
ಬೆಂಗಳೂರು: ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಕೂಡಲೇ ತೆರವುಗೊಳಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು ಗುರುವಾರ ಸೂಚನೆ ನೀಡಿದ್ದಾರೆ.
ಗುಟ್ಟಹಳ್ಳಿ ಮೇಲ್ಸೇತುವೆ ಸುತ್ತಮುತ್ತ ಗುರುವಾರ ಪರಿಶೀಲನೆ ನಡೆಸುವಾಗ ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಒಎಫ್ಸಿಗಳು ನೇತಾಡುತ್ತಿರುವುದನ್ನು ಕಂಡು ಅವರು ಈ ಸೂಚನೆ ನೀಡಿದರು.
ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಮಾಡಿರುವ ರಸ್ತೆಗಳಲ್ಲಿ ಕೇಬಲ್ಗಳನ್ನು ನೆಲದಡಿ ಅಳವಡಿಸಲು ಡಕ್ಟ್ಗಳ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆಲ ಸಂಸ್ಥೆಗಳು ರಸ್ತೆ ಬದಿ, ಪಾದಚಾರಿ ಮಾರ್ಗ, ವಿದ್ಯುತ್ ಕಂಬಗಳು ಹಾಗೂ ಮರಗಳಲ್ಲಿ ನೇತಾಡುವ ರೀತಿಯಲ್ಲಿದ್ದು, ಅದರಿಂದ ನಾಗರಿಕರಿಗೆ ಸಮಸ್ಯೆಯಾಗಲಿದೆ.
ಪಾಲಿಕೆ ಒಡೆತನದ ಖಾಲಿ ಜಾಗಗಳನ್ನು ಬಳಕೆ ಮಾಡದೇ ಇರುವಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ವ್ಯಾಪಾರ ವಲಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಪಾಲಿಕೆ ಒಡೆತನದ ವಿಶಾಲ ಜಾಗಗಳನ್ನು ಗುರುತಿಸಬೇಕು ಸೂಚಿಸಿದರು.
ಇದೇ ವೇಳೆ ರಸ್ತೆಬದಿಯ ಟ್ರಾನ್ಸ್ಫಾರ್ಮರ್ಗಳ ಸುತ್ತಲಿನ ಸ್ಥಳಗಳ ಕಳಪೆ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅವುಗಳ ಸುತ್ತಲೂ ಬೇಲಿ ಹಾಕಬೇಕು, ಬೆಸ್ಕಾಂ ಅವುಗಳನ್ನು ನಿರ್ವಹಿಸಬೇಕು ಎಂದು ನಿರ್ದೇಶಿಸಿದರು.
ಅರಮನೆ ರಸ್ತೆ, ವಸಂತನಗರದ 12ನೇ ಮುಖ್ಯರಸ್ತೆ ಹಾಗೂ ಕಂಟೋನ್ಮೆಂಟ್ ರೈಲ್ವೆ ಹಳಿ ಬಳಿ ಪಾದಚಾರಿ ಮಾರ್ಗ ನಿರ್ಮಿಸಬೇಕು. ಚರಂಡಿಯಲ್ಲಿ ತುಂಬಿರುವ ಹೂಳು ತೆಗೆದು ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು. ಗೋಡೆ, ಬ್ಯಾರಿಕೇಡ್ಗಳಿಗೆ ಅಂಟಿಸಿರುವ ಭಿತ್ತಿಪತ್ರಗಳನ್ನು ತೆರವುಗೊಳಿಸಬೇಕು.
ರಸ್ತೆ ಬದಿ ಖಾಸಗಿ ಸಂಸ್ಥೆ, ಶಾಲಾ-ಕಾಲೇಜುಗಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ, ಅಂತಹವರಿಗೆ ದಂಡ ವಿಧಿಸಬೇಕು ಎಂದು ಹೇಳಿದರು.
ನಂತರ ಮಿಲ್ಲರ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಇಡ್ಲಿ ಹಾಗೂ ಪುಲಾವ್ ಸೇವಿಸಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ ರುಚಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
Advertisement