
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲ ಸೂಚಿಸಲು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಶುಕ್ರವಾರ 'ಜೈ ಹಿಂದ್ ತಿರಂಗಾ ಯಾತ್ರೆ'ಯನ್ನು ಆಯೋಜಿಸಿತ್ತು.
'ಜೈ ಹಿಂದ್-ಜೈ ಭಾರತ್-ಜೈ ತಿರಂಗಾ', 'ಭಾರತ ಜಿಂದಾಬಾದ್', 'ಭಾರತ ಮಾತಾ ಕಿ ಜೈ' ಮತ್ತು 'ನಮ್ಮ ಸೈನಿಕರು ನಮ್ಮ ಹೆಮ್ಮೆ' ಎಂಬ ಘೋಷಣೆಗಳ ನಡುವೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಾಡಿಸಲಾಯಿತು.
ಕೆಆರ್ ವೃತ್ತದಿಂದ ಪ್ರಾರಂಭವಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹಲವಾರು ಹಿರಿಯ ಸಚಿವರು ಭಾಗವಹಿಸಿದ್ದರು.
ಭಾರತದ ಗಡಿಗಳನ್ನು ಕಾಯುತ್ತಿರುವ ಸೈನಿಕರಿಗೆ ಬೆಂಬಳ ಸೂಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕಾಂಗ್ರೆಸ್ 'ಜೈ ಹಿಂದ್ ತಿರಂಗಾ ಯಾತ್ರೆ'ಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳ ಸದಸ್ಯರು ಸೇರಿದಂತೆ ಎಲ್ಲ ವರ್ಗದ ಜನರು ಭಾಗವಹಿಸುವಂತೆ ಕೇಳಲಾಗಿದೆ ಎಂದರು.
'ಸೈನಿಕರು ನಮ್ಮ ರಾಷ್ಟ್ರೀಯ ಹೆಮ್ಮೆ. ನಾವು ಅವರಿಗೆ ನಮನ ಸಲ್ಲಿಸಲು ಬಯಸುತ್ತೇವೆ. ಇಡೀ ದೇಶವು ಅವರ ಹಿಂದೆ ಇದೆ ಎಂದು ತಿಳಿಸಲು ನಾವು ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ' ಎಂದು ಹೇಳಿದರು.
Advertisement