

ಬೆಂಗಳೂರು: ನ್ಯಾಯಾಂಗದಲ್ಲಿ ತಂತ್ರಜ್ಞಾನದ ಅಳವಡಿಕೆಯು ಅದರ ಮಿತಿಗಳ ಸ್ಪಷ್ಟ ಮತ್ತು ಪ್ರಜ್ಞಾಪೂರ್ವಕ ತಿಳುವಳಿಕೆಯೊಂದಿಗೆ ಇರಬೇಕು ಎಂದು ಶನಿವಾರ ಎಚ್ಚರಿಕೆ ನೀಡಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ , AI ಬಗ್ಗೆ "ಭಯಪಡಬಾರದು" ಎಂದು ನ್ಯಾಯಾಂಗ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಂತ್ರಜ್ಞಾನವು ಪರ್ಯಾಯವಾಗಿರದೆ, ನೆರವಾಗಿ ಉಳಿಯಬೇಕು ಎಂದು ಪ್ರತಿಪಾದಿಸಿದ ಅವರು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಸಮತೋಲನ ತತ್ವದಿಂದ ಮಾರ್ಗದರ್ಶಿಸಲ್ಪಡಬೇಕು. ನ್ಯಾಯಾಂಗದಲ್ಲಿ ಮಾನವ ಬುದ್ಧಿಶಕ್ತಿ, ಅನುಭವ ಮತ್ತು ಸಾಂವಿಧಾನಿಕ ಆತ್ಮಸಾಕ್ಷಿಯನ್ನು ಸ್ಥಿರವಾಗಿ ಸಂರಕ್ಷಿಸುವಾಗ ದಕ್ಷತೆಯನ್ನು ಹೆಚ್ಚಿಸಲು ಅದರ ಪ್ರಯೋಜನಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ಆಯೋಜಿಸಿದ್ದ 'ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನ್ಯಾಯಾಂಗವನ್ನು ಮರುರೂಪಿಸುವುದು' ಎಂಬ ವಿಷಯದ ಕುರಿತು 22 ನೇ ದ್ವೈವಾರ್ಷಿಕ ರಾಜ್ಯ ಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ, AI ಬಗ್ಗೆ ಭಯಪಡಬಾರದು ಎಂದು ಹೇಳಲು ಬಯಸುತ್ತೇನೆ ಎಂದರು.
ಬಹಳ ಸಂಕೀರ್ಣವಾದ ಸಂಗತಿಗಳು ಮತ್ತು ಕಾನೂನಿನ ಪ್ರಶ್ನೆಗಳನ್ನು ಒಳಗೊಂಡಿರುವ ಪ್ರಕರಣವನ್ನು ನಿಮ್ಮ ಮುಂದೆ ಇರಿಸಿದಾಗ ನೀವು ಏನು ಮಾಡುತ್ತೀರಿ? ಹೆಚ್ಚು ಯೋಚಿಸುತ್ತೀರಿ, ಹೆಚ್ಚು ಸಮಯ ಕಳೆಯುತ್ತೀರಿ, ಹೆಚ್ಚಿನ ತಾಳ್ಮೆ ತೆಗೆದುಕೊಳ್ಳುತ್ತೀರಿ ಮತ್ತು ಅಂತಹ ಪ್ರಕರಣವನ್ನು ನಿರ್ಧರಿಸಿದಾಗ ನೀವು ತೃಪ್ತಿಯ ಭಾವನೆಯನ್ನು ಅನುಭವಿಸುತ್ತೀರಿ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು.
AI ಪರಿಕರಗಳನ್ನು ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ಬಳಸಲು ಪ್ರಾರಂಭಿಸಿದಾಗ ನಿಮ್ಮೊಳಗಿನ ನ್ಯಾಯಾಧೀಶರು ಸ್ವತಂತ್ರರಾಗಿ ಉಳಿಯುತ್ತಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ಅರವಿಂದ್ ಕುಮಾರ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
"ನಮ್ಮ ಸಾಧನ ಸಲಕರಣೆಗಳು ಮತ್ತು ವಿಧಾನಗಳು ಬೆಳವಣಿಗೆ ಹೊಂದಿದರೂ ನ್ಯಾಯಯುತ, ಸುಲಭವಾಗಿ ಸಿಗುವ ಮತ್ತು ಮಾನವೀಯ ನ್ಯಾಯವನ್ನು ತಲುಪಿಸುವುದು ನಮ್ಮ ಮೂಲಭೂತ ಜವಾಬ್ದಾರಿಯಾಗಿದೆ. ಒಂದು ಸಂಸ್ಥೆಯ ಜೀವನದಲ್ಲಿ ಆತ್ಮಾವಲೋಕನ ಅನಿವಾರ್ಯವಾಗುವ ಕ್ಷಣಗಳಿವೆ ಎಂದು ಒತ್ತಿ ಹೇಳಿದ ಸಿಜೆಐ, ಭಾರತೀಯ ನ್ಯಾಯಾಂಗಕ್ಕೆ ವಿರಾಮ ಮತ್ತು ಆತ್ಮಾವಲೋಕನ ಮಾಡುವ ಸಮಯ ಬಂದಿದೆ. ವಿರಾಮದ ಸಮಯ ಎಂಬುದು ಹಿಂಜರಿಕೆಯಿಂದ ಬರುವುದಲ್ಲ, ಜವಾಬ್ದಾರಿಯಿಂದ ಬರುವಂತಹದ್ದು ಎಂದರು.
Advertisement