

ಬೆಂಗಳೂರು: ಮಹಿಳಾ ಮೀಸಲಾತಿ ಕಾಯ್ದೆ ಅನುಷ್ಠಾನ ಕುರಿತು ಚರ್ಚಿಸಲು ಏ. 15 ರಂದು ಕಾಂಗ್ರೆಸ್ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಎಲ್ಲ ಪಾಲುದಾರರೊಂದಿಗೆ ಸಮಗ್ರ ಸಮಾಲೋಚನೆ ನಡೆಸಲು ಸಿದ್ಧವಾಗಿಲ್ಲ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಾಯ್ದೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದರೆ ಅದರ ವ್ಯಾಪಕ ರಾಷ್ಟ್ರೀಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನದ ಬಗ್ಗೆ ವ್ಯಾಪಕ ಚರ್ಚೆಯ ಅಗತ್ತವಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಸಭೆ ಕರೆದಿದೆ. ಕಿರಣ್ ರಿಜಿಜು ಅಥವಾ ಪ್ರಧಾನಿ ನನಗೆ ಬರೆದ ಪತ್ರಕ್ಕೆ ನಾನು ಈಗಾಗಲೇ ಉತ್ತರಿಸಿದ್ದೇನೆ ಎಂದು ಖರ್ಗೆ ಹೇಳಿದರು.
ಕೇಂದ್ರ ಸರ್ಕಾರ ಎಲ್ಲಾ ಪಕ್ಷಗಳನ್ನು ಕರೆದು ಚರ್ಚೆಗೆ ಅವಕಾಶ ನೀಡಿದರೆ, ನಾವು ಭಾಗವಹಿಸಿ ನಮ್ಮ ಸಲಹೆಗಳನ್ನು ನೀಡಬಹುದು. ಆದರೆ ಅವರು ಸರ್ವಪಕ್ಷ ಸಭೆ ಕರೆಯಲು ಸಿದ್ಧರಿಲ್ಲ. ಅದಕ್ಕಾಗಿಯೇ ನಾವು ಮತ್ತೊಮ್ಮೆ ಏಪ್ರಿಲ್ 15 ರಂದು ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯುತ್ತೇವೆ. ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರವನ್ನು ತಿಳಿಸುತ್ತೇವೆ ಎಂದರು.
ನಾರಿ ಶಕ್ತಿ ವಂದನ್ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಕಾಯ್ದೆಯನ್ನು ನಾವು ಯಾರೂ ವಿರೋಧಿಸುವುದಿಲ್ಲ. ಈಗಾಗಲೇ ನಾವು ಅದನ್ನು ಬೆಂಬಲಿಸಿದ್ದೇವೆ. ಬಿಜೆಪಿಯವರು ಕೇವಲ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಯಾವಾಗಲೂ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಬೆಂಬಲಿಸುತ್ತದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಹಳ ಹಿಂದೆಯೇ ಇದನ್ನು ಪ್ರಸ್ತಾಪಿಸಿದ್ದರು. ನಾವು ಇದನ್ನು ಈಗಾಗಲೇ ಪಂಚಾಯತ್ಗಳು, ಜಿಲ್ಲಾ ಪಂಚಾಯತ್ಗಳು ಮತ್ತು ಕಾರ್ಪೊರೇಷನ್ಗಳಲ್ಲಿಯೂ ಜಾರಿಗೆ ತಂದಿದ್ದೇವೆ. ಆದ್ದರಿಂದ ನಮಗೆ ಪಾಠ ಕಲಿಸುವ ಅಗತ್ಯವಿಲ್ಲ." ಅಂತಹ ಮಹತ್ವದ ನಿರ್ಧಾರಗಳಿಗೆ ಸಾಮೂಹಿಕ ಚರ್ಚೆಯ ಅಗತ್ಯವಿದೆ ಎಂದು ಅವರು ಹೇಳಿದರು.
ದೇಶಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಂಡಾಗ ಅದು ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಕಾಯ್ದೆಯನ್ನು ಈಗಾಗಲೇ ಅಂಗೀಕರಿಸಿರುವುದರಿಂದ, ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದನ್ನು ನಿರ್ಧರಿಸಲು ಎಲ್ಲಾ ಪಕ್ಷಗಳನ್ನು ಒಟ್ಟಿಗೆ ಕರೆಯಬೇಕು ಎಂದು ಅವರು ಹೇಳಿದರು. ಮಹಿಳಾ ಮೀಸಲಾತಿ ಕಾಯ್ದೆ ಕುರಿತು ಚರ್ಚಿಸಲು ಇದೇ 16ರಿಂದ 18ರವರೆಗೂ ಸಂಸತ್ತಿನ ಬಜೆಟ್ ಅಧಿವೇಶವನ್ನು ವಿಸ್ತರಿಸಲಾಗಿದೆ.
Advertisement