ರಸ್ತೆ ದುರಸ್ತಿ ಕಾರ್ಯಗಳ ಕೈಗೆತ್ತಿಕೊಳ್ಳಿ: ಅಧಿಕಾರಿಗಳಿಗೆ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ
ಬೆಂಗಳೂರು: ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವುದು ಮತ್ತು ಹಾನಿಯನ್ನು ಸರಿಪಡಿಸುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದ್ದು, ಶೀಘ್ರಗತಿಯಲ್ಲಿ ರಸ್ತೆ ದುರಸ್ತಿ ಕಾರ್ಯಗಳ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಸೋಮವಾರ ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ನಗರದಲ್ಲಿ 694 ಕೋಟಿ ರೂ.ವೆಚ್ಚದಲ್ಲಿ 349 ಕಿ.ಮೀ. ಉದ್ದದ 182 ರಸ್ತೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವ ಕಡೆ ರಸ್ತೆ ಮೇಲೆ ನೀರು ನಿಲ್ಲದಂತೆ ಡಾಂಬರೀಕರಣ ಮಾಡಬೇಕು. ಡಾಂಬರೀಕರಣ ಕಾಮಗಾರಿಯನ್ನು ನವೆಂಬರ್ನೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
401 ಕಿ.ಮೀ. ಉದ್ದದ 178 ರಸ್ತೆಗಳು ದೋಷಮುಕ್ತ ಅವಧಿಯಲ್ಲಿದ್ದು (ಡಿ.ಎಲ್.ಪಿ), ಆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿ, ಮೇಲ್ಮೈ ಪದರ ಹಾಳಾಗಿದ್ದರೆ ಗುತ್ತಿಗೆದಾರರೇ ಅದನ್ನು ದುರಸ್ತಿಪಡಿಸಬೇಕು. ಕಾಲಮಿತಿಯಲ್ಲಿ ಗುಂಡಿ ಮುಚ್ಚದಿದ್ದರೆ ಪಾಲಿಕೆಯಿಂದಲೇ ಅದನ್ನು ಮುಚ್ಚಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಕಟಾವು ಮಾಡಿಕೊಳ್ಳಬೇಕು ಎಂದು ಹೇಳಿದರು.
552 ಕಿ.ಮೀ ಉದ್ದದ 188 ರಸ್ತೆಗಳು ಡಿಎಲ್ಪಿ ಅವಧಿ ಪೂರ್ಣಗೊಂಡಿದ್ದು, ಅದರಲ್ಲಿ 435 ಕಿ.ಮೀ ಉದ್ದದ 126 ರಸ್ತೆಗಳು ಸುಸ್ಥಿತಿಯಲ್ಲಿವೆ. ಉಳಿದ 116 ಕಿ.ಮೀ. ಉದ್ದದ 62 ರಸ್ತೆಗಳಲ್ಲಿ ಆಯಾ ಪಾಲಿಕೆಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು. ರಸ್ತೆಗಳು ಸುಸ್ಥಿತಿಯಲ್ಲಿರಬೇಕು. ಈ ಸಂಬಂಧ ಆಯಾ ನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜೊತೆ ಸಭೆ ಏರ್ಪಡಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ನಗರದಲ್ಲಿ 46 ಕಿ.ಮೀ. ಉದ್ದದ 11 ಹೈಡೆನ್ಸಿಟಿ ಕಾರಿಡಾರ್ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ