

ಕುಷ್ಟಗಿ: ಹಣ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆಸಿದ ಕೀಚಕರು, ಆಕೆಗೆ ಮತ್ತು ಬರಿಸುವ ಪಾನೀಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾದ್ಲೂರು ಗ್ರಾಮದಲ್ಲಿ ನಡೆದಿದೆ.
ನವೆಂಬರ್ 16 ರ ಸಂಜೆ ಈ ಘಟನೆ ನಡೆದಿದ್ದು, ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಲಕ್ಷ್ಣಣ ಕೆಂಚಪ್ಪ ಕರಗುಳಿ ರೋನ್, ಬಸವರಾಜ ಸೆಕ್ರೆಪ್, ಭೀಮಪ್ಪ ಮಹದೇವಪ್ಪ ಮಸ್ಕಿ ಹನುಮಾಪುರ ಮತ್ತು ಶಾಹಿಕುಮಾರ ಮಹದೇವಪ್ಪ ಮಸ್ಕಿ ಹನುಮಾಪುರ ಎಂಬವರನ್ನು ಬಂಧಿಸಿದ್ದಾರೆ.
ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಹಣ ಸಂಗ್ರಹಿಸಲು ಹೊಸಪೇಟೆಯಿಂದ ಕುಷ್ಟಗಿಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಲಕ್ಷ್ಮಣ್, ಆರು ತಿಂಗಳಿನಿಂದ ಮಹಿಳೆಗೆ ಪರಿಚಿತನಾಗಿದ್ದು ರೂ. 5,000 ರೂ. ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಆ ಹಣವನ್ನು ಮರುಪಾವತಿಸುವುದಾಗಿ ಹೇಳಿ ಕುಷ್ಟಗಿಗೆ ಕರೆಸಿಕೊಂಡಿದ್ದ.
ಅಲ್ಲಿಂದ ಮಹಿಳೆಯನ್ನು ಇತರ ಮೂವರು ಆರೋಪಿಗಳು ಸೇರಿಕೊಂಡು ಬೈಕಿನಲ್ಲಿ ಮಾದ್ಲೂರು ಗ್ರಾಮಕ್ಕೆ ಕರೆದೊಯ್ದು ಜ್ಯೂಸ್ ಎಂದು ಮತ್ತು ಬರುವ ಪಾನೀಯ ಕುಡಿಸಿದ್ದಾರೆ. ಬಳಿಕ ಪಾಳುಬಿದ್ದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೊಪ್ಪಳ ಡಿಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement