

ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪಿಯೋರ್ವ ತನಗೆ ನ್ಯಾಯಬೇಕು ಎಂದು ಆಗ್ರಹಿಸಿ 9 ಅಂತಸ್ತಿನ ಕಟ್ಟಡ ಏರಿ ಆತ್ಮಹತ್ಯೆ ಮಾಡಿಕೊಳ್ಳವು ಬೆದರಿಕೆ ಹಾಕಿದ ಘಟನೆ ಬೆಂಗಳೂರ ದೇವನಹಳ್ಳಿಯಲ್ಲಿ ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ಬೈಪಾಸ್ ರಸ್ತೆಯ ಬಳಿ ಇರುವ ಖಾಸಗಿ ಅಪಾರ್ಟ್ಮೆಂಟ್ನ 9ನೇ ಮಹಡಿ ಏರಿದ ಯುವಕ ಆತ್ಮಹತ್ಯೆ ಮಾಡಿಕೊಳ್ಳವ ಬೆದರಿಕೆ ಹಾಕಿ ದೊಡ್ಡ ಹೈಡ್ರಾಮಾವನ್ನೇ ಸೃಷ್ಟಿಸಿದ್ದ. ಯುವಕನ ಈ ಹುಚ್ಚಾಟ ಪೊಲೀಸರು ಹಾಗೂ ಸಾರ್ವಜನಿಕರನ ಆತಂಕಕ್ಕೆ ಕಾರಣವಾಗಿತ್ತು.
'ನಾನೇನು ತಪ್ಪು ಮಾಡಿಲ್ಲ.. ನನಗೆ ನ್ಯಾಯ ಬೇಕು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲೇಬೇಕು. ನನ್ನ ಸಮಸ್ಯೆ ಈಡೇರಿಸಬೇಕು ಎಂದು ಪಟ್ಟು ಹಿಡಿದ ಯುವಕ ಬಹುಮಹಡಿ ಕಟ್ಟಡ ಏರಿ ಆತ್ಮಹತ್ಯೆ ಬೆದರಿಕೆ ಹಾಕಿದ್ದ.
ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿ ಆನಂದ್ ಎಂಬುವನೇ ಈ ಹೈಡ್ರಾಮಾ ಮಾಡಿದ ಭೂಪ.
ಕಳೆದ ನಾಲ್ಕು ವರ್ಷಗಳಿಂದ ಪೋಕ್ಸೋ (POCSO) ಪ್ರಕರಣವೊಂದರಲ್ಲಿ ಸಿಲುಕಿ ಜೈಲು ಶಿಕ್ಷೆ ಅನುಭವಿಸಿದ್ದ ಈತ, ತನಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನ್ಯಾಯ ಸಿಗಬೇಕಾದರೆ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ಕಟ್ಟಡದ ಮೇಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ.
ಪೊಲೀಸರೇ ಬೇಸ್ತು!
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ದೇವನಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಯುವಕನನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟರು. ಸ್ಥಳಕ್ಕೆ ಯುವಕನ ತಾಯಿಯನ್ನು ಕರೆಸಿ ಮನವೊಲಿಸಲು ಪ್ರಯತ್ನಿಸಲಾಯಿತು.
'ಕೆಳಗೆ ಇಳಿದು ಬಾ ಮಗನೇ' ಎಂದು ತಾಯಿ ಕಣ್ಣೀರು ಹಾಕುತ್ತಾ ಎಷ್ಟೇ ವಿನಂತಿಸಿದರೂ, ಆನಂದ್ ಮಾತ್ರ ತನ್ನ ಪಟ್ಟಿನಿಂದ ಹಿಂದೆ ಸರಿಯಲಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಸುಮಾರು ಗಂಟೆಗಳ ಕಾಲ ನಡೆದ ಈ ಹೈಡ್ರಾಮಾದಿಂದಾಗಿ ಅಪಾರ್ಟ್ಮೆಂಟ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಸೇರಿದ ನೂರಾರು ಜನರು ಯುವಕನ ಈ ನಡೆಯನ್ನು ಆತಂಕದಿಂದ ಗಮನಿಸುತ್ತಿದ್ದರು.
3 ಗಂಟೆಗಳ ಹೈಡ್ರಾಮಾ ಕೊನೆಗೂ ಅಂತ್ಯ
ಸತತ ಮೂರು ಗಂಟೆಗಳ ಕಾಲ ಕೆಳಗಿಳಿಯದ ಸತಾಯಿಸಿದ ಯುವಕ ಕೊನೆಗೂ ಅಧಿಕಾರಿಗಳ ಮನವೊಲಿಕೆ ಬಳಿಕ ಸಮಾಧಾನಗೊಂಡು ಕೆಳಗೆ ಇಳಿದಿದ್ದಾನೆ. ಪ್ರಸ್ತುತ ಪೊಲೀಸರು ಈ ಯುವಕನ ಪ್ರಕರಣದ ಕುರಿತು ಮಾಹಿತಿ ಕಲೆಹಾಕಿದ್ದಾರೆ.
Advertisement