ್ BAN; ಸಿದ್ದು ಕೊಂದರೆ ಹಿಂದೂಗಳಿಗೆ ನೆಮ್ಮದಿ; ಜನಿವಾರ ತೆಗೆಸಿದ ಪ್ರಕರಣ: ಇಬ್ಬರ ಬಂಧನ!

1. ಇಂದಿನಿಂದ SC ಒಳಮೀಸಲಾತಿ ಜಾತಿಗಣತಿ

ಪರಿಶಿಷ್ಠ ಜಾತಿ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ 3 ಹಂತದಲ್ಲಿ ಸಮೀಕ್ಷೆ ನಡೆಯಲಿದೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇಂದಿನಿಂದ ಮೇ 17ರವರೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ನಡೆಯಲಿದೆ. ಮೊದಲನೇ ಹಂತ ಇಂದಿನಿಂದಲೇ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಾಗುತ್ತದೆ. ಎರಡನೇ ಹಂತ ಮೇ 5 ರಿಂದ ಶುರುವಾಗಲಿದೆ. ಇದಕ್ಕಾಗಿ ವಿಶೇಷ ಶಿಬಿರಗಳಲ್ಲಿ ಈ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನು ಎಸ್‌ಸಿ ಒಳಮೀಸಲಾತಿ ಸಮೀಕ್ಷೆಗೆ ಸುಮಾರು 100 ಕೋಟಿ ಖರ್ಚು ಆಗಬಹುದು. ಜಾತಿಗಣತಿಗೂ ಒಳಮೀಸಲಾತಿ ಗಣತಿಗೂ ಯಾವುದೇ ಸಂಬಂಧ ಇಲ್ಲ. ಇದು ಕೇವಲ ಎಸ್‌ಸಿ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

2. ಕನ್ನಡ ಚಿತ್ರರಂಗದಿಂದ ಸೋನು ನಿಗಮ್ BAN

ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದನ್ನು ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ತಳುಕು ಹಾಕಿದ ಗಾಯಕ ಸೋನು ನಿಗಮ್‌ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಿರ್ಧರಿಸಿದೆ. ಯಾರೂ ಸೋನು ನಿಗಮ್‌ ಅವರನ್ನು ಹಾಡಿಸಲು ಕರೆಯಬಾರದು, ಮ್ಯೂಸಿಕಲ್‌ ನೈಟ್‌ ಸೇರಿದಂತೆ ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಬಾರದು ಎಂದು ಮಂಡಳಿ ಅಧ್ಯಕ್ಷ ನರಸಿಂಹಲು ತಿಳಿಸಿದ್ದಾರೆ. ಸೋನು ನಿಗಮ್‌ ವಿಡಿಯೊದಲ್ಲಿ ಕನ್ನಡಿಗರ ಕ್ಷಮೆ ಕೇಳಬಹುದು ಎಂದುಕೊಂಡಿದ್ದೆವು. ಆದರೆ ವಿಡಿಯೊದಲ್ಲಿ ಕ್ಷಮಾಪಣೆ ಕೇಳಲಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತನ್ನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುತ್ತಿದ್ದಂತೆ ಎಚ್ಚೇತ್ತ ಸೋನು ನಿಗಮ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕನ್ನಡದ ವಿವೇಕವಂತ ಜನತೆಗೆ ಬಿಟ್ಟುಬಿಡುತ್ತೇನೆ. ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರಿಗೆ ಸಹಕರಿಸುತ್ತೇನೆ ಎಂದು ಬರೆದಿದ್ದಾರೆ.

3. ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣ: ಇಬ್ಬರ ಬಂಧನ

ಕಲಬುರಗಿಯ ಸೇಂಟ್ ಮೇರಿ ಕಾಲೇಜಿನಲ್ಲಿ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿದ್ಯಾರ್ಥಿ ಶ್ರೀಪಾದ್ ಪಾಟೀಲ್ ದೂರಿನ ಮೇರೆಗೆ ಇಬ್ಬರು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ವಿರುದ್ಧ ಎಫ್​​ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್​ ಎಸ್.ಡಿ ಶರಣಪ್ಪ ತಿಳಿಸಿದ್ದಾರೆ. ಪರೀಕ್ಷಾ ಕೇಂದ್ರದ ಸಿಬ್ಬಂದಿಯಾದ ಶರಣಗೌಡ, ಗಣೇಶ ಬಂಧಿಸಲಾಗಿದೆ. ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್​ ಠಾಣೆಯಲ್ಲಿ ಬಿಎನ್​ಎಸ್ ಕಾಯ್ದೆ 298 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಶರಣಪ್ಪ ತಿಳಿಸಿದ್ದಾರೆ. ಮತ್ತೊಂದೆಡೆ ಸಿಇಟಿ ಮತ್ತು ನೀಟ್​ ಪರೀಕ್ಷೆಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣ ಸಭಾ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಿದೆ. ಅಭ್ಯರ್ಥಿಗಳ ಜನಿವಾರ ತೆಗೆಸಿದ್ದು ಇದರಿಂದ ಬ್ರಾಹ್ಮಣರ ಧಾರ್ಮಿಕ ಆಚರಣೆಗೆ ಧಕ್ಕೆಯಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ತಿಳಿಸಿದ್ದಾರೆ.

4. ಸಿದ್ದು ಕೊಂದರೆ ಹಿಂದೂಗಳಿಗೆ ನೆಮ್ಮದಿ ಕಮೆಂಟ್: ವ್ಯಕ್ತಿ ಬಂಧನ

ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು 8 ಜನರನ್ನು ಬಂಧಿಸಿದ್ದು, ತನಿಖೆ ತನಿಖೆ ನಡೆಸಿದ್ದಾರೆ. ಇದರ ಮಧ್ಯ ಸುಹಾಸ್ ಶೆಟ್ಟಿ ಕೊಲೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಂದರೆ ಹಿಂದೂಗಳಿಗೆ ನೆಮ್ಮದಿ ಎಂದು ಕಾಮೆಂಟ್ ಹಾಕಿದ್ದ ಉಡುಪಿಯ ಕಾರ್ಕಳದ ಹೋಂ ಗಾರ್ಡ್ ಸಂಪತ್ ಸಾಲಿಯಾನ್​ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದನು. ಈ ಸಂಬಂಧ ಸದ್ಯ ಕಾರ್ಕಳ ಪೊಲೀಸರು ಹೋಂ ಗಾರ್ಡ್ ಸಂಪತ್​ನನ್ನು ಬಂಧಿಸಿದ್ದಾರೆ.

5. ಮೇ.7ರಂದು ಮಾಕ್ ಡ್ರಿಲ್ ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತುರ್ತು ಸಿದ್ಧತೆಗಳ ನಡುವೆ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಮಾಕ್ ಡ್ರಿಲ್ ವೇಳೆ ವಾಯುದಾಳಿ ಎಚ್ಚರಿಕೆ ನೀಡುವ ಸೈರನ್‌ಗಳನ್ನು ಅಳವಡಿಸುವುದು. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು, ವಿದ್ಯಾರ್ಥಿಗಳು ಇತ್ಯಾದಿಗಳಿಗೆ ನಾಗರಿಕ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು ಸೇರಿ ಹಲವು ನಿರ್ದೇಶನಗಳನ್ನು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com