
ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕಟೌಟ್ ಮುಂದೆ ಮೇಕೆ ಬಲಿ ನೀಡಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮೂವರು ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬಂಧಿತರನ್ನು ಸಣ್ಣ ಪಾಲಯ್ಯ (22), ಜಯಣ್ಣ (23) ಮತ್ತು ತಿಪ್ಪೆ ಸ್ವಾಮಿ (28) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಮರಿಯಮ್ಮನಹಳ್ಳಿ ನಿವಾಸಿಗಳಾಗಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ 2 ರನ್ಗಳ ರೋಚಕ ಗೆಲುವು ಸಾಧಿಸಿದ ನಂತರ ಅಭಿಮಾನಿಗಳ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
20 ಸೆಕೆಂಡುಗಳ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ಕೊಹ್ಲಿಯ ಕಟೌಟ್ನ ಮುಂದೆ ಮೇಕೆಯನ್ನು ಹಿಡಿದಿರುತ್ತಾನೆ. ಮತ್ತೋರ್ವ ಸಿಎಸ್ಕೆ ವಿರುದ್ಧ ಆರ್ಸಿಬಿ ಜಯ ಸಾಧಿಸಿದೆ ಎಂದು ಕೂಗುತ್ತಿದ್ದಂತೆ, ಮೇಕೆಯನ್ನು ಮಚ್ಚಿನಿಂದ ಕಡಿದು, ಅದರ ರಕ್ತವನ್ನು ಕೊಹ್ಲಿಯ ಕಟೌಟ್ ಮತ್ತು ಪೋಸ್ಟರ್ಗೆ ಅರ್ಪಣೆ ಮಾಡಲಾಗುತ್ತದೆ. ಮೂರನೇ ವ್ಯಕ್ತಿ ಮೇಕೆಯನ್ನು ಹಗ್ಗದಿಂದ ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು.
'call-me-143-kalki' ಎಂಬ ಹೆಸರಿನ ಬಳಕೆದಾರರೊಬ್ಬರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಮೊಳಕಾಲ್ಮೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ.
Advertisement