

ಕಲಬುರಗಿ: ಸರ್ಕಾರಿ ಶಾಲಾ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹಂತಕರು ಶವವನ್ನು ಸುಟ್ಟುಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ನಡೆದಿದೆ.
ಜ್ಯೋತಿ ಕಪಾಳೆ ಹಿರೇಮಠ (57) ಕೊಲೆಯಾದ ಸರ್ಕಾರಿ ಶಾಲಾ ಶಿಕ್ಷಕಿ. ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿರುವ ಜ್ಯೋತಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಬೀದರ್ನಲ್ಲೇ ಮನೆ ಮಾಡಿ ಶಾಲೆಗೆ ಹೋಗಿಬರುತ್ತಿದ್ದ ಜ್ಯೋತಿ ವಾರಕ್ಕೊಂದು ಬಾರಿ ಕಲಬುರಗಿಗೆ ಬಂದು ವಾಪಸ್ ತೆರಳುತ್ತಿದ್ದರು. ಕಲಬುರಗಿಯಿಂದ ಬೀದರ್ ತೇರಳುವಾಗ ಮಾರ್ಗ ಮಧ್ಯದ ಕಮಲಾಪುರದ ಕಲ್ಮೂಡನಲ್ಲಿ ಜ್ಯೋತಿಯನ್ನು ಕೊಲೆಗೈದ ದುಷ್ಕರ್ಮಿಗಳು ರಸ್ತೆ ಪಕ್ಕದಲ್ಲಿ ಐದು ಲೀಟರ್ ಪೆಟ್ರೋಲ್ ಹಾಕಿ ಶವವನ್ನು ಸುಟ್ಟು ಹಾಕಿದ್ದಾರೆ.
ಆರಂಭದಲ್ಲಿ, ಕಲ್ಮೋಡ್ನ ಮನೋಹರ್ ಚಕ್ರಕರ್ ಅವರ ದೂರಿನ ಆಧಾರದ ಮೇಲೆ ಅಪರಿಚಿತ ಮಹಿಳೆಯ ಕೊಲೆ ಎಂದು ದಾಖಲಿಸಲಾಗಿತ್ತು. ನಂತರ ಅವರ ಗುರುತು ಪತ್ತೆಯಾಗಿದೆ.
ಆರೋಪಿಗಳಿಗಾಗಿ ಹುಡುಕಾಟ ಆರಂಭವಾಗಿದೆ ಮತ್ತು ಅವರನ್ನು ಬಂಧಿಸಿದ ನಂತರ, ಅಪರಾಧದ ಹಿಂದಿನ ಉದ್ದೇಶ ತಿಳಿಯುತ್ತದೆ ಎಂದು ಕಲಬುರಗಿ ಎಸ್ಪಿ ಪಿ ಅಡ್ಡೂರು ಶ್ರೀನಿವಾಸಲು ಹೇಳಿದರು.
Advertisement