ಮರಳು ಮಾಫಿಯಾ ವಿರುದ್ಧ ಸಿಡಿದೆದ್ದ ಸಿಎಂ ಸಲಹೆಗಾರ: ದಂಧೆಕೋರರಿಗೆ ಅಧಿಕಾರಿಗಳೇ ಸಾಥ್; ಕ್ರಮಕ್ಕೆ ಬಸವರಾಜ ರಾಯರೆಡ್ಡಿ ಆಗ್ರಹ

ನಿರ್ಮಾಣದಲ್ಲಿ ಬಳಸುವ ಮರಳಿಗೆ ಮನೆಮಾಲೀಕರು ನೇರವಾಗಿ ಸರ್ಕಾರಕ್ಕೆ ರಾಯಧನ ಪಾವತಿಸುವ ಸರಳ, ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ಮೂಲಕ ಮಧ್ಯವರ್ತಿಗಳು ಮತ್ತು ಮಾಫಿಯಾವನ್ನು ಕೊನೆಗೊಳಿಸಬೇಕು.
Basavaraj Rayareddy-Siddaramaiah
ಬಸವರಾಜ ರಾಯರೆಡ್ಡಿ-ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಸಿಡಿದೆದ್ದಿದ್ದು, ದಂಧೆಕೋರರಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ. ಇದರಿಂದ ರಾಜ್ಯದ 400 ಕೋಟಿ ರೂ.ಗಳಿಗೂ ಹೆಚ್ಚು ರಾಯಧನವನ್ನು ದೋಚುತ್ತಿದ್ದಾರೆಂದು ಆರೋಪಿಸಿದ್ದಾರೆ.

ಈ ಕುರಿತು ಬಸವರಾಜ ರಾಯರೆಡ್ಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬಹರೆದಿದ್ದು, ಮರಳು ಮಾಫಿಯಾ ನಡೆಯುತ್ತಿರುವವರು ಹಾಗೂ ಅವರಿಗೆ ಸಾಥ್ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಭ್ರಷ್ಟ ಅಧಿಕಾರಿಗಳು ಮತ್ತು ಮರಳು ಮಾಫಿಯಾ ದಂಧೆಕೋರರು ಇಬ್ಬರೂ ಕೈಜೋಡಿಸಿ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ. ನಾವು ಆದಾಯ ತೆರಿಗೆ ಮತ್ತು ಜಿಎಸ್‌ಟಿಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಾಧ್ಯವಾಗುತ್ತಿರುವುದಾದರೆ, ಮರಳಿನ ಮೇಲೆ ರಾಯಧನವನ್ನೇಕೆ ವಸೂಲಿ ಮಾಡಬಾರದು.

ನಿರ್ಮಾಣದಲ್ಲಿ ಬಳಸುವ ಮರಳಿಗೆ ಮನೆಮಾಲೀಕರು ನೇರವಾಗಿ ಸರ್ಕಾರಕ್ಕೆ ರಾಯಧನ ಪಾವತಿಸುವ ಸರಳ, ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ಮೂಲಕ ಮಧ್ಯವರ್ತಿಗಳು ಮತ್ತು ಮಾಫಿಯಾವನ್ನು ಕೊನೆಗೊಳಿಸಬೇಕೆಂದು ಹೇಳಿದ್ದಾರೆ.

ತುಂಗಭದ್ರಾ ನದಿಯಿಂದ ಸುಮಾರು 85 ಕಿಲೋಮೀಟರ್ ದೂರದ ಪ್ರದೇಶಗಳಲ್ಲಿ ಪ್ರತಿದಿನ 100 ರಿಂದ 150 ಟ್ರಕ್ ಮರಳು ಮತ್ತು ಜಲ್ಲಿಕಲ್ಲು ಅಕ್ರಮವಾಗಿ ಸಾಗಾಟವಾಗುತ್ತಿದೆ. ಸುಮಾರು 200 ಕ್ಕೂ ಹೆಚ್ಚು ಜನರು ಈ ಅಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮವನ್ನು ನಿಯಂತ್ರಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆನ್ನೆಲುಬಾಗಿದ್ದಾರೆ.

Basavaraj Rayareddy-Siddaramaiah
ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಬೆದರಿಕೆ, ನಿಂದನೆ: ಮೂವರ ಬಂಧನ

ಇಲಾಖೆಯ ಕೆಲ ಅಧಿಕಾರಿಗಳು 12–13 ವರ್ಷಗಳಿಂದ ಇದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಿಂದ ಸರ್ಕಾರದ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ 10ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿ ಕ್ರಮ ಕೈಗೊಳ್ಳಬೇಕು. ಕಾನೂನು ಅರಿವು ಇಲ್ಲದೇ ಕೆಳ ಹಂತದ ಅಧಿಕಾರಿಗಳ ಮಾತಿನಂತೆ ಅಕ್ರಮ ದಂಧೆಗೆ ಸಹಕರಿಸುತ್ತಿರುವ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಸೇರಿ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಆರೋಪ ಕೇಳಿ ಬಂದ ಬೆನ್ನಲ್ಲೇ ಮಾಜಿ ವಸತಿ ಸಚಿವ ಮತ್ತು ಯೆಲ್ಬುರ್ಗಾ ಶಾಸಕರು ಮರಳು ಮಾಫಿಯಾ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ, ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ದೂರು ನೀಡಲಾಗುವುದು ಎಂದು ಹೇಳಿದ್ದಾರೆ.

ಸಚಿವ ಮಲ್ಲಿಕಾರ್ಜುನ್ ಅವರು ಮಾತನಾಡಿ, ಇತರ ವಲಯಗಳಿಗೆ ನಾವು ಹೊಂದಿರುವಂತೆ ಮರಳಿಗೂ ಒಂದು ಕಾರ್ಯತಂತ್ರವನ್ನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕ ಅಸೋಸಿಯೇಷನ್ ​​ಫಾರ್ ಕ್ವಾರಿಸ್ ಅಂಡ್ ಕ್ರಷರ್ಸ್‌ನ ರವೀಂದ್ರ ಶೆಟ್ಟಿ ಅವರು ಮಾತನಾಡಿ, ಆಗಿನ ಅಧ್ಯಕ್ಷ ಮತ್ತು ಪ್ರಸ್ತುತ ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಕೂಡ ಬಿಜೆಪಿ ಆಡಳಿತದಲ್ಲಿ ಅಕ್ರಮ ಮರಳು, ಲ್ಯಾಟರೈಟ್ ಮತ್ತು ಕಲ್ಲು ಗಣಿಗಾರಿಕೆಯಿಂದ ರಾಜ್ಯಕ್ಕೆ 18,000-20,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com