ಕಾಡಿನಂಚಿನ ಪ್ರದೇಶದಲ್ಲಿ CCTV ಕ್ಯಾಮೆರಾ ಅಳವಡಿಸಿ, ಸ್ಥಳೀಯರಿಗೆ ಸಕಾಲಿಕ ಮಾಹಿತಿ ನೀಡಿ: ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ವನ್ಯಜೀವಿಗಳ, ವಿಶೇಷವಾಗಿ ಹುಲಿಗಳ ಚಲನವಲನಗಳ ಮೇಲೆ 24/7 ನಿಗಾ ಇಡಲು ಮತ್ತು ರೈತರು ಮತ್ತು ನಿವಾಸಿಗಳಿಗೆ ನಿಯಮಿತವಾಗಿ ಎಚ್ಚರಿಕೆ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
Eshwar Khandre
ಈಶ್ವರ್ ಖಂಡ್ರೆ
Updated on

ಬೆಂಗಳೂರು: ಕಾಡಿನಂಚಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಿ, ಸ್ಥಳೀಯರಿಗೆ ಸಕಾಲಿಕ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆಯವರು ಬುಧವಾರ ಸೂಚನೆ ನೀಡಿದ್ದಾರೆ.

ಅರಣ್ಯ ಭವನದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಡಿನಂಚಿನ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು ವನ್ಯಜೀವಿಗಳ ಚಲನವಲನಗಳ ಮೇಲ್ವಿಚಾರಣೆ ಮಾಡಲು ಡಿಜಿಟಲ್ ಡೇಟಾಬೇಸ್ ಅನ್ನು ನಿರ್ವಹಿಸಲು ನಿರ್ದೇಶನ ನೀಡಿದರು.

ವನ್ಯಜೀವಿಗಳ, ವಿಶೇಷವಾಗಿ ಹುಲಿಗಳ ಚಲನವಲನಗಳ ಮೇಲೆ 24/7 ನಿಗಾ ಇಡಲು ಮತ್ತು ರೈತರು ಮತ್ತು ನಿವಾಸಿಗಳಿಗೆ ನಿಯಮಿತವಾಗಿ ಎಚ್ಚರಿಕೆ ನೀಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಪ್ರಾಣಿಗಳ ಚಲನವಲನಗಳನ್ನು ಪತ್ತೆಹಚ್ಚಲು, ಸಕಾಲಿಕ ಎಚ್ಚರಿಕೆಗಳನ್ನು ಕಳುಹಿಸಲು ಕೃಷಿ ಭೂಮಿಗಳು ಮತ್ತು ವಸತಿ ಪ್ರದೇಶಗಳ ಬಳಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಕ್ರಮವು ರೈತರ ಬೆಳೆ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಲ್ನಡಿಗೆ ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಲು ಮತ್ತು ವನ್ಯಜೀವಿ ಚಟುವಟಿಕೆಯನ್ನು ದಾಖಲಿಸಲು ಥರ್ಮಲ್ ಕ್ಯಾಮೆರಾಗಳನ್ನು ಬಳಸಲು ಅರಣ್ಯ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಬಂಡೀಪುರ ಮತ್ತು ನಾಗರಹೊಳೆಯ ಕಾಡಿನಂಚಿನಲ್ಲಿ ಇರುವ ಗ್ರಾಮಗಳ ಪೈಕಿ ಯಾವ ಗ್ರಾಮದಲ್ಲಿ ಹೆಚ್ಚು ಸಂಘರ್ಷ ಇದೆ ಎಂಬುದನ್ನು ಗುರುತಿಸಿ, 5-6 ಕಿ.ಮೀ. ದೂರದಲ್ಲಿ ಒಂದು ಅರಣ್ಯ ಗಸ್ತು ಶಿಬಿರ ಸ್ಥಾಪಿಸಿ, ಸ್ಥಳೀಯ ಯುವಕರನ್ನೂ ನೇಮಿಸಿಕೊಂಡು ನಿಗಾ ಇಡಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಯಾವುದೇ ಗ್ರಾಮದ ಬಳಿ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿದರೆ ಕೂಡಲೇ ಅಲ್ಲಿಗೆ ಆನೆಗಳ ಸಹಿತ ರಕ್ಷಣಾ ತಂಡ ರವಾನಿಸಿ ಕಾರ್ಯಾಚರಣೆ ನಡೆಸಬೇಕು. ಹುಲಿಗಳು ಗಾಯಗೊಂಡಿದ್ದರೆ ಅಥವಾ ವಯಸ್ಸಾಗಿದ್ದರೆ ಅಂತಹ ಹುಲಿಗಳನ್ನು ಸೆರೆ ಹಿಡಿಯಲು ಕ್ರಮ ವಹಿಸಬೇಕು. ಮಾನವ-ವನ್ಯಜೀವಿ ಸಂಘರ್ಷ ಇರುವ ಕಾನನ ಪ್ರದೇಶಕ್ಕೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಿ, ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.

ಹೆಚ್ಚುತ್ತಿರುವ ವನ್ಯಜೀವಿಗಳಿಗೆ ಅನುಗುಣವಾಗಿ ಕಾನನ ಪ್ರದೇಶ ಇದೆಯೆ? ಈ ವನ್ಯಜೀವಿಧಾಮಗಳ ಪರಿಸರ ಧಾರಣಾ ಸಾಮಥ್ರ್ಯದ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ತಜ್ಞರ ತಂಡವನ್ನು ರಚಿಸಿ, ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸಮಿತಿ ಅಧ್ಯಯನ ವರದಿ ನೀಡಬೇಕು. ಆ ವರದಿ ಆಧರಿಸಿ ನಾವು ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸನ್ನಾ ಮತ್ತು ಲಂಟನಾ ಕಳೆ ವ್ಯಾಪಕವಾಗಿ ಅರಣ್ಯದಲ್ಲಿ ಬೆಳೆದಿದ್ದು, ಇದರಿಂದ ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು ಸಿಗದಂತಾಗಿದೆ. ಇದರಿಂದ ಆನೆಗಳು ಹೊರಬರುತ್ತಿವೆ. ಕಾಡಿನ ಸ್ವರೂಪವನ್ನೆ ನಾಶ ಮಾಡುತ್ತಿರುವ ಲಂಟನಾ, ಸನ್ನಾ ತೆರವಿಗೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಿ, ಬೇರೆ ರಾಜ್ಯಗಳು ಸನ್ನಾ, ಲಂಟನಾ ತೆರವಿಗೆ ಕೈಗೊಂಡಿರುವ ಕ್ರಮಗಳ ಅಧ್ಯಯನ ಮಾಡಿ, ಉತ್ತಮ ರೂಢಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

Eshwar Khandre
ಹುಲಿ ದಾಳಿಗೆ ವ್ಯಕ್ತಿ ಸಾವು: ನಾಗರಹೊಳೆ-ಬಂಡೀಪುರ ಸಫಾರಿ ಬಂದ್ ಮಾಡಿ, ಕಾರ್ಯಾಚರಣೆಗೆ ಸಿಬ್ಬಂದಿಗಳ ನಿಯೋಜಿಸಿ; ಅಧಿಕಾರಿಗಳಿಗೆ ಸಚಿವ ಖಂಡ್ರೆ ಸೂಚನೆ

ವನ್ಯಜೀವಿ ತುರ್ತು ಪರಿಸ್ಥಿತಿಗಳಿಗಾಗಿ 1926 ಗೆ ಡಯಲ್ ಮಾಡಿ

ಆನೆ, ಹುಲಿ, ಕರಡಿ, ಚಿರತೆ ಸೇರಿದಂತೆ ಯಾವುದೇ ವನ್ಯಜೀವಿ ನಾಡಿಗೆ ಬಂದರೆ, ತೋಟ, ಹೊಲ, ಗದ್ದೆಯಲ್ಲಿ ಕಾಣಿಸಿಕೊಂಡರೆ ಸ್ಥಳೀಯರು 1926ಗೆ ಕರೆ ಮಾಡಿದರೆ, ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗುತ್ತದೆ. ಈ ದೂರುಗಳಿಗೆ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಪಿಸಿಸಿಎಫ್ ಮತ್ತು ಎಪಿಸಿಸಿಎಫ್ ಗಳು ಪರಿಶೀಲಿಸಲಿದ್ದಾರೆ. ಉನ್ನತಾಧಿಕಾರಿಗಳು ನಿಗಾ ಇಡುವ ಕಾರಣ, ವಲಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಲಿದ್ದಾರೆ. ಹೀಗಾಗಿ ಹಾಲಿ ಇರುವ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com