
ಬೆಂಗಳೂರು: ಮನೆಯಿಂದ ಕೆಲಸ ಮಾಡುವ ಅವಕಾಶಗಳ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ. ಆರೋಪಿಗಳು ಬಿಹಾರ ಮತ್ತು ಉತ್ತರ ಪ್ರದೇಶದಿಂದ ಬಂದ ಗ್ಯಾಂಗ್ನ ಭಾಗವಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜನವರಿಯಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಗೃಹಿಣಿಯೊಬ್ಬರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ ಬಳಿಕ ಈ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯಿಂದ ಕೆಲಸ ಮಾಡುವ ಅವಕಾಶದ ನೆಪ ಹೇಳಿ ಐದು ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ದೂರಿನಲ್ಲಿ, ಮನೆಯಿಂದ ಕೆಲಸ ಮಾಡುವ ಅವಕಾಶದ ಆಮಿಷ ಒಡ್ಡಿ ತನ್ನ 'ಕಡಿಮೆ ಕ್ರೆಡಿಟ್ ಸ್ಕೋರ್ ಸರಿಪಡಿಸಲು' ಹಣವನ್ನು ವರ್ಗಾಯಿಸಲು ಕೇಳಲಾಗಿದೆ. ಅವರನ್ನು ನಂಬಿ, ಹಣವನ್ನು ಹಲವು ಬಾರಿ ಖಾತೆಯೊಂದಕ್ಕೆ ವರ್ಗಾಯಿಸಿರುವುದಾಗಿ ಆರೋಪಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಹಣವನ್ನು ವರ್ಗಾಯಿಸಿದ ಬ್ಯಾಂಕ್ ಖಾತೆ ಮಹಾರಾಷ್ಟ್ರದ ನವಿ ಮುಂಬೈನ 27 ವರ್ಷದ ಸೋನು ಎಂಬುವವರದಾಗಿದ್ದು, ಪೊಲೀಸರು ನೋಟಿಸ್ ನೀಡಿದ್ದಾರೆ. ತನಿಖೆಯ ನಂತರ, ಪ್ರಕರಣದ ಇಬ್ಬರು ಪ್ರಮುಖ ಶಂಕಿತರು ಎಂದು ಗುರುತಿಸಲಾದ ಉತ್ತರ ಪ್ರದೇಶದ ಸೋನು ಮತ್ತು ಹರ್ಷವರ್ಧನ್ ಓಜಾ (25) ಎಂಬುವವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋನು ಅವರನ್ನು ವಿಚಾರಣೆ ನಡೆಸಿದಾಗ, ಆತ ಗುತ್ತಿಗೆ ಕಾರ್ಮಿಕರ ಹೆಸರಿನಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ತೆರೆದು, ಪಾಸ್ಬುಕ್ಗಳು, ಎಟಿಎಂ ಕಾರ್ಡ್ಗಳು ಮತ್ತು ಸಿಮ್ ಕಾರ್ಡ್ಗಳನ್ನು ಉತ್ತರ ಪ್ರದೇಶದ ಸಹಚರರಿಗೆ ಕಳುಹಿಸಿದ್ದಾರೆ. ಇದಕ್ಕಾಗಿ ಅವರು ಪ್ರತಿ ಬ್ಯಾಂಕ್ ಖಾತೆಗೆ 1,500 ರೂ. ಕಮಿಷನ್ ಪಡೆದಿರುವುದಾಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆದರೆ ಈ ಕಮಿಷನ್ ಹಣ ಬದಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ 10 ಸಹಚರರು ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಪೊಲೀಸರು 400 ಸಿಮ್ ಕಾರ್ಡ್ಗಳು, 140 ಎಟಿಎಂ ಕಾರ್ಡ್ಗಳು, 17 ಚೆಕ್ ಪುಸ್ತಕಗಳು, 27 ಮೊಬೈಲ್ ಫೋನ್ಗಳು, 22 ಬ್ಯಾಂಕ್ ಪಾಸ್ಬುಕ್ಗಳು, ಆದಾಯ ಮತ್ತು ವೆಚ್ಚದ ಲೆಡ್ಜರ್ ಮತ್ತು 15,000 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement