ಸಿಡಿಲು ಮಳೆಗೆ 25ಕ್ಕೂ ಹೆಚ್ಚು ಮರಗಳು ಧರೆಗೆ; ನಗರದ ಬಹುತೇಕ ರಸ್ತೆಗಳು ಜಲಾವೃತ, ವಾಹನ ಸವಾರರು ಹೈರಾಣ

ಮೈಸೂರು ರಸ್ತೆ, ನಾಗವಾರ, ಮಾರತಹಳ್ಳಿ, ತುಬರಹಳ್ಳಿ, ಕಸ್ತೂರಿ ನಗರ, ಬಾಲಗೆರೆ ಟಿ ಜಂಕ್ಷನ್, ಸ್ಪೈಸ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮಂಗಳವಾರ ಸಂಜೆ 6 ರಿಂದ 7 ಗಂಟೆಯವರೆಗೆ ನಗರದಲ್ಲಿ 30.2 ಮಿ.ಮೀ ಮಳೆಯಾಗಿದ್ದು, ಇದರಿಂದಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡು ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.

ಮೈಸೂರು ರಸ್ತೆ, ನಾಗವಾರ, ಮಾರತಹಳ್ಳಿ, ತುಬರಹಳ್ಳಿ, ಕಸ್ತೂರಿ ನಗರ, ಬಾಲಗೆರೆ ಟಿ ಜಂಕ್ಷನ್, ಸ್ಪೈಸ್ ಗಾರ್ಡನ್ ಮತ್ತು ಇತರ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣ ಪ್ರದೇಶದಲ್ಲಿ 22.8 ಮಿ.ಮೀ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ 29.5 ಮಿ.ಮೀ ಮಳೆಯಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಂತ್ರಣ ಕೊಠಡಿಗೂ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿರುವುದು ಮತ್ತು ಮರ ಉರುಳಿದ ಬಗ್ಗೆ ಕರೆಗಳು ಬಂದಿವೆ.

ಭಾರೀ ಮಳೆಯ ನಂತರ ನಗರದಲ್ಲಿ 27 ಮರಗಳು, ಕೆಲವು ಭಾಗಗಳಲ್ಲಿ 94 ಕೊಂಬೆಗಳು ಧರೆಗುರುಳಿವೆ ಎಂದು ಬಿಬಿಎಂಪಿ ಅರಣ್ಯ ವಿಭಾಗ ಮಾಹಿತಿ ನೀಡಿದೆ.

ಸಂಗ್ರಹ ಚಿತ್ರ
ಮೇ 28ರಂದು ಕರ್ನಾಟಕಕ್ಕೆ ಮುಂಗಾರು ಆಗಮನ: ಈ ಬಾರಿ ದಾಖಲೆ ಮಳೆ ಸಾಧ್ಯತೆ..!

ಯಲಚನಹಳ್ಳಿಯಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ವಾಹನದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ವರದಿಯಾಗಿಲ್ಲ.

ಘಟನೆ ಬಳಿಕ ಅಧಿಕಾರಿಗಳು ಮರ, ಕೊಂಬೆಗಳನ್ನು ತೆರವುಗೊಳಿಸಿದರು ಮತ್ತು ರಸ್ತೆ ಬದಿಯ ಚರಂಡಿಗಳಲ್ಲಿನ ಹೂಳನ್ನು ತೆಗೆದು ನಿಂತ ನೀರನ್ನು ಚರಂಡಿಗಳಿಗೆ ತಿರುಗಿಸಿದರು.

ಎಲ್ಲೆಲ್ಲಿ ಎಷ್ಟು ಮಳೆ?

ನಗರದಲ್ಲಿ ಮಂಗಳವಾರ ರಾತ್ರಿ 10 ಗಂಟೆಯ ವೇಳೆಗೆ ಸರಾಸರಿ 29.5 ಮಿ.ಮೀ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು 4.7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬಾಣಸವಾಡಿಯಲ್ಲಿ 3.8, ಕೊಡಿಗೇಹಳ್ಳಿ 2.9, ಮಾರತ್ ಹಳ್ಳಿ 2.6, ಕಾಟನ್ ಪೇಟೆ 2.5, ಕುಶಾಲ್ ನಗರ 2.4, ಹಂಪಿನಗರ 2.3, ಚಾಮರಾಜಪೇಟೆ ಹಾಗೂ ಹೊರಮಾವಿನಲ್ಲಿ ತಲಾ 2.2, ಚೌಡೇಶ್ವರಿ 1.9, ಸಂಪಂಗಿರಾಮನಗರ, ಪುಲಕೇಶಿನಗರ ಹಾಗೂ ವಿಶ್ವೇಶ್ವರಪುರ 1.7 ಸೆಂ.ಮೀ ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com