

ಬೆಂಗಳೂರು: ಜಯನಗರದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಯಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಜಯನಗರದ 4ನೇ ಬ್ಲಾಕ್ನಲ್ಲಿರುವ ಜಿಬಿಎ ಕಚೇರಿಯಲ್ಲಿನ ಮಹಡಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಬೆಂಕಿಯ ಜ್ವಾಲೆ 2, 3, 4 ಮತ್ತು 5ನೇ ಮಹಡಿಗೆ ಹರಡಿಕೊಂಡಿದ್ದು, ಈ ವೇಳೆ ಇಬ್ಬರು ಜಿಬಿಎ ಸಿಬ್ಬಂದಿ ಲಿಫ್ಟ್ನಲ್ಲಿ ಸಿಲುಕಿ ಒದ್ದಾಡಿದ್ದರು.
ವಿಷಯ ತಿಳಿದು ಮೂರು ವಾಹನಗಳೊಂದಿಗೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊದಲು ಲಿಫ್ಟ್ನಲ್ಲಿ ಸಿಲುಕಿದವರನ್ನು ರಕ್ಷಿಸಿದರು. ನಂತರ ಸತತ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಕಾರ್ಯಾಚರಣೆಯ ಸಮಯದಲ್ಲಿ, ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿದ್ದ ಕೃಷ್ಣೇಗೌಡ, ಸಣ್ಣ ನೀರಾವರಿ ಇಲಾಖೆಯ ಉದ್ಯೋಗಿ ಅರುಣ್ ಪ್ರಸಾದ್ ಅವರನ್ನು ರಕ್ಷಣೆ ಮಾಡಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಇಬ್ಬರೂ ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.
ಘಟನೆಯ ಬೆನ್ನಲ್ಲೇ ಸ್ಥಳಕ್ಕೆ ಮುಖ್ಯ ಆಯುಕ್ತ ಮಹೇಶ್ವರರಾವ್, ಆಯುಕ್ತ ಕೆ.ಎನ್. ರಮೇಶ್ ಹಾಗೂ ಅಪರ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ಸಮಯದಲ್ಲಿ ಕಟ್ಟಡಕ್ಕೆ ಹಾಗೂ ಕಚೇರಿಗಳಿಗೆ ಯಾವುದೇ ಹಾನಿಯಾಗಿರುವುದು ಕಂಡುಬಂದಿರುವುದಿಲ್ಲ. ಆದರೆ, ವಿದ್ಯುತ್ ಅವಘಡದಿಂದ ಎಲೆಕ್ಷಿ ಕಲ್ ಡಕ್ಟ್ ಹಾನಿಯಾಗಿದೆ. ಕಟ್ಟಡ ದುರಸ್ತಿಗೊಳಿಸಲು ಕಟ್ಟಡದಲ್ಲಿನ ಎಲ್ಲಾ ಮಳಿಗೆ ಹಾಗೂ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಜಿಬಿಎ ಮುಖ್ಯ ಆಯುಕ್ತರು ವಿದ್ಯುತ್ ಅವಘಡಕ್ಕೆ ನಿಖರ ಕಾರಣವನ್ನು ತಿಳಿಯುವ ಸಂಬಂಧ ತನಿಖೆ ನಡೆಸಿ, ವರದಿ ನೀಡಲು ದಕ್ಷಿಣ ನಗರ ಪಾಲಿಕೆ, ಬೆಸ್ಕಾಂ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳ ಒಂದು ತಂಡವನ್ನು ರಚಿಸಿದ್ದಾರೆ.
ಪಾಲಿಕೆ ಅಧಿಕಾರಿಗಳು ಸ್ಥಳದಲ್ಲೇ ಉಳಿದುಕೊಂಡಿದ್ದು, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ, ಇಡೀ ಕಟ್ಟಡದ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ. ಕಟ್ಟಡದ ವಿದ್ಯುತ್ ಮಾರ್ಗಗಳ ಸಂಪೂರ್ಣ ಪರಿಶೀಲನೆ ಮತ್ತು ದುರಸ್ತಿಗಾಗಿ ಸಂಕೀರ್ಣದೊಳಗಿನ ಎಲ್ಲಾ ಅಂಗಡಿಗಳು ಮತ್ತು ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಬೆಂಗಳೂರು ದಕ್ಷಿಣ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement